ಬಂಗಾಳ ಚುನಾವಣೆ: ಕೋವಿಡ್ನಿಂದ ಇಬ್ಬರು ಅಭ್ಯರ್ಥಿಗಳ ಸಾವು
ಕೋಲ್ಕತಾ, ಏಪ್ರಿಲ್ 17: ಪಶ್ಚಿಮ ಬಂಗಾಳದ ರೆವೊಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿಯ (ಆರ್ಎಸ್ಪಿ) ಅಭ್ಯರ್ಥಿ ಪ್ರದೀಪ್ ಕುಮಾರ್ ನಂದಿ (73) ಶುಕ್ರವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಾಲ್ಕು ದಿನಗಳ ಹಿಂದೆ ಅವರು ಕೋವಿಡ್-19 ಪಾಸಿಟಿವ್ಗೆ ಒಳಗಾಗಿರುವುದು ಪತ್ತೆಯಾಗಿತ್ತು.
ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ವಿಧಾನಸಭೆ ಕ್ಷೇತ್ರದ ಆರ್ಎಸ್ಪಿ ಅಭ್ಯರ್ಥಿಯಾಗಿದ್ದ ಅವರು, ಕೆಲವು ದಿನ ಹೋಮ್ ಐಸೋಲೇಷನ್ನಲ್ಲಿದ್ದರು. ಗುರುವಾರ ರಾತ್ರಿ ಆರೋಗ್ಯ ತಿವ್ರ ಹದಗೆಟ್ಟಿದ್ದರಿಂದ ಬೆರ್ಹಾಂಪೋರ್ ಆಸ್ಪತ್ರೆಗೆ ಅವರನ್ನು ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಜಂಗಿಪುರದಲ್ಲಿ ಏಪ್ರಿಲ್ 26ರಂದು ಚುನಾವಣೆ ನಡೆಯಬೇಕಿದೆ. ಪ್ರದೀಪ್ ಕುಮಾರ್ ಅವರು ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ನಿಧನರಾದರು.
ಹರಿದ್ವಾರ ಕುಂಭ ಮೇಳ: ಪ್ರಧಾನ ಸಾಧು ಕೊರೊನಾ ಸೋಂಕಿಗೆ ಬಲಿ
ಸಮ್ಷೆರ್ಗಂಜ್ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರೆಜಾವುಲ್ ಹಕ್ ಅವರು ಕೂಡ ಕೋಲ್ಕತಾದಲ್ಲಿ ಕೋವಿಡ್ ಸೋಂಕಿನಿಂದ ಗುರುವಾರ ಅಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಸಮ್ಷೆರ್ಗಂಜ್ ವಿಧಾನಸಭೆ ಕ್ಷೇತ್ರಕ್ಕೆ ಏ. 26ರಂದು ಚುನಾವಣೆ ನಡೆಯಬೇಕಿದೆ.
ಬಂಗಾಳದಲ್ಲಿ ಶುಕ್ರವಾರ 6,910 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 6,43,795ಕ್ಕೆ ಏರಿದೆ. ಕೋಲ್ಕತಾದಲ್ಲಿ ಒಂದೇ ದಿನ 1,844 ಹೊಸ ಪ್ರಕರಣಗಳು ವರದಿಯಾಗಿವೆ.