ಪಶ್ಚಿಮ ಬಂಗಾಳದ ಜನ ನಮ್ಮನ್ನು ಪ್ರಬಲ ಪ್ರತಿಪಕ್ಷವಾಗಿ ಆರಿಸಿದ್ದಾರೆ; ಬಿಜೆಪಿ
ಕೋಲ್ಕತ್ತಾ, ಮೇ 3: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಗೆಲ್ಲುವ ಮೂಲಕ ಹ್ಯಾಟ್ರಿಕ್ ಜಯ ಸಾಧಿಸಿದೆ. ಬಿಜೆಪಿ ಸೋಲು ಅನುಭವಿಸಿದ್ದು, ಚುನಾವಣೆಯಲ್ಲಿ 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವ ನಮ್ಮ ಗುರಿ ಮುಟ್ಟಲಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಸೋಲೊಪ್ಪಿಕೊಂಡಿದ್ದಾರೆ.
"ಚುನಾವಣೆಯಲ್ಲಿ ನಾವು ಗುರಿ ಮುಟ್ಟಲು ಆಗಲಿಲ್ಲ. ಆದರೆ ಜನರು ನಮ್ಮನ್ನು ಪ್ರಬಲ ಪ್ರತಿಪಕ್ಷವನ್ನಾಗಿ ಆರಿಸಿದ್ದಾರೆ" ಎಂದು ದಿಲೀಪ್ ಘೋಷ್ ಸಮರ್ಥಿಸಿಕೊಂಡಿದ್ದಾರೆ.
ಬಂಗಾಳ ಇಂದು ದೇಶವನ್ನು ರಕ್ಷಿಸಿದೆ: ಮಮತಾ ಬ್ಯಾನರ್ಜಿ
ಚುನಾವಣೆಯಲ್ಲಿ ತಮ್ಮ ಗೆಲುವಿನ ಸಂಖ್ಯೆ ತೃಪ್ತಿ ತಂದಿದೆ ಎಂದು ಹೇಳಿಕೊಂಡಿರುವ ಅವರು, ಕಳೆದ ಚುನಾವಣೆಯಲ್ಲಿ ಬಿಜೆಪಿ ಕೇವಲ ಮೂರು ಸ್ಥಾನಗಳನ್ನು ಪಡೆದಿತ್ತು. ಈ ಬಾರಿ ಸುಮಾರು 80 ಸ್ಥಾನಗಳನ್ನು ಪಡೆದಿದೆ ಎಂದು ವಿವರಿಸಿದರು.
ಚುನಾವಣೆ ಗೆಲುವು ಸಾಧಿಸುವಲ್ಲಿ ಏನು ತೊಡಕಾಯಿತು ಎಂಬುದರ ಕುರಿತು ಪರಿಶೀಲನೆ ಮಾಡುತ್ತೇವೆ. ಈ ಚುನಾವಣೆಯಲ್ಲಿ ನಮ್ಮ ಮುಂದೆ ನಾವು ಅತಿ ದೊಡ್ಡ ಗುರಿಯನ್ನು ಇಟ್ಟುಕೊಂಡಿದ್ದೆವು. ಆದರೆ ಅದನ್ನು ತಲುಪುವುದು ಸಾಧ್ಯವಾಗಲಿಲ್ಲ. ಆದರೆ ನಾವು ಪಡೆದುಕೊಂಡ ಸಂಖ್ಯೆಯೂ ಚಿಕ್ಕದಲ್ಲ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಜನರು ನಮ್ಮನ್ನು ಬಲಿಷ್ಠ ಪ್ರತಿಪಕ್ಷವಾಗಿ ಹೊರಹೊಮ್ಮಲು ಅವಕಾಶ ನೀಡಿದ್ದಾರೆ ಎಂದು ಹೇಳಿದ್ದಾರೆ.
ಪೈಪೋಟಿಯ ಕಣವಾಗಿದ್ದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಅಭೂತಪೂರ್ವ ಗೆಲುವು ಸಾಧಿಸಿದೆ. ಚುನಾವಣೆಗೆ ಮುಂಚಿನಿಂದಲೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಇದೀಗ ತೃಣಮೂಲ ಕಾಂಗ್ರೆಸ್ ಗೆಲುವು ಪಡೆದುಕೊಂಡಿದೆ.
Recommended Video