ಪಶ್ಚಿಮ ಬಂಗಾಳದಲ್ಲಿ ನಾಟಕೀಯ ಬೆಳವಣಿಗೆ: ಯೂಟರ್ನ್ ಹೊಡೆದ ಶಾಸಕ
ಕೋಲ್ಕತಾ, ಡಿಸೆಂಬರ್ 19: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಸನ್ನಿಹಿತವಾಗಿರುವಾಗಲೇ ಒಬ್ಬರ ಮೇಲೊಬ್ಬರಂತೆ ತೃಣಮೂಲ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುವ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಆಘಾತ ನೀಡುತ್ತಿದ್ದಾರೆ. ಆದರೆ ಶುಕ್ರವಾರ ಅಲ್ಲಿ ನಾಟಕೀಯ ಬೆಳವಣಿಗೆಯೊಂದು ನಡೆದಿದೆ.
ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಟಿಎಂಸಿ ಶಾಸಕ ಜಿತೇಂದ್ರ ತಿವಾರಿ 24 ಗಂಟೆಯೊಳಗೆ ಯೂಟರ್ನ್ ಹೊಡೆದಿದ್ದಾರೆ. ತಾವು ತಪ್ಪು ಎಸಗಿದ್ದು, ಪಕ್ಷದ ನಾಯಕತ್ವವು ತಮ್ಮ ರಾಜೀನಾಮೆಯನ್ನು ಸ್ವೀಕರಿಸದಂತೆ ಮನವಿ ಮಾಡಿದ್ದಾರೆ.
ಟಿಎಂಸಿ ತೊರೆದ ಸುವೇಂದುಗೆ ಕೇಂದ್ರದಿಂದ 'ಝಡ್' ಶ್ರೇಣಿಯ ಭದ್ರತೆ
ಪಾಂಡವೇಶ್ವರ ಶಾಸಕರಾಗಿರುವ ಜಿತೇಂದ್ರ ತಿವಾರಿ, ಅಸನ್ಸೋಲ್ ಮುನಿಸಿಪಲ್ ಕಾರ್ಪೊರೇಷನ್ನ ಮುಖ್ಯಸ್ಥರ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದರು. ಬಳಿಕ ಬಿಜೆಪಿ ಸೇರ್ಪಡೆಗಾಗಿ ಟಿಎಂಸಿ ಶಾಸಕ ಸುವೇಂದು ರಾಜೀನಾಮೆ ನೀಡಿದ ಬೆನ್ನಲ್ಲೇ ತಿವಾರಿ ಕೂಡ ರಾಜೀನಾಮೆ ಪತ್ರ ಸಲ್ಲಿಸಿದ್ದರು.
ಆದರೆ ಶುಕ್ರವಾರ ಟಿಎಂಸಿಯ ಹಿರಿಯ ನಾಯಕ ಅರುಪ್ ಬಿಸ್ವಾಸ್ ಮತ್ತು ಚುನಾವಣಾ ಪ್ರಚಾರ ತಜ್ಞ ಪ್ರಶಾಂತ್ ಕಿಶೋರ್ ಅವರನ್ನು ದಕ್ಷಿಣ ಕೋಲ್ಕತಾದ ಸುರುಚಿ ಸಂಘ ಕ್ಲಬ್ನಲ್ಲಿ ಭೇಟಿ ಮಾಡಿದ ತಿವಾರಿ, ತಮ್ಮ ರಾಜೀನಾಮೆಯನ್ನು ಹಿಂದಕ್ಕೆ ಪಡೆಯುವ ಬಗ್ಗೆ ಹಾಗೂ ತಮ್ಮ ದುಡುಕಿನ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದರು. ಮುಂದೆ ಓದಿ.
