ಟಿಎಂಸಿಗೆ ಆಘಾತ: ಬಿಜೆಪಿಯತ್ತ ಮುಖ ಮಾಡಿದ 5 ಹಾಲಿ ಶಾಸಕರು?
ಕೋಲ್ಕತ್ತಾ, ಮಾರ್ಚ್.08: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ವಿಧಾನಸಭಾ ಚುನಾವಣೆಗೆ ಟಿಕೆಟ್ ಪಡೆದ ಅಭ್ಯರ್ಥಿಯೊಬ್ಬರು ತಮ್ಮ 14 ಸಹಚರರೊಂದಿಗೆ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಭಾರಿ ಸುದ್ದಿಯಾಗಿದೆ.
ಟಿಎಂಸಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಸಲರಾ ಮುರ್ಮು ಎಂಬುವವರಿಗೆ ಮಾಲ್ದಾ ಜಿಲ್ಲೆಯ ಹಬಿಬ್ ಪುರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ಟಿಎಂಸಿ ಟಿಕೆಟ್ ನೀಡಿತ್ತು. ಕೆಲವೇ ಗಂಟೆಗಳ ಹಿಂದೆ ಅವರ ಅನಾರೋಗ್ಯದ ಕಾರಣದಿಂದ ಅಭ್ಯರ್ಥಿಗಳ ಪಟ್ಟಿಯಿಂದ ಅವರ ಹೆಸರನ್ನು ಕೈ ಬಿಡಲಾಗಿದೆ. ಈ ಹಿನ್ನೆಲೆ ಟಿಎಂಸಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡ ಸಲರಾ ಮುರ್ಮು ಅಚ್ಚರಿಯ ಬೆಳವಣಿಯೊಂದರಲ್ಲಿ ಬಿಜೆಪಿ ಕಡೆಗೆ ಮುಖ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಪಶ್ಚಿಮ ಬಂಗಾಳ ಚುನಾವಣಾ 'ಜ್ಯೋತಿಷ್ಯ ಭವಿಷ್ಯ': ಬಿಜೆಪಿ ಗಣನೀಯ ಸಾಧನೆ, ಆದರೆ..
ಹಳೆ ಮಾಲ್ದಾ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಸಲರಾ ಮುರ್ಮು ಟಿಎಂಸಿ ಎದುರು ಬೇಡಿಕೆ ಇಟ್ಟಿದ್ದರು. ಮೊದಲು ಟಿಕೆಟ್ ನೀಡಿದ್ದ ಟಿಎಂಸಿ ತದನಂತರದಲ್ಲಿ ಅಭ್ಯರ್ಥಿಗಳ ಪಟ್ಟಿಯಿಂದ ಅವರ ಹೆಸರನ್ನು ತೆಗೆದು ಹಾಕಲಾಗಿತ್ತು. ಈ ನಂತರದ ರಾಜಕೀಯ ಬೆಳವಣಿಗೆಗಳ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಪಶ್ಚಿಮ ಬಂಗಾಳದಲ್ಲಿ ಪಕ್ಷಾಂತರ ಪರ್ವ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲೇ ಟಿಎಂಸಿ ಮುಖಂಡರಾದ ಸಲರಾ ಮುರ್ಮು ಜೊತೆಗೆ ಮಾಲ್ಡಾ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಗೌರ್ ಚಂದ್ರ ಮಂಡಲ್, ಟಿಎಂಸಿ ಸಂಘಟಕ ಅಮ್ಲನ್ ಭದೂರಿ ಸೇರಿದಂತೆ 14 ಪ್ರಮುಖ ನಾಯಕರು ಬಿಜೆಪಿಗೆ ಸೇರ್ಪಡೆ ಆಗಲು ಯೋಚಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಟಿಕೆಟ್ ನಿರಾಕರಿಸುವುದಕ್ಕೆ ಆರೋಗ್ಯ ಸಮಸ್ಯೆ ಕಾರಣ
ಹಳೆ ಮಾಲ್ಡಾದ ಹಬಿಬ್ ಪುರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ಮೊದಲು ಅವಕಾಶ ನೀಡಿದ ಟಿಎಂಸಿ ತದನಂತರದಲ್ಲಿ ಅಭ್ಯರ್ಥಿಗಳ ಪಟ್ಟಿಯಿಂದ ಸಲಾರಾ ಮುರ್ಮು ಅವರ ಹೆಸರನ್ನು ಕೈ ಬಿಟ್ಟಿತ್ತು. ಸಲಾರಾ ಮುರ್ಮು ಬದಲಿಗೆ ಪ್ರದೀಪ್ ಭಕ್ಷಿ ಅವರಿಗೆ ಟಿಕೆಟ್ ನೀಡುವುದಾಗಿ ಟಿಎಂಸಿ ಘೋಷಿಸಿದೆ.
ಅಭ್ಯರ್ಥಿ ಪಟ್ಟಿ ಬಿಡುಗಡೆ ನಂತರ ಹೀಗೆಲ್ಲ!
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಪಕ್ಷವು ಕಳೆದ ವಾರವಷ್ಟೇ 291 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು. ಈ ಪಟ್ಟಿ ಬಿಡುಗಡೆ ಬೆನ್ನಲ್ಲೇ ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಸತ್ಗಾಚಿಯಾ ಶಾಸಕ ಸೋನಾಲಿ ಗುಹಾ, ಭಂಗಾರ್ ಶಾಸಕ ಅರ್ಬುಲ್ ಇಸ್ಲಾಂ, ಉತ್ತರ ಕೋಲ್ಕತ್ತಾ ಜೊರಸಂಖೋ ಶಾಸಕಿ ಸ್ಮಿತಾ ಬಾಕ್ಸಿ ಮತ್ತು ಅಂದಂಗಾ ಶಾಸಕ ರಫಿಕೂರ್ ರಹಮಾನ್ ಅಸಮಾಧಾನ ವ್ಯಕ್ತಪಡಿಸಿದ್ದು ಅಲ್ಲದೇ ಟಿಕೆಟ್ ನಿರಾಕರಿಸುವುದಕ್ಕೆ ಮುಂದಾಗಿದ್ದರು.
ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಚುನಾವಣೆ
ಭಾರತದ ನಾಲ್ಕು ರಾಜ್ಯ, ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆಗೆ ಮಾರ್ಚ್.27ರಿಂದ ಮತದಾನ ಆರಂಭವಾಗಲಿದೆ. ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್.27, ಏಪ್ರಿಲ್.1, ಏಪ್ರಿಲ್.6, ಏಪ್ರಿಲ್.10, ಏಪ್ರಿಲ್.17, ಏಪ್ರಿಲ್.22, ಏಪ್ರಿಲ್.26 ಮತ್ತು ಏಪ್ರಿಲ್.29ರಂದು ಮತದಾನ ನಡೆಯಲಿದೆ. ಚುನಾವಣೆಯ ಅಂತಿಮ ಫಲಿತಾಂಶ ಮೇ.2ರಂದು ಹೊರ ಬೀಳಲಿದೆ.