'ಗುಟ್ಟು ರಟ್ಟಾಯ್ತು, ಮೋದಿ ಭೇಟಿಗೆ ದೀದಿ ತುದಿಗಾಲಲ್ಲಿ ನಿಂತಿರೋದೇಕೆ?'
ಕೊಲ್ಕತ್ತಾ, ಸೆಪ್ಟೆಂಬರ್ 17: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದು, ಬದ್ಧ ವಿರೋಧಿಗಳ ಭೇಟಿ ಕುತೂಹಲ ಕೆರಳಿಸಿದೆ.
ಕಳೆದ ವಾರವೇ ಪ್ರಧಾನಿ ಮೋದಿ ಕಾರ್ಯಾಲಯಕ್ಕೆ ಫೋನಾಯಿಸಿದ್ದ ಮಮತಾ ಬಾನರ್ಜಿ ಪ್ರಧಾನಿಗಳ ಅಪಾಯಿಂಟ್ ಮೆಂಟ್ ತೆಗೆದುಕೊಂಡಿದ್ದರು. ಬುಧವಾರ ನವದೆಹಲಿಯಲ್ಲಿ ದೀದಿ ಮೊದಿ ಭೇಟಿಯಾಗಲಿದ್ದು, ಈ ಭೇಟಿಯ ಕುರಿತು ಬಿಜೆಪಿ ತೀವ್ರ ಟೀಕೆ ಮಾಡಿದೆ.
ಕಟ್ಟರ್ ವಿರೋಧಿ ಬಿಜೆಪಿ ಬೆಂಬಲಕ್ಕೆ ನಿಂತರೇ ಮಮತಾ ಬ್ಯಾನರ್ಜಿ?
ಮಮತಾ ಬ್ಯಾನರ್ಜಿ ಅವರು ಮೋದಿಯವರನ್ನು ಭೇಟಿ ಮಾಡುತ್ತಿರುವುದೇಕೆ ಎಂಬ ಗುಟ್ಟು ರಟ್ಟಾಗಿದೆ ಎಂದು ಅದು ಲೇವಡಿ ಮಾಡಿದೆ.
ಗುಟ್ಟು ರಟ್ಟಾಯ್ತು
"ಅವಕಾಶವಾದಿ ರಾಜಕಾರಣಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ. ಮೋದಿಯವರನ್ನು ಮಮತಾ ಬ್ಯಾನರ್ಜಿ ಭೇಟಿಯಾಗುತ್ತಿರುವುದೇಕೆ ಎಂಬುದು ಗುಟ್ಟಾಗಿ ಉಳಿದಿಲ್ಲ. ತಮ್ಮನ್ನು ತಾವು ಸಿಬಿಐ ಬಲೆಯಿಂದ ತಪ್ಪಿಸಿಕೊಳ್ಳಲು ಮಮತಾ ಬ್ಯಾನರ್ಜಿ ಮೋದಿಯವರನ್ನು ಭೇಟಿ ಮಾಡುತ್ತಿದ್ದಾರೆ" ಎಂದು ಬಿಜೆಪಿ ನಾಯಕರು ಲೇವಡಿ ಮಾಡಿದ್ದಾರೆ.
ಬುಧವಾರ ಮೋದಿ-ದೀದಿ ಭೇಟಿ
ಪ್ರಧಾನಿಯವರ ಸಮಯ ಕೇಳಿರುವ ದೀದಿ, ಭೇಟಿಗೆ ಕಾರಣವೇನು ಎಂಬುದನ್ನು ತಿಳಿಸಿಲ್ಲ. ಮಂಗಳವಾರ ಸಂಜೆಯೇ ದೆಹಲಿಗೆ ಹೊರಡಲಿರುವ ದೀದಿ, ಬುಧವಾರ ಬೆಳಿಗ್ಗೆ ಮೋದಿಯವರನ್ನು ಭೇಟಿಯಾಗಲಿದ್ದಾರೆ. ಪಿ.ಚಿದಂಬರಂ, ಡಿ.ಕೆ.ಶಿವಕುಮಾರ್ ಸೇರಿದಂತೆ ಘಟಾನುಘಟಿಗಳು ಸಿಬಿಐ, ಇ.ಡಿ. ವಿಚಾರಣೆಗೊಳಪಟ್ಟ ನಂತರ ಮಮತಾ ಬ್ಯಾನರ್ಜಿ ಅವರಿಗೂ ಭಯ ಆರಂಭವಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಮೋದಿ ಸರ್ಕಾರಕ್ಕೆ ಸೆಡ್ಡು ಹೊಡೆದು ನಿಂತ ಮಮತಾ ಬ್ಯಾನರ್ಜಿ
ಹಿಂದಿ ದಿವಸಕ್ಕೆ ಬೆಂಬಲ
ಗೃಹಸಚಿವ ಅಮಿತ್ ಶಾ ಹಿಂದಿ ದಿವಸದಂದು, ಒಂದು ದೇಶ, ಒಂದೇ ಭಾಷೆ ಎಂಬ ಪರಿಕಲ್ಪನೆಯ ಬಗ್ಗೆ ಮಾತನಾಡಿದ್ದನ್ನು ಹಲವು ರಾಜ್ಯಗಳು ವಿರೊಧಿಸಿದ್ದರೆ, ಮಮತಾ ಬ್ಯಾನರ್ಜಿ ಅವರು ಮಾತ್ರ 'ಹಿಂದಿ ದಿವಸ'ಕ್ಕೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದರು. ಈ ಮೂಲಕ ಕೇಂದ್ರ ಸರ್ಕಾರದ ನಿಲುವಿಗೆ ಬೆಂಬಲ ಸೂಚಿಸಿದ್ದರು.
ಹಾವು-ಮುಂಗುಸಿಯಾಗಿದ್ದ ಮೋದಿ-ದೀದಿ
ಲೋಕಸಭೆ ಚುನಾವಣೆಗೂ ಮುನ್ನ ಮಮತಾ ಬ್ಯಾನರ್ಜಿ ಅವರು ಹಲವು ಬಾರಿ ಪ್ರಧಾನಿ ಮೋದಿ ಅವರನ್ನು ಟೀಕಿಸಿದ್ದರು, ಅದಕ್ಕೆ ಮೋದಿಯವರೂ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ಈ ಬಾರಿ ದಸರಾಕ್ಕೆ ನಿಮಗೆ ಕಲ್ಲು-ಮಣ್ಣಿನ ಸ್ವೀಟ್ ಕಳಿಸುತ್ತೇನೆ ಎಂದು ದೀದಿ ಹೇಳಿದರೆ, ಬಂಗಾಳದ ಕಲ್ಲು, ಮಣ್ಣೂ ಸಿಹಿಯಾಗಿರುತ್ತದೆ ಎಂದು ಮೋದಿ ಕಿಚಾಯಿಸಿದ್ದರು. ನರೇಂದ್ರ ಮೋದಿ ಅವರನ್ನು ನಾನೆಂದಿಗೂ ಪ್ರಧಾನಿ ಎಂದು ಒಪ್ಪುವುದಿಲ್ಲ, ಅವರಿಗೆ ಪ್ರಜಾಪ್ರಭುತ್ವದ ಕಪಾಳಮೋಕ್ಷ ಕೊಡುತ್ತೇನೆ ಎಂಬೆಲ್ಲ ಮಾತುಗಳನ್ನು ಹೇಳಿದ್ದ ಮಮತಾ ಬ್ಯಾನರ್ಜಿ, ನಂತರ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೂ ಹೋಗಿರಲಿಲ್ಲ. ಪಶ್ಚಿಮ ಬಂಗಾಳ ಪ್ರವಾಹದ ಸಮಯದಲ್ಲಿ ಮೋದಿ ಕರೆಗೂ ಸ್ಪಂದಿಸಿರದ ದೀದಿ, 'ನಿಮ್ಮ ಕರುಣೆಯ ಸಹಾಯ ನಮಗೆ ಬೇಕಿಲ್ಲ' ಎಂದಿದ್ದರು. ಇಷ್ಟೆಲ್ಲ ಆದ ಮೇಲೆ ಇದೀಗ ಮೋದಿ ಅವರನ್ನೇ ಭೇಟಿಯಾಗಲು ಹೋಗುತ್ತಿರುವ ದೀದಿ ನಡೆ ಅಚ್ಚರಿ ಮೂಡಿಸಿದೆ.