ಬಂಗಾಳದಲ್ಲಿ ಫ್ಯಾಸಿಸ್ಟ್ ಆಡಳಿತ: ತೇಜಸ್ವಿ ಸೂರ್ಯ
ಕೋಲ್ಕತಾ, ಅಕ್ಟೋಬರ್ 8: 'ಇಂದು ಪ್ರಜಾಪ್ರಭುತ್ವದ ಕರಾಳ ದಿನಗಳಲ್ಲಿ ಒಂದು. ತೃಣಮೂಲ ಕಾಂಗ್ರೆಸ್ ಸರ್ಕಾರವು ತನ್ನ ಅಧಿಕಾರ ಮತ್ತು ಗೂಂಡಾಗಳನ್ನು ಬಳಸಿಕೊಳ್ಳುತ್ತಿರುವ ರೀತಿ ಅಕ್ಷಮ್ಯ. ಇದು ನಮ್ಮ ಸಮಾವೇಶದ ಆರಂಭವಷ್ಟೇ' ಎಂದು ಪಶ್ಚಿಮ ಬಂಗಾಳದಲ್ಲಿ ನಬನ್ನಾ ಚಲೋ ಮೆರವಣಿಗೆ ಆಯೋಜಿಸಿದ್ದ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ನಡೆದ ಹಿಂಸಾಚಾರದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಮೋರ್ಚಾದ ಅಧ್ಯಕ್ಷಗಿರಿ ಸಿಕ್ಕ ಬಳಿಕ ಇದು ನನ್ನ ಮೊದಲ ಜಾಥಾ. ಈ ರೀತಿಯ ಹಿಂಸಾಚಾರ ಮತ್ತು ದೌರ್ಜನ್ಯಗಳು ಪಶ್ಚಿಮ ಬಂಗಾಳದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾವು ಜಯಗಳಿಸಿದ ಬಳಿಕವಷ್ಟೇ ನಿಲ್ಲುತ್ತವೆ ಎಂದು ಹೇಳಿದರು.
ಬಂಗಾಳ ಪೊಲೀಸರು ಜಲಫಿರಂಗಿಯನ್ನು ರಾಸಾಯನಿಕಗಳನ್ನು ಬಳಸಿದ್ದಾರೆ. ಪೊಲೀಸರು ಬಳಸಿದ ನೀಲಿ ಬಣ್ಣದ ರಾಸಾಯನಿಕದ ಬಗ್ಗೆ ವಿಶೇಷ ತನಿಖೆ ನಡೆಯಬೇಕು ಎಂದು ನಾವು ಒತ್ತಾಯಿಸುತ್ತೇವೆ. ಜಗತ್ತಿನಲ್ಲಿ ಯಾವ ಪೊಲೀಸರೂ ಅಂತಹ ರಾಸಾಯನಿಕ ಬಳಸುವುದಿಲ್ಲ. ಬಂಗಾಳ ಸರ್ಕಾರವು ಫ್ಯಾಸಿಸ್ಟ್ ವ್ಯಕ್ತಿಗಳಿಂದ ನಡೆಯುತ್ತಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ತೇಜಸ್ವಿ ವಾಗ್ದಾಳಿ ನಡೆಸಿದರು.
ನಮ್ಮ ಮೆರವಣಿಗೆ ಮೇಲೆ ಟಿಎಂಸಿ ಗೂಂಡಾಗಳು ಮಹಡಿ ಮೇಲಿಂದ ಕಚ್ಚಾ ಬಾಂಬ್ಗಳನ್ನು ಎಸೆದರು. ನಮ್ಮ ಶಾಂತಯುತ ಮೆರವಣಿಗೆ ಮೇಲೆ ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಸಿಡಿಸಲಾಯಿತು. ಈ ದುರಾಡಳಿತಕ್ಕೆ ಅಂತ್ಯಹಾಡುವ ಸಮಯ ಬಂದಿದೆ ಎಂದು ಹೇಳಿದರು.