ದೀದಿಗೆ ನೋವಾಗಿದೆ
'ನಾನು ತಪ್ಪು ಮಾಡಿದ್ದೇನೆ. ಕೆಲವು ತಪ್ಪು ತಿಳಿವಳಿಕೆಗಳು ಉಂಟಾಗಿದ್ದವು. ನಾನು ಹೇಳಿದ್ದೆಲ್ಲವೂ ನನ್ನ ಕಡೆಯಿಂದ ನಡೆದ ಪ್ರಮಾದ. ನನ್ನ ನಡೆಯಿಂದ ದೀದಿಗೆ ನೋವಾಗಿದೆ ಎನ್ನುವುದು ಗೊತ್ತಾಗಿದೆ. ದೀದಿ ಅವರಿಗೆ ಗಾಸಿಯುಂಟು ಮಾಡುವ ಯಾವುದೇ ಕೆಲಸವನ್ನು ನಾನು ಮಾಡಲಾರೆ' ಎಂದು ತಿವಾರಿ ಹೇಳಿದ್ದಾರೆ.
ದೀದಿಯ ಕ್ಷಮೆ ಕೋರುತ್ತೇನೆ
'ನಾನು ಖುದ್ದಾಗಿ ಮಮತಾ ದೀದಿ ಅವರನ್ನು ಭೇಟಿ ಮಾಡಿ ಅವರ ಕ್ಷಮೆ ಕೋರುತ್ತೇನೆ. ನಾನು ತೃಣಮೂಲ ಕಾಂಗ್ರೆಸ್ನಲ್ಲಿಯೇ ಕೆಲಸ ಮುಂದುವರಿಸುತ್ತೇನೆ' ಎಂದು ಜತೇಂದ್ರ ತಿವಾರಿ ಅವರು ಹಿರಿಯ ಮುಖಂಡರ ಜತೆಗಿನ ಸಭೆಯ ಬಳಿಕ ತಿಳಿಸಿದ್ದಾರೆ.
ನಿಷ್ಠಾವಂತ ಸೈನಿಕ
'ಜಿತೇಂದ್ರ ತಿವಾರಿ ಅವರು ಈ ಮೊದಲು, ಈಗ ಮತ್ತು ಮುಂದೆ ಕೂಡ ತೃಣಮೂಲ ಕಾಂಗ್ರೆಸ್ನಲ್ಲಿ ಇರಲಿದ್ದಾರೆ. ಮಮತಾ ಬ್ಯಾನರ್ಜಿ ಅವರ ನಿಷ್ಠಾವಂತ ಸೈನಿಕನಂತೆ ಬಿಜೆಪಿ ವಿರುದ್ಧ ಹೋರಾಡಲಿದ್ದಾರೆ. ಎಲ್ಲ ಕುಟುಂಬಗಳಲ್ಲಿಯೂ ಸಮಸ್ಯೆಗಳಿರುತ್ತವೆ. ಆದರೆ ಅವುಗಳನ್ನು ಪರಿಹರಿಸಬಹುದು' ಎಂದು ಬಿಸ್ವಾಸ್ ಹೇಳಿದ್ದಾರೆ.
ಒಟ್ಟು ನಾಲ್ವರ ರಾಜೀನಾಮೆ
ಟಿಎಂಸಿಯ ಒಟ್ಟು ನಾಲ್ವರು ಶಾಸಕರು ರಾಜೀನಾಮೆ ಸಲ್ಲಿಸಿದ್ದರು. ಸುವೇಂದು ಅಧಿಕಾರಿ, ಬನಶ್ರೀ ಮೈತಿ, ಸಿಲ್ಭದ್ರಾ ದತ್ತಾ ಕೂಡ ಶುಕ್ರವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅವರಲ್ಲಿ ನಾಲ್ಕನೆಯವರಾಗಿದ್ದ ತಿವಾರಿ ಈಗ ಯೂಟರ್ನ್ ಹೊಡೆದು ಪಕ್ಷಕ್ಕೆ ಮರಳಿದ್ದಾರೆ.