ಮಮತಾಗೆ ಹಿನ್ನಡೆ, ಕ್ರೀಡಾ ಸಚಿವ ಲಕ್ಷ್ಮಿ ರತನ್ ಶುಕ್ಲಾ ರಾಜೀನಾಮೆ
ಕೋಲ್ಕತಾ, ಜನವರಿ 5: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ(ಟಿಎಂಸಿ)ಕ್ಕೆ ಮತ್ತೆ ಹಿನ್ನಡೆಯಾಗಿದೆ. ಕ್ರೀಡಾ ಮತ್ತು ಯುವಜನ ಸೇವೆ ಖಾತೆ ಸಚಿವ ಲಕ್ಷ್ಮಿ ರತನ್ ಶುಕ್ಲಾ ಅವರು ಇಂದು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಮಾಜಿ ಕ್ರಿಕೆಟರ್, ಟಿಎಂಸಿ ಮುಖಂಡರಾಗಿ ಗುರುತಿಸಿಕೊಂಡಿದ್ದ ಶುಕ್ಲಾ ಅವರು ಸಚಿವ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಸಚಿವ ಸ್ಥಾನದ ಜೊತೆಗೆ ತೃಣಮೂಲ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ(ನಗರ) ಹೌರಾ ವಿಭಾಗದ ಜವಾಬ್ದಾರಿಯಿಂದಲೂ ಮುಕ್ತರಾಗಿದ್ದು, ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಟಿಎಂಸಿ ಶಾಸಕರಾಗಿ ಮುಂದುವರೆಯಲಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷ ತೊರೆಯುತ್ತಿರುವ ನಾಯಕರು; ತೃಣಮೂಲ ಕಾಂಗ್ರೆಸ್ಗೆ ಭಾರೀ ಸವಾಲು
ಮೂಲಗಳ ಪ್ರಕಾರ ಲಕ್ಷ್ಮಿ ರತನ್ ಶುಕ್ಲಾ ಅವರು ರಾಜಕೀಯ ಕ್ಷೇತ್ರದಿಂದಲೇ ದೂರ ಉಳಿಯಲು ಬಯಸಿದ್ದಾರೆ. ಮುಂಬರುವ ಪಶ್ಚಿಮ ಬಂಗಾಳ ಚುನಾವಣೆ 2021ರಲ್ಲಿ ಸ್ಪರ್ಧಿಸಲ್ಲ ಎಂಬ ಸುದ್ದಿಯಿದೆ. 2021ರಲ್ಲಿ ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಪುದುಚೇರಿ ಜೊತೆಗೆ ಮಾರ್ಚ್ -ಏಪ್ರಿಲ್ ತಿಂಗಳಲ್ಲಿ ಪಶ್ಚಿಮ ಬಂಗಾಳ ರಾಜ್ಯದ ವಿಧಾನಸಭೆಗೆ ಚುನಾವಣೆ ನಡೆಯಬೇಕಿದೆ.
ಮಮತಾಗೆ ಬಲವಾಗಿ ಜೊತೆಗಿದ್ದ ಸುವೇಂದು ಅಧಿಕಾರಿ, ಜಿತೇಂದ್ರ ತಿವಾರಿ, ಕರ್ನಲ್ ದೀಪತಂಗು ಚೌಧರಿ, ಮಿಹಿರ್ ಗೋಸ್ವಾಮಿ ರಾಜೀನಾಮೆ ನೀಡಿದ್ದಾರೆ. ಸುವೇಂದು ಅವರು ಬಿಜೆಪಿ ಸೇರಿರುವುದರಿಂದ ಹಿಂದುಳಿದ, ಅಲ್ಪ ಸಂಖ್ಯಾತ ಸಮುದಾಯ ಸೆಳೆಯಲು ಸಮರ್ಥ ನಾಯಕರೊಬ್ಬರು ದೊರೆತಂತೆ ಆಗಿದೆ. ಸುವೇಂದು ಕನಿಷ್ಠ 40 ರಿಂದ 45 ವಿಧಾನಸಭೆ ಕ್ಷೇತ್ರಗಳಲ್ಲಿ ತಮ್ಮ ಪ್ರಭಾವವನ್ನು ಹೊಂದಿದ್ದಾರೆ.
39 ವರ್ಷ ವಯಸ್ಸಿನ ಲಕ್ಷ್ಮಿ ರತನ್ ಶುಕ್ಲಾ ಅವರು ಪಶ್ಚಿಮ ಬಂಗಾಳ ರಣಜಿ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಹೌರಾ(ಉತ್ತರ) ವಿಧಾನಸಭಾ ಕ್ಷೇತದ ಶಾಸಕರಾಗಿದ್ದಾರೆ.
ಸಿಎಂ ಮಮತಾ ಪ್ರತಿಕ್ರಿಯೆ: ಯಾರು ಬೇಕಾದರೂ ರಾಜೀನಾಮೆ ಸಲ್ಲಿಸಬಹುದು. ಕ್ರೀಡೆಗೆ ಹೆಚ್ಚಿನ ಸಮಯ ನೀಡಬೇಕು ಎಂದು ಅವರು (ಲಕ್ಷ್ಮಿ ರತನ್ ಶುಕ್ಲಾ) ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಆದರೆ, ಶಾಸಕರಾಗಿ ಮುಂದುವರೆಯುವುದಾಗಿ ಹೇಳಿದ್ದಾರೆ. ಇದನ್ನು ತಪ್ಪಾಗಿ ಪರಿಗಣಿಸಬೇಕಾಗಿಲ್ಲ ಎಂದಿದ್ದಾರೆ.