ಮಾದಕವಸ್ತು ಜತೆ ಸಿಕ್ಕಿಬಿದ್ದ ಬಿಜೆಪಿ ಯುವ ನಾಯಕಿ: ಯಾರಿದು ಪಮೇಲಾ ಗೋಸ್ವಾಮಿ?
ಕೋಲ್ಕತಾ, ಫೆಬ್ರವರಿ 20: ಪಶ್ಚಿಮ ಬಂಗಾಳದ ಬಿಜೆಪಿ ಯುವ ಘಟಕದ ನಾಯಕಿ ಪಮೇಲಾ ಗೋಸ್ವಾಮಿ, ಮಾದಕವಸ್ತುವಿನ ಸಮೇತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಪಮೇಲಾ ಅಷ್ಟೇನೂ ಪರಿಚಿತ ಮುಖವಲ್ಲದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಈಗ ಭರ್ಜರಿ ಚರ್ಚೆಗೆ ಆಹಾರವಾಗಿದ್ದಾರೆ.
ಏಕೆಂದರೆ ಮಾದಕ ವಸ್ತುಗಳ ಬಳಕೆ, ಮಾರಾಟದ ವಿರುದ್ಧ ಬಿಜೆಪಿ ಅನೇಕ ಪ್ರತಿಭಟನೆಗಳನ್ನು ನಡೆಸಿತ್ತು. ಇತ್ತೀಚಿನ ಡ್ರಗ್ಸ್ ಪ್ರಕರಣಗಳಲ್ಲಿಯೂ ಬಿಜೆಪಿ ಹೇಳಿಕೆಗಳನ್ನು ನೀಡಿತ್ತು. ಈಗ ಸ್ವತಃ ಪಕ್ಷದ ಯುವ ನಾಯಕಿಯೇ ಡ್ರಗ್ಸ್ ಜತೆ ಸಿಕ್ಕಿಬಿದ್ದಿರುವುದು ಬಿಜೆಪಿಯನ್ನು ಪೇಚಿಗೆ ಸಿಲುಕಿಸಿದೆ.
ಡ್ರಗ್ಸ್ ಸಾಗಿಸುವಾಗ ಸಿಕ್ಕಿಬಿದ್ದ ಬಿಜೆಪಿ ಯುವ ನಾಯಕಿ!
ಪಮೇಲಾ ಅವರನ್ನು ಅವರ ಸ್ನೇಹಿತ ಪ್ರಬೀರ್ ಕುಮಾರ್ ದೇ ಮತ್ತು ಸೆಕ್ಯುರಿಟಿ ಗಾರ್ಡ್ ಒಬ್ಬರ ಜತೆ ಬಂಧಿಸಲಾಗಿದೆ. ಅವರ ಕಾರ್ನಲ್ಲಿ ಸುಮಾರು 10 ಲಕ್ಷ ರೂ ಮೌಲ್ಯದ 90 ಗ್ರಾಂ ಕೊಕೇನ್ ಇತ್ತು ಎನ್ನಲಾಗಿದೆ. ಭಾರತೀಯ ಜನತಾ ಯುವ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿರುವ ಪಮೇಲಾ, ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ. ಮುಂದೆ ಓದಿ.
2019ರಲ್ಲಿ ಬಿಜೆಪಿ ಸೇರ್ಪಡೆ
ಸಾಮಾಜಿಕ ಕಾರ್ಯಕರ್ತೆ ಮತ್ತು ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಪಮೇಲಾ, 2019ರಲ್ಲಿ ಬಿಜೆಪಿ ಸೇರಿಕೊಂಡಿದ್ದರು. ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ನಡೆಸಿದ ಸುದ್ದಿಗೋಷ್ಠಿ ಸಂದರ್ಭದಲ್ಲಿ ಕೇಸರಿ ಪಾಳೆಯಕ್ಕೆ ಸೇರ್ಪಡೆಯಾಗಿದ್ದರು. 2019ರ ಜುಲೈ 21ರಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸಭೆ ನಡೆಸಿದ ಕೂಡಲೇ ಈ ಸೇರ್ಪಡೆ ನಡೆದಿತ್ತು.
ಮತದಾರರನ್ನು ಸೆಳೆಯುವ ಕಾರ್ಯ
ಪಮೇಲಾ ಅವರೊಂದಿಗೆ ಬಂಗಾಳದ ಜನಪ್ರಿಯ ನಟಿ ರಿಮ್ಜಿಮ್ ಮಿತ್ರಾ ಕೂಡ ಕೇಸರಿ ಪಕ್ಷವನ್ನು ಸೇರಿಕೊಂಡಿದ್ದರು. ಅಂದಿನಿಂದಲೂ ಪಕ್ಷದ ತಳಮಟ್ಟದ ಕಾರ್ಯಗಳಲ್ಲಿ ಸಕ್ರಿಯರಾಗಿದ್ದ ಪಮೇಲಾ, ಯುವ ಮತದಾರರನ್ನು ಸೆಳೆಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಪಮೇಲಾ ಅವರ ಸಾಮಾಜಿಕ ಜಾಲತಾಣ ಖಾತೆಯನ್ನು ಗಮನಿಸಿದರೆ ಅವರ ಚಟುವಟಿಕೆಗಳು ತಿಳಿಯುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ
ಬಿಜೆಪಿ ಬಂಗಾಳ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗುವುದರ ಜತೆಗೆ ಹೂಗ್ಲಿ ಜಿಲ್ಲೆಯ ಯುವ ಮೋರ್ಚಾದ ವೀಕ್ಷಕರಾಗಿಯೂ ಕೆಲಸ ಮಾಡಿದ್ದರು. ಬಿಜೆಪಿಯ ಸಮಾವೇಶಗಳ ಚಿತ್ರಗಳನ್ನು ಅವರು ನಿರಂತರವಾಗಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಬಿಜೆಪಿ ನಾಯಕ ಮುಕುಲ್ ರಾಯ್, ಯುವ ಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಜತೆಗಿನ ಫೋಟೊಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಉತ್ತಮ ವಾಗ್ಮಿ
ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಕೋಲ್ಕತಾದ ವಿಕ್ಟೋರಿಯಾ ಸ್ಮಾರಕದಲ್ಲಿ ಆಯೋಜಿಸಿದ್ದ ಪರಾಕ್ರಮ ದಿವಸ ಆಚರಣೆಯಲ್ಲಿ ಅವರು ಪಾಲ್ಗೊಂಡಿದ್ದರು. ರಾಜಕೀಯ ಭಾಷಣ, ಮಾತುಗಾರಿಕೆಯಲ್ಲಿ ಪಮೇಲಾ ಪಳಗಿದವರಾಗಿದ್ದಾರೆ.
ರಿಹಾನ್ನಾಗೆ ತಿರುಗೇಟು
ಖ್ಯಾತ ಪಾಪ್ ಗಾಯಕಿ ರಿಹಾನ್ನಾ ಅವರು ಭಾರತದಲ್ಲಿನ ರೈತರ ಪ್ರತಿಭಟನೆ ಕುರಿತು ಮಾಡಿದ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದ ಪಮೇಲಾ, 'ಸೂಕ್ತ ಮಾಹಿತಿ ಹಾಗೂ ಜ್ಞಾನವಿಲ್ಲದೆ ಭಾರತದ ಭೂಪ್ರದೇಶದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡುವುದರಿಂದ ದೂರವಿರಿ. ಈ ಎಲ್ಲ ಕೃತ್ಯಗಳಲ್ಲಿ ರೈತರ ದಿಕ್ಕುತಪ್ಪಿಸಿದ ಅಂತಹ ಭಯೋತ್ಪಾದಕರು, ಮಧ್ಯವರ್ತಿಗಳ ಬಗ್ಗೆ ನಿಜವಾದ ರೈತರು ನಾಚಿಕೆಪಟ್ಟುಕೊಳ್ಳುತ್ತಿದ್ದಾರೆ. ಈ ಹಿಂಸಾಚಾರ ಪ್ರತಿಭಟನೆಗಳು ಕಾಂಗ್ರೆಸ್ ಬೆಂಬಲದ ಭಯೋತ್ಪಾದನಾ ಹಣದೊಂದಿಗೆ ನಡೆಯುತ್ತಿದೆ' ಎಂದು ಆರೋಪಿಸಿದ್ದರು.
ಗಗನಸಖಿ, ರೂಪದರ್ಶಿ, ನಟಿ
ಪಮೇಲಾ ಅವರು ರಾಜಕೀಯ ಸೇರುವುದಕ್ಕೂ ಮುನ್ನ ರೂಪದರ್ಶಿ ಆಗಿದ್ದರು. ಅಷ್ಟೇ ಅಲ್ಲ, ಗಗನಸಖಿಯಾಗಿ ಮತ್ತು ಬಂಗಾಳಿ ಕಿರುತೆರೆಯಲ್ಲಿ ನಟಿಯಾಗಿಯೂ ಕೆಲಸ ಮಾಡಿದ್ದರು. ಪಮೇಲಾ ಅವರು ನಿರ್ದಿಷ್ಟ ಸ್ಥಳವೊಂದಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದರು. ಅವರ ಚಲನವಲನಗಳನ್ನು ಗಮನಿಸಿದ್ದ ಪೊಲೀಸರು, ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿದಾಗ ಅವರ ಕಾರ್ನಲ್ಲಿ ಕೊಕೇನ್ ದೊರಕಿದೆ ಎನ್ನಲಾಗಿದೆ.
ನನ್ನನ್ನು ಸಿಲುಕಿಸಲಾಗಿದೆ
ಕಾರ್ ಪರಿಶೀಲಿಸಿದಾಗ ಪಮೇಲಾ ಅವರ ಬ್ಯಾಗ್ ಹಾಗೂ ಕಾರ್ ಸೀಟ್ನಲ್ಲಿ ಮಾದಕ ವಸ್ತುಗಳು ಕಂಡುಬಂದಿವೆ. ಪೊಲೀಸ್ ಠಾಣೆಗೆ ಕರೆದೊಯ್ಯುವ ಸಂದರ್ಭದಲ್ಲಿ ಪೊಲೀಸ್ ವಾಹನದಿಂದ ಜೋರಾಗಿ ಕೂಗಿದ ಪಮೇಲಾ, 'ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ' ಎಂದು ಹೇಳಿದ್ದಾರೆ.