ಪರಸ್ಪರ ಕಲ್ಲು ತೂರಾಟ ನಡೆಸಿದ ಬಿಜೆಪಿ-ಟಿಎಂಸಿ ಕಾರ್ಯಕರ್ತರು
ಕೋಲ್ಕತಾ, ಏಪ್ರಿಲ್ 17: ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ಶನಿವಾರ ಹಿಂಸಾಚಾರ ಘರ್ಷಣೆ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ 45 ಕ್ಷೇತ್ರಗಳಿಗೆ ಐದನೇ ಹಂತದ ಚುನಾವಣೆ ನಡೆಯುತ್ತಿದ್ದು. ನಾರ್ತ್ 24 ಪರಗಣ ಜಿಲ್ಲೆಯ ಬಿಧಾನನಗರ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರು ಬಡಿದಾಡಿಕೊಂಡಿದ್ದಾರೆ.
ಬಿಧಾನನಗರದ ಶಾಂತಿನಗರ ಎಂಬ ಸ್ಥಳದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ಮೊದಲು ಕೈಕೈ ಮಿಲಾಯಿಸಿಕೊಂಡಿದ್ದ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರು ಬಳಿಕ ಕಲ್ಲುತೂರಾಟಕ್ಕೆ ಇಳಿದಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಬಿಧಾನನಗರದ ಬಿಜೆಪಿ ಅಭ್ಯರ್ಥಿ ಸಬ್ಯಸಾಚಿ ದತ್ತ ಕೂಡ ಸ್ಥಳದಲ್ಲಿ ಇದ್ದರು.
ಬಂಗಾಳ ಚುನಾವಣೆ: ಕೋವಿಡ್ನಿಂದ ಇಬ್ಬರು ಅಭ್ಯರ್ಥಿಗಳ ಸಾವು
ಮತಗಟ್ಟೆಯನ್ನು ತಮ್ಮ ವಶಪಡಿಸಿಕೊಳ್ಳಲು ಟಿಎಂಸಿ ಬೆಂಬಲಿಗರು ಪ್ರಯತ್ನಿಸಿದರು. ಆದರೆ ಆ ಪ್ರಯತ್ನ ವಿಫಲವಾಗಿದ್ದರಿಂದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದರು ಎಂದು ಸಬ್ಯಸಾಚಿ ಆರೋಪಿಸಿದ್ದಾರೆ. ಘರ್ಷಣೆ ವೇಳೆ ಟಿಎಂಸಿ ಬೆಂಬಲಿಗರು 'ಸಬ್ಯಸಾಚಿ ಗೋ ಬ್ಯಾಕ್' ಎಂದು ಘೋಷಣೆಗಳನ್ನು ಕೂಗಿದರು.
ಟಿಎಂಸಿ ಗೂಂಡಾಗಳು ನನ್ನನ್ನು ನಯಾಪಟ್ಟಿಯಲ್ಲಿ ತಡೆದಿದ್ದಾರೆ. ಮತದಾನ ನಡೆಯುತ್ತಿದ್ದರೂ ಮತದಾರರು ಮತಗಟ್ಟೆ ಬಾರದಂತೆ ಅಡ್ಡಗಟ್ಟುತ್ತಿದ್ದಾರೆ ಎಂದು ಸಬ್ಯಸಾಚಿ ದತ್ತಾ ಆರೋಪಿಸಿದ್ದಾರೆ.
ಬರ್ಧಮಾನ್ ಜಿಲ್ಲೆಯ ಪುರ್ಬಾದ ದುಬ್ರಜ್ದಿಘಿಯಲ್ಲಿ ಕೂಡ ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಹೊಡೆದಾಟ ವರದಿಯಾಗಿದೆ. ಆದರೆ ಈ ರೀತಿಯ ಯಾವುದೇ ಘಟನೆ ನಡೆದಿಲ್ಲ ಎಂದು ಚುನಾವಣಾ ಅಧಿಕಾರಿರಿ ಮತ್ತು ಸ್ಥಳೀಯ ಪೊಲೀಸರು ನಿರಾಕರಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣದಲ್ಲಿರಿಸಲು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.