ಪಶ್ಚಿಮ ಬಂಗಾಳ ನ್ಯಾಯಾಲಯದಿಂದ ಅಮಿತ್ ಶಾಗೆ ಸಮನ್ಸ್
ಕೋಲ್ಕತ್ತಾ, ಫೆಬ್ರವರಿ 19: ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಮನ್ಸ್ ನೀಡಿದೆ.
ಶುಕ್ರವಾರ ಸಮನ್ಸ್ ನೀಡಿದ್ದು, ಫೆ.22ರಂದು ಅಮಿತ್ ಶಾ ಖುದ್ದು ಇಲ್ಲವೇ ತಮ್ಮ ವಕೀಲರ ಮೂಲಕ ಹಾಜರಾಗಬೇಕೆಂದು ಬಿಧಾನ್ ನಗರದಲ್ಲಿನ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಮೋದಿಗೆ ಒಂದೇ ಒಂದು ಅವಕಾಶ ಕೊಟ್ಟು ನೋಡಿ; ಬಂಗಾಳ ಜನರಿಗೆ ಅಮಿತ್ ಶಾ ಮನವಿ
ಅಮಿತ್ ಶಾ ವಿರುದ್ಧ ಐಪಿಸಿ ಸೆಕ್ಷನ್ 500ರ ಅಡಿ ಮಾನನಷ್ಟ ಮೊಕದ್ದಮೆ ದಾಖಲಾಗಿದ್ದು, ಈ ಆರೋಪಕ್ಕೆ ಉತ್ತರಿಸಬೇಕೆಂದು ಸೂಚಿಸಿದೆ. 2018ರ ಆಗಸ್ಟ್ 11ರಂದು ಕೋಲ್ಕತ್ತಾದ ಮಾಯೋ ರಸ್ತೆಯಲ್ಲಿ ನಡೆದಿದ್ದ ಬಿಜೆಪಿ ಸಮಾವೇಶದಲ್ಲಿ ಅಮಿತ್ ಶಾ ಸಂಸದ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು ಎಂದು ಅಭಿಷೇಕ್ ಪರ ವಕೀಲ ಸಂಜಯ್ ಬಸು ಆರೋಪಿಸಿದ್ದರು.
ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಫೆ.18ರಿಂದ ಎರಡು ದಿನಗಳ ಕಾಲ ಅಮಿತ್ ಶಾ ಪಶ್ಚಿಮ ಬಂಗಾಳ ಪ್ರವಾಸದಲ್ಲಿದ್ದರು. ಇಂದು ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಈ ಸಂದರ್ಭವೇ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ.