ಮಮತಾ ಸರ್ಕಾರ ಸುಳ್ಳು ಕೇಸ್ ಹಾಕಬಹುದು: ರಾಜೀನಾಮೆ ಬಳಿಕ ರಾಜ್ಯಪಾಲರಿಗೆ ಸುವೇಂದು ಪತ್ರ
ಕೋಲ್ಕತಾ, ಡಿಸೆಂಬರ್ 17: ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ರಾಜ್ಯಪಾಲರಿಗೆ ಪತ್ರ ಬರೆದಿರುವ ತೃಣಮೂಲ ಕಾಂಗ್ರೆಸ್ನ ಬಂಡಾಯ ಶಾಸಕ ಸುವೇಂದು ಅಧಿಕಾರಿ ಅವರು ತಮ್ಮ ಬದಲಾದ ರಾಜಕೀಯ ನಿಲುವಿನ ಕಾರಣಕ್ಕೆ ಪೊಲೀಸರು ತಮ್ಮನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಬಹುದು ಎಂಬ ಭಯ ವ್ಯಕ್ತಪಡಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಸರ್ಕಾರದಲ್ಲಿನ ಶಾಸಕ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ ಬಳಿಕ ಅವರು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಅವರಿಗೆ ಪತ್ರ ಬರೆದಿದ್ದು, ಅವರ ಮಧ್ಯಪ್ರವೇಶವನ್ನು ಕೋರಿದ್ದಾರೆ.
ಮಮತಾಗೆ ಹಿನ್ನಡೆ, ಸುವೇಂದು ಅಧಿಕಾರಿ ರಾಜೀನಾಮೆ
'ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿರುವ ನಿಮ್ಮ ಮಧ್ಯಪ್ರವೇಶವನ್ನು ನಾನು ಈ ಮೂಲಕ ಕೋರುತ್ತೇನೆ. ರಾಜ್ಯದಲ್ಲಿನ ಪೊಲೀಸರು ಮತ್ತು ಆಡಳಿತ ವ್ಯವಸ್ಥೆಯು ನನ್ನ ಹಾಗೂ ನನ್ನ ಸಹವರ್ತಿಗಳ ಮೇಲೆ ರಾಜಕೀಯ ಪ್ರಚೋದನೆ ಮತ್ತು ಸಂಚಿನ ಮೂಲಕ ಸುಳ್ಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ಸಾಧ್ಯತೆ ಇದೆ' ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ತಮ್ಮ ರಾಜಕೀಯ ನಿಲುವನ್ನು ಬದಲಿಸಿರುವುದು ಅಧಿಕಾರದಲ್ಲಿ ಇರುವವರಿಗೆ ನನ್ನ ಮೇಲೆ ರಾಜಕೀಯ ಹಗೆ ತೀರಿಸಿಕೊಳ್ಳಲು ಅವಕಾಶ ಸಿಕ್ಕಂತಾಗಿದೆ ಎಂದು ಮಮತಾ ಬ್ಯಾನರ್ಜಿ ಸರ್ಕಾರದ ಮಾಜಿ ಸಚಿವರೂ ಆಗಿರುವ ಸುವೇಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸುವೇಂದು ಅಧಿಕಾರಿ ಅವರ ಮನವಿಯನ್ನು ಸ್ವೀಕರಿಸಿರುವ ರಾಜ್ಯಪಾಲ ಧನಕರ್, ಅವರ ಹಾಗೂ ಅವರ ಹಿಂಬಾಲಕರ ವಿರುದ್ಧ ಪೊಲೀಸರು ಮತ್ತು ಅಧಿಕಾರಿಗಳು ಯಾವುದೇ ಸುಳ್ಳು ಆರೋಪ ದಾಖಲಿಸುವುದನ್ನು ತಡೆಯಲಾಗುವುದು ಎಂದು ಭರವಸೆ ನೀಡಿದ್ದಾರೆ.