'2021ರ ಚುನಾವಣೆಯಲ್ಲಿ ಬಿಜೆಪಿಯನ್ನು ಬಂಗಾಳದಿಂದ ಹೊರಹಾಕುತ್ತೇವೆ'
ಕೊಲ್ಕತ್ತಾ, ಜುಲೈ 21: 2021ರ ವಿಧಾನಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಿಂದ ಬಿಜೆಪಿಯನ್ನು ಕಿತ್ತೊಗೆಯುತ್ತೇವೆ ಎಂದು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.
ಶಾಹಿದ್ ದಿವಾಸ್ ಸಮಾವೇಶದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ ''ಕೇಂದ್ರ ಸರ್ಕಾರ ನಮ್ಮನ್ನು ನಿರ್ಲಕ್ಷಿಸಿದೆ, ಅದಕ್ಕೆ ತಕ್ಕ ಪಾಠ ಕಲಿಸುತ್ತೇವೆ. ಹೊರಗಿನಿಂದ ಬಂದವರು ರಾಜ್ಯವನ್ನು ಆಳಲು ಸಾಧ್ಯವಿಲ್ಲ. ರಾಜಕೀಯ ಅನುಭವ ಇಲ್ಲದೆ ಕೆಲವರು, ಜನರನ್ನು ಕೊಲ್ಲುವ, ಗಲೆಭಗಳ ಸೃಷ್ಟಿಸುವ ಕುರಿತು ಮಾತನಾಡುತ್ತಾರೆ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವಾರಕ್ಕೆ ಎರಡು ದಿನ ಸಂಪೂರ್ಣ ಲಾಕ್ಡೌನ್
''ಉತ್ತರ ಪ್ರದೇಶದಲ್ಲಿ ಏನಾಗುತ್ತಿದೆ? ಆ ರಾಜ್ಯದ ಜನರು ಪೊಲೀಸರಿಗೆ ದೂರು ನೀಡಲು ಹೆದರುತ್ತಿದ್ದಾರೆ. ಒಂದೇ ಘಟನೆಯಲ್ಲಿ ಹಲವು ಪೊಲೀಸರು ಸಾವನ್ನಪ್ಪಿದ್ದಾರೆ'' ಎಂದು ಬಿಜೆಪಿ ಆಡಳಿತವನ್ನು ಟೀಕಿಸಿದ್ದಾರೆ.
'2021ರ ವಿಧಾನಸಭಾ ಚುನಾವಣೆಯಲ್ಲಿ ನಾವು ಬಿಜೆಪಿಯನ್ನು ಪಶ್ಚಿಮ ಬಂಗಾಳದಿಂದ ಹೊರಹಾಕುತ್ತೇವೆ. ತೃಣಮೂಲ ಕಾಂಗ್ರೆಸ್ ಮತ್ತೆ ಸರ್ಕಾರ ರಚಿಸಲಿದೆ. ಮುಂದಿನ ಚುನಾವಣೆ, ರಾಜ್ಯಕ್ಕೆ ಮಾತ್ರವಲ್ಲದೆ ದೇಶಕ್ಕೂ ಹೊಸ ದಿಕ್ಕನ್ನು ತೋರಿಸುತ್ತದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚುನಾವಣ ರಣ ಕಹಳೆ ಊದಿದ್ದಾರೆ.
'ನಿರಾಶ್ರಿತರಿಂದ ಹಿಡಿದು ರಾಜಮನೆತನಕ್ಕೆ ಸೇರಿದವರೆಲ್ಲರೂ ನನಗೆ ಸಮಾನರು. ಆದರೆ, ಕೋಮು ಅಸಮಾನತೆಯನ್ನು ಹುಟ್ಟುಹಾಕುವ ಪ್ರಯತ್ನ ನಡೆಯುತ್ತಿದೆ. ಒಂದು ಪಕ್ಷ ಹಿಂದೂ-ಮುಸ್ಲಿಂ ಗಲಭೆಗಳನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ. ಒಂದು ನೆನಪಿಡಿ ಈ ದೇಶ ಹಾಗೂ ಬಂಗಾಳ ಎಲ್ಲರಿಗೂ ಸೇರಿದೆ' ಎಂದು ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
ಕೊರೊನಾ ವೈರಸ್, ಅಂಫಾನ್ ಚಂಡಮಾರುತ ವಿಚಾರದಲ್ಲಿ ಕೇಂದ್ರ ಸರ್ಕಾರ ಸರಿಯಾದ ಪರಿಹಾರ ನೀಡಿಲ್ಲ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಅಪರಾಧಗಳು ಹೆಚ್ಚಾಗಿದೆ, ಇದಕ್ಕೆ ಟಿಎಂಸಿ ಸರ್ಕಾರ ಕಾರಣ ಎಂದು ಬಿಜೆಪಿ ನಾಯಕರು ದೂರಿದ್ದರು.
ಸ್ವತಃ ಮಮತಾ ಬ್ಯಾನರ್ಜಿ ಅವರೇ ಹೇಳಿರುವ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ.