ಮತದಾರ ಹೀಗೇಕೆ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸ ಮತ್ತು ಭವಿಷ್ಯ
ಕೋಲ್ಕತ್ತಾ, ಮಾರ್ಚ್.02: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆ ಜನಮನ ಸೆಳೆಯುವುದಕ್ಕಾಗಿ ಎಡಪಕ್ಷ, ಕಾಂಗ್ರೆಸ್ ಮತ್ತು ಇಂಡಿಯನ್ ಸೆಕ್ಯೂಲರ್ ಫ್ರಂಟ್ ಪಕ್ಷಗಳು ಜಂಟಿಯಾಗಿ ಚುನಾವಣಾ ಪ್ರಚಾರ ನಡೆಸಿವೆ.
ಫೆಬ್ರವರಿ.28ರಂದು ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಎಡಪಕ್ಷ ಆಯೋಜಿಸಿದ್ದ ಚುನಾವಣಾ ಪ್ರಚಾರದಲ್ಲಿ ಭಾರೀ ಸಂಖ್ಯೆ ಜನರು ಸೇರಿದ್ದರು. ರಾಜ್ಯ ರಾಜಕೀಯದಲ್ಲಿ ಬದಲಾವಣೆ ಗಾಳಿ ಬೀಸುತ್ತದೆಯೇ ಎಂಬ ಸೂಚನೆ ಗೋಚರಿಸುತ್ತಿತ್ತು.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ; ತೃಣಮೂಲಕ್ಕೆ ಬಲ ತುಂಬಲು ಆರ್ಜೆಡಿ ಜೊತೆ ಮೈತ್ರಿ?
ಎಡಪಕ್ಷ, ಕಾಂಗ್ರೆಸ್ ಮತ್ತು ಐಎಸ್ಎಫ್ ಚುನಾವಣಾ ಪ್ರಚಾರದಲ್ಲಿ "ಅಮ್ರಾಯ್ ಬಿಕಲ್ಪಾ(ನಾವೇ ಪರ್ಯಾಯ). ಅಮ್ರೈ ಧರ್ಮನಿರಪಕ್ಷ(ನಾವು ಜಾತ್ಯಾತೀತರು). ಅಮ್ರಾಯ್ ಭೋಬಿಶ್ಯತ್(ನಾವೇ ಭವಿಷ್ಯ)" ಎಂಬ ಘೋಷಣೆಯ ಬಾವುಟ ಮತ್ತು ಭಿತ್ತಿಪತ್ರಗಳು ರಾರಾಜಿಸುತ್ತಿದ್ದವು. ಆದರೆ ಪ್ರಚಾರದಲ್ಲಿ ಸೇರಿದ ಜನರೆಲ್ಲ ಅದೇ ಪಕ್ಷಕ್ಕೆ ಮತ ನೀಡುತ್ತಾರೆಯೇ. ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಚಿತ್ರಣ ಮತ್ತು ಪ್ರಚಾರದ ಭರಾಟೆ ಹೇಗಿತ್ತು. ಈ ಹಿಂದೆ ಇಂಥದ್ದೇ ಚುನಾವಣಾ ರ್ಯಾಲಿಗಳು ಮತ್ತು ಚುನಾವಣಾ ನಂತರದ ಫಲಿತಾಂಶದ ಕಥೆ ಏನಾಯಿತು ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.
ಜನರು ಚದುರಿದ ಮೇಲೆ ಉಳಿದ ಒಂದೇ ಒಂದು ಪ್ರಶ್ನೆ?
ಕಾಂಗ್ರೆಸ್ ಮೈತ್ರಿಪಕ್ಷಗಳು ನಡೆಸಿದ ಚುನಾವಣಾ ಪ್ರಚಾರದಲ್ಲಿ ಸೇರಿದ ಲಕ್ಷಾಂತರ ಜನರನ್ನು ಕಂಡು ಸ್ವತಃ ಪಶ್ಚಿಮ ಬಂಗಾಳದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಮತ್ತು ಎಡಪಕ್ಷಗಳ ಮುಖ್ಯಸ್ಥ ಬಿಮನ್ ಬಸು ನಿಬ್ಬೆರಗಾದರು. ನಾಯಕರ ಮುಖದಲ್ಲಿ ಲಕ್ಷಾಂತರ ಜನರ ಸಮೂಹವು ನಗು ಮೂಡಿಸಿದೆ. ಇದೇ ನಗು ನಾಯಕರ ಮುಖದಲ್ಲಿ ಮೇ.2ರ ನಂತರವೂ ಶಾಶ್ವತವಾಗಿ ಉಳಿಯುತ್ತದೆಯೇ ಎನ್ನುವುದಕ್ಕೆ ಫಲಿತಾಂಶ ಉತ್ತರ ನೀಡಲಿದೆ.
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ದೀದಿಗೆ ಮತದಾರ ಪಾಠ: ಅಬ್ಬಾಸ್ ಸಿದ್ದಿಕಿ
ಕರಾಳ ಇತಿಹಾಸಕ್ಕೆ ಲೋಕಸಭಾ ಚುನಾವಣೆ ಸಾಕ್ಷಿ
ಪಶ್ಚಿಮ ಬಂಗಾಳದಲ್ಲಿ ಲಕ್ಷಾಂತರ ಸಂಖ್ಯೆಯ ಜನರು ಸೇರಿದಾಕ್ಷಣಕ್ಕೆ ಪಕ್ಷದ ಪರ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಅಂದಾಜಿಸುವಂತಿಲ್ಲ. ಏಕೆಂದರೆ ಕಳೆದ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ "ಒಕ್ಕೂಟ ಭಾರತ" ಅಡಿಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಭರ್ಜರಿ ಪ್ರಚಾರ ನಡೆಸಿದರು. ಇದಕ್ಕೆ ತಿರುಗೇಟು ನೀಡುವ ನಿಟ್ಟಿನಲ್ಲಿ ಎಡಪಕ್ಷವು 2019ರ ಫೆಬ್ರವರಿ.03ರಂದು ಶಕ್ತಿ ಪ್ರದರ್ಶಿಸುವ ನಿಟ್ಟಿನಲ್ಲಿ ನಡೆಸಿದ ಚುನಾವಣಾ ಪ್ರಚಾರದಲ್ಲಿ ಲಕ್ಷಾಂತರ ಜನರು ಸೇರಿದ್ದರು. ಅದನ್ನು ಕಂಡು ಸ್ವತಃ ತೃಣಮೂಲ ಕಾಂಗ್ರೆಸ್ ಪಕ್ಷ ಒಂದು ಕ್ಷಣ ಬೆಚ್ಚಿ ಬೀಳುವಂತಿತ್ತು. ಆದರೆ ಏಳು ಹಂತಗಳ ಮತದಾನ ಪ್ರಕ್ರಿಯೆ ಮುಗಿದ ನಂತರದಲ್ಲಿ 2019ರ ಮೇ.23ರಂದು ಹೊರಬಂದ ಫಲಿತಾಂಶದಲ್ಲಿ ಎಡಪಕ್ಷವು ಒಂದೇ ಒಂದು ಸ್ಥಾನವನ್ನೂ ಕೂಡಾ ಗೆದ್ದಿರಲಿಲ್ಲ.
ಲೋಕಸಭೆಯಲ್ಲಿ ಎಡಪಕ್ಷಕ್ಕೆ ಭಾರಿ ಹಿನ್ನಡೆ
ರಾಜ್ಯದಲ್ಲಿ ಎಡಪಕ್ಷಕ್ಕೆ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಪಡೆದ ಮತಗಳ ನಡುವೆಯೇ ಭಾರಿ ಅಂತರ ಕಂಡು ಬಂದಿತ್ತು. ಕಳೆದ ಬಾರಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಎಡಪಕ್ಷಕ್ಕೆ ಶೇ.26ರಷ್ಟು ಮತಗಳು ಬಿದ್ದಿದ್ದವು. ಅದೇ ಎಡಪಕ್ಷಕ್ಕೆ 2019ರ ಲೋಕಸಭಾ ಚುನಾವಣೆಯಲ್ಲಿ ಮತಗಳ ಶೇಕಡಾವಾರು ಪ್ರಮಾಣವು ಶೇ.7.52ಕ್ಕೆ ಇಳಿಕೆಯಾಗಿತ್ತು. ಈ ಅಂಕಿ-ಅಂಶಗಳು ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿತ್ತು.
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಹೊಸ ಸಿದ್ದಾಂತ
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದ ಸಂದರ್ಭಗಳಲ್ಲಿ ಲಕ್ಷ ಲಕ್ಷ ಜನರು ಎಲ್ಲ ಪಕ್ಷಗಳ ಪರವಾಗಿ ಪ್ರಚಾರದ ಅಖಾಡಕ್ಕೆ ಇಳಿಯುತ್ತಾರೆ. ಕಳೆದ ಲೋಕಸಭಾ ಚುನಾವಣೆ ವೇಳೆ ಎಡಪಕ್ಷಗಳ ಪ್ರಚಾರದಲ್ಲಿ ಅಷ್ಟೊಂದು ಜನರು ಭಾಗವಹಿಸಿದ್ದರೂ ಶೇಕಡಾವಾರು ಪ್ರಮಾಣವೇಕೆ ಕುಸಿಯಿತು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇದರ ಅರ್ಥ ಬೇರೇನೂ ಇಲ್ಲ. ಪಕ್ಷಗಳ ಪ್ರಚಾರ ಸಭೆಗಳಲ್ಲಿ ಹಾಜರ್ ಆಗುವ ಜನರೆಲ್ಲ ಅದೇ ಪಕ್ಷಕ್ಕೆ ಮತ ಹಾಕುವುದಿಲ್ಲ ಎಂದ ಸಿದ್ದಾಂತವನ್ನು ಪಶ್ಚಿಮ ಬಂಗಾಳದ ಮತದಾರರು ಈ ಹಿಂದಿನ ಚುನಾವಣೆಗಳಲ್ಲಿಯೇ ಸಾರಿ ಹೇಳಿದ್ದಾರೆ.
ಎಬಿಪಿ ಸಮೀಕ್ಷೆ: ಬೆಂಗಾಳದಲ್ಲಿ ಬಿಜೆಪಿ ಏಳಿಗೆ ನಡುವೆ ಟಿಎಂಸಿಗೆ ಗೆಲುವು
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಗ್ಗೆ ಉಲ್ಲೇಖ
ರಾಜ್ಯದ ಐದು ವಿಭಿನ್ನ ಸ್ಥಳಗಳಲ್ಲಿ ಒಬ್ಬರು ಸಭೆಗಳನ್ನು ನಡೆಸುತ್ತಾರೆ ಅಂದರೆ ಅವರು ಮತದಾರರ ಮನಸ್ಥಿತಿಯ ಬಗ್ಗೆ ಅರಿವು ಹೊಂದಿರುತ್ತಾರೆ. ಐದೂ ಕಡೆಗಳಲ್ಲಿ ಪ್ರಚಾರದ ಪ್ರಮುಖ ಕೇಂದ್ರ ಮತವೇ ಆಗಿರುತ್ತದೆ. 1977ರಲ್ಲಿ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ಪ್ರಚಾರ ನಡೆಸಿದ ಸಂದರ್ಭದಲ್ಲಿ ರಾಜ್ಯದಲ್ಲಿ ಈಗ ಸೇರಿರುವ ಜನಕ್ಕಿಂತಲೂ ದುಪ್ಪಟ್ಟು ಜನರು ಸೇರಿದ್ದರು. ಆದರೆ ಅದೇ ವರ್ಷ ಇಂದಿರಾ ಗಾಂಧಿ ಮತ್ತು ಅವರ ಪಕ್ಷವು ಹೀನಾಯವಾಗಿ ಸೋಲು ಕಂಡಿತ್ತು ಎಂದು ಪಶ್ಚಿಮ ಬಂಗಾಳದ ಸಚಿವ ಸುಬ್ರಾತ್ ಮುಖರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಚಿತ್ರಣ ಬದಲು
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎಡಪಂಥೀಯರೇ ಎಡಪಂಥೀಯ ಪಕ್ಷಗಳಿಗೆ ಮತ ನೀಡಿಲ್ಲ ಎನ್ನುವ ವಾದವನ್ನು ಒಪ್ಪಿಕೊಳ್ಳುವುದಕ್ಕೆ ರಾಜಕೀಯ ವಿಶ್ಲೇಷಕ ಶುಭಾಮೊಯ್ ಮೈತ್ರಾ ನಿರಾಕರಿಸಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದ ಉದ್ದೇಶದಿಂದ ಜನರು ಮತ ಚಲಾಯಿಸಿದ್ದಾರೆ. ರಾಜ್ಯದಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಚಿತ್ರಣ ಬದಲಾಗಿದೆ. ಟಿಎಂಸಿ ಮತ್ತು ಬಿಜೆಪಿ ವಿರುದ್ಧ ಹೋರಾಟಬಹುದು ಎನ್ನುವಂತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯತೆಯ ಮನೋಭಾವದಿಂದ ಬಿಜೆಪಿಗೆ ಬಲ
ಪಶ್ಚಿಮ ಬಂಗಾಳದಲ್ಲಿ 3 ವರ್ಷಗಳ ಹಿಂದೆಯಷ್ಟೇ ನಡೆದ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಶೇ.10ರಷ್ಟು ಮತಗಳು ಬಿದ್ದಿದ್ದವು. ಅದಾಗಿ ಎರಡೇ ವರ್ಷಕ್ಕೆ 2019ರಲ್ಲಿ ಬಿಜೆಪಿಗೆ ಶೇ.40.23ರಷ್ಟು ಮತಗಳು ಬಂದಿವೆ. ಇದರ ಹಿಂದೆ ಎಡಪಕ್ಷಗಳ ಬೆಂಬಲವೂ ಸಹ ಅಡಗಿದೆ ಎಂದು ಕೆಲವು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಟಿಎಂಸಿಯನ್ನು ತೊಡೆದು ಹಾಕುವ ಉದ್ದೇಶದಿಂದ ಬಿಜೆಪಿಗೆ ಬಲಪಡಿಸುವ ಕಾರ್ಯವನ್ನು ಎಡಪಕ್ಷಗಳೇ ಮಾಡಿವೆ. ಇದರ ಜೊತೆಗೆ 2019ರಲ್ಲಿ ನಡೆದ ಪುಲ್ವಾಮಾ ಉಗ್ರ ದಾಳಿಯಲ್ಲಿ ಕೇಂದ್ರದ ನಿರ್ಧಾರದಿಂದ ಜನರಲ್ಲಿ ರಾಷ್ಟ್ರೀಯತೆ ಮನೋಭಾವ ಹೆಚ್ಚಿತು. ಜನರ ರಾಷ್ಟ್ರೀಯತೆ ಮನೋಭಾವವೇ ಬಿಜೆಪಿಗೆ ಬಲ ತುಂಬಿತು ಎಂದು ವಿಶ್ಲೇಷಿಸಲಾಗಿದೆ.
ಬಿಜೆಪಿ ಬಗ್ಗೆ ಜನರಲ್ಲಿ ಮೊದಲಿನ ಅಭಿಪ್ರಾಯವಿಲ್ಲ
ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಜನರು ಬಾಲ್ ಕೋಟ್ ಮತ್ತು ಪುಲ್ವಾಮಾ ದಾಳಿಯ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಜನರು ಮತದಾನ ಮಾಡಿದ್ದರು. ಆದರೆ ಲೋಕಸಭಾ ಚುನಾವಣೆ ಬಳಿಕ ಚಿತ್ರಣ ಬದಲಾಗಿದೆ. ಬಿಜೆಪಿ ಬಗ್ಗೆ ಜನರಲ್ಲಿ ಮೊದಲಿನ ಅಭಿಪ್ರಾಯವಿಲ್ಲ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ರಚಿಸಿದೆಯಾದರೂ ಅದೇನು ಹೇಳಿಕೊಳ್ಳುವಂತಾ ಗೆಲುವು ಅಲ್ಲ. ಕೇವಲ 12000 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಬಾರಿ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಹಾಗೆ ಆಗುವುದಿಲ್ಲ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಶಮಿಕ್ ಲಾಹಿರಿ ತಿಳಿಸಿದ್ದಾರೆ.
ಮಿತ್ರಪಕ್ಷಗಳಿಂದ ಬಿಜೆಪಿ, ಟಿಎಂಸಿ ವಿರುದ್ಧ ಅಸ್ತ್ರ
ಪಶ್ಚಿಮ ಬಂಗಾಳದಲ್ಲಿ ಅಸ್ತಿತ್ವ ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಎಡಪಕ್ಷವು ಹೊಸ ರಾಜಕೀಯ ಲೆಕ್ಕಾಚಾರಗಳನ್ನು ಹಾಕಿಕೊಂಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಡಿದ್ದ ಎಡಪಕ್ಷ 2016ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಇದೀಗ ಕಾಂಗ್ರೆಸ್ ಮತ್ತು ಐಎಸ್ಎಫ್ ಜೊತೆ ಎಡಪಕ್ಷ ಮೈತ್ರಿ ರಚಿಸಿಕೊಂಡು ಚುನಾವಣೆ ಎದುರಿಸಲು ಮುಂದಾಗಿದೆ. ಈ ಬಾರಿ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ರಾಜ್ಯದ ಟಿಎಂಸಿ ಸರ್ಕಾರಗಳು ಜನರ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ. 570 ರೂಪಾಯಿ ಅಡುಗೆ ಅನಿಲದ ಬೆಲೆ 850 ರೂಪಾಯಿಗೆ ಏಕೆ ಹೆಚ್ಚಳವಾಯಿತು. ರಾಜ್ಯದಲ್ಲಿ ಒಂದೇ ಒಂದು ಕಾರ್ಖಾನೆ ಸ್ಥಾಪನೆ ಮಾಡುವುದರಲ್ಲಿ ಸರ