ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ಶೋಭಾಯಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮ ರದ್ದು
ಕೋಲ್ಕತ್ತಾ, ಅಕ್ಟೋಬರ್ 06: ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆಯ ಸಾಧ್ಯತೆಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ಮಂಗಳವಾರ ಪ್ರತಿ ವರ್ಷ ಆಚರಣೆ ಮಾಡಲಾಗುವ ದುರ್ಗಾ ಪೂಜೆಯ ಶೋಭಾಯಾತ್ರೆಯನ್ನು ರದ್ದು ಮಾಡಿದೆ.
ದುರ್ಗಾ ಪೂಜೆಯ ಬಳಿಕ ದೇವಿಯ ಮೂರ್ತಿಯನ್ನು ಕೆರೆಯಲ್ಲಿ ಜಳಕ ಮಾಡಿಸುವ ಪದ್ಧತಿ ಇದೆ. ಇದಕ್ಕೂ ಮುನ್ನ ಊರಿನ ಜನರು ಸೇರಿ ಶೋಭಾಯಾತ್ರೆಯನ್ನು ನಡೆಸುತ್ತಾರೆ. ಇದರಲ್ಲಿ ಸಾವಿರಾರು ಮಂದಿ ಭಾಗಿಯಾಗುತ್ತಾರೆ. ಈ ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ಈಗ ಪಶ್ಚಿಮ ಬಂಗಾಳದಲ್ಲಿ ಈ ವರ್ಷ ದುರ್ಗಾ ಪೂಜೆಯ ಶೋಭಾಯಾತ್ರೆಯನ್ನು ರದ್ದು ಮಾಡಲಾಗಿದೆ.
ಮೈಸೂರು ದಸರಾ; ದೀಪಾಲಂಕಾರ ಕಣ್ತುಂಬಿಕೊಳ್ಳಲು ನಿಯಮಗಳು
ಇನ್ನು ಪಶ್ಚಿಮ ಬಂಗಾಳ ಸರ್ಕಾರವು ಹೊರಡಿಸಿರುವ ನೂತನ ಆದೇಶದಲ್ಲಿ ದುರ್ಗಾ ಪೂಜೆ ನಡೆಯುವ ಪ್ರದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸುವುದಕ್ಕೆ ನಿಷೇಧ ಹೇರಲಾಗಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸ್ಯಾನಿಟೈಸರ್ ಉಪಯೋಗ ಮಾಡಬೇಕು ಎಂದು ಕೂಡಾ ಹೇಳಲಾಗಿದೆ.
"ಈ ಕೊರೊನಾ ವೈರಸ್ ಸಂದರ್ಭದಲ್ಲಿ ಜನರು ದೈಹಿಕ ಅಂತರ ಕಾಪಾಡಿಕೊಳ್ಳುವುದು ಅತೀ ಮುಖ್ಯ. ಆದ್ದರಿಂದ ಈ ವರ್ಷ ದುರ್ಗಾ ಪೂಜೆ ಸಂದರ್ಭದಲ್ಲಿ ಶೋಭಾ ಯಾತ್ರೆಯನ್ನು ನಡೆಸುವಂತಿಲ್ಲ. ಹಾಗೆಯೇ ಪೂಜಾ ಸ್ಥಳದ ಸಮೀಪದಲ್ಲಿ ಮೇಳ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬೇರೆ ಆಚರಣೆಗಳನ್ನು ನಡೆಸುವಂತಿಲ್ಲ," ಎಂದು ಆದೇಶವು ತಿಳಿಸಿದೆ.
ಇನ್ನು ಮಂಟಪವನ್ನು ಎಲ್ಲಾ ಕಡೆಯಿಂದ ತೆರೆದು ಇರುವಂತೆ ಇರಿಸಲು ಕೂಡಾ ಸೂಚನೆ ನೀಡಲಾಗಿದೆ. "ಎಲ್ಲಾ ಪೂಜಾ ಸ್ಥಳದಲ್ಲಿ ಅಧಿಕ ಸ್ಥಳವಕಾಶ ಇರಬೇಕು, ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗುವ ರೀತಿಯಲ್ಲಿ ಪೂಜಾ ಸ್ಥಳವು ಇರಬೇಕು. ಜನರು ಪ್ರವೇಶ ಮಾಡಲು ಒಂದು ಪ್ರವೇಶ ದ್ವಾರ ಹಾಗೂ ಜನರು ನಿರ್ಗಮಿಸಲು ನಿರ್ಗಮ ದ್ವಾರ ಇರಬೇಕು. ಅದು ಬೇರೆ ಬೇರೆಯಾಗಿ ಇರಬೇಕು," ಎಂದು ತಿಳಿಸಲಾಗಿದೆ.
ಮೈಸೂರು ದಸರಾ ಆಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ
ಇನ್ನೊಂದೆಡೆ ರಾಜ್ಯ ಸರ್ಕಾರವು ಈ ಹಬ್ಬದ ಸಂದರ್ಭದಲ್ಲಿ ಕೋಲ್ಕತ್ತಾ ಮೆಟ್ರೋ ಸಮಯವನ್ನು ಬದಲಾವಣೆ ಮಾಡಿದೆ. ಈ ಹಬ್ಬದ ಸಂದರ್ಭದಲ್ಲಿ ಸರಾಗ ಸಂಚಾರಕ್ಕಾಗಿ ಈ ಬದಲಾವಣೆಯನ್ನು ಮಾಡಲಾಗಿದೆ. ಆದೇಶದ ಪ್ರಕಾರ, ದುರ್ಗಾ ಪೂಜಾ ಸಂದರ್ಭದಲ್ಲಿ ಮೆಟ್ರೋದ ಸಮಯವು ಬದಲಾವಣೆ ಆಗಲಿದೆ. ಅಕ್ಟೋಬರ್ 12, 13 ಮತ್ತು 14 ರಂದು ಈ ಬದಲಾವಣೆ ಆಗಲಿದೆ. ಮೊದಲ ಮೆಟ್ರೋ ರೈಲು ಬೆಳಿಗ್ಗೆ ಹತ್ತು ಗಂಟೆಗ ಆರಂಭವಾಗಲಿದೆ. ರಾತ್ರಿ ಹನ್ನೊಂದು ಗಂಟೆಯವರೆಗೆ ರೈಲು ಇರಲಿದೆ ಎಂದು ಸರ್ಕಾರವು ಹೇಳಿದೆ.
(ಒನ್ಇಂಡಿಯಾ ಸುದ್ದಿ)