ಮತ್ತೆ ರಣಕಹಳೆ ಊದಿದ ಮಮತಾ, ಬಿಜೆಪಿ ವಿಜಯಯಾತ್ರೆಗೆ ನಿಷೇಧ
ಕೋಲ್ಕತ್ತಾ, ಜೂನ್ 07: ಬಿಜೆಪಿ ಮತ್ತು ಮಮತಾ ಬ್ಯಾನರ್ಜಿ ನಡುವಿನ ವೈಮನಸ್ಯ ತಾರಕಕ್ಕೇರಿದ್ದು, ಚುನಾವಣೆ ಫಲಿತಾಂಶದ ನಂತರೂ ಬಿಜೆಪಿ ವಿರುದ್ಧದ ತಮ್ಮ ಸಮರವನ್ನು ಮಮತಾ ಬ್ಯಾನರ್ಜಿ ಮುಂದುವರೆಸಿದ್ದಾರೆ.
ಅದಕ್ಕೆ ಸಾಕ್ಷಿ ಎಂಬಂತೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ವಿಜಯ ಯಾತ್ರೆಯನ್ನು ಮಮತಾ ಬ್ಯಾನರ್ಜಿ ನಿಷೇಧಿಸಿದ್ದಾರೆ. "ಬಿಜೆಪಿಯಿಂದಾಗಿ ರಾಜ್ಯದಲ್ಲಿ(ಪಶ್ಚಿಮ ಬಂಗಾಳ) ಹಿಂಸಾಚಾರ ನಡೆಯುತ್ತಿದ್ದು ಆದ್ದರಿಂದ ವಿಜಯಯಾತ್ರೆಗೆ ನಾನು ಅನುಮತಿ ನೀಡುವುದಿಲ್ಲ. ನನಗೆ ಬಂದ ಮಾಹಿತಿಯ ಪ್ರಕಾರ ರಾಜ್ಯದ ಹೂಗ್ಲಿ, ಬಂಕುರಾ, ಪುರುಲಿಯಾ ಮತ್ತು ಮಿಡ್ನಾಪೋರ್ ಗಳಲ್ಲಿ ವಿಜಯ ಯಾತ್ರೆಯ ಹೆಸರಿನಲ್ಲಿ ಬಿಜೆಪಿ ಹಿಂಸಾಚಾರ ನಡೆಸಲು ಉದ್ದೇಶಿಸಿದೆ. ಆದ್ದರಿಂದ ಯಾವುದೇ ವಿಜಯಯಾತ್ರೆಗೆ ನಾನು ಅವಕಾಶ ನೀಡುವುದಿಲ್ಲ" ಎಂದು ಅವರು ಹೇಳಿದ್ದಾರೆ.
'ನಮ್ಮ ತಂಟೆಗೆ ಬಂದ್ರೆ ಮುಗಿಸಿಬಿಡ್ತೀವಿ!' ಹೂಂಕರಿಸಿದ ಮಮತಾ ಬ್ಯಾನರ್ಜಿ
"ರಾಜ್ಯದಲ್ಲಿ ಯಾವುದೇ ಹಿಂಸಾಚಾರದ ಘಟನೆ ವರದಿಯಾದರೆ ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಈಗಾಗಲೇ ನಾನು ಪೊಲೀಸರಿಗೆ ಸೂಚಚಿಸಿದ್ದೇನೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಬಿಜೆಪಿಯ ಗೆಲುವಿಗೆ ಪಣತೊಟ್ಟವರಲ್ಲಿ ಮಮತಾ ಬ್ಯಾನರ್ಜಿಗೆ ಅಗ್ರಸ್ಥಾನ!
ಇದಕ್ಕೂ ಮುನ್ನ ಬಿಜೆಪಿ ವಿರುದ್ಧ ಕಿಡಿ ಕಾರಿದ್ದ ಮಮತಾ ಬ್ಯಾನರ್ಜಿ, ಹಿಂದುಗಳು ತ್ಯಾಗಕ್ಕೆ ಹೆಸರಾದವರು, ಮುಸ್ಲಿಮರು ಸಮಗ್ರತೆಗೆ ಹೆಸರಾದವರು, ಕ್ರೈಸ್ತರು ಪ್ರೀತಿ, ಸಿಕ್ಖರು ಬಲಿದಾನಕ್ಕೆ ಹೆಸರಾದವರು. ಇದು ನಮ್ಮ ಹಿಂದುಸ್ಥಾನ, ನಾವು ಅದನ್ನು ಕಾಪಾಡುತ್ತೇವೆ. ಯಾರಾದರೂ ನಮ್ಮ ತಂಟೆಗೆ ಬಂದರೆ ಅಂಥವರನ್ನು ನಾಶ ಮಾಡುತ್ತೇವೆ. ಇದೇ ನಮ್ಮ ಘೋಷ ವಾಕ್ಯ" ಎಂದಿದ್ದರು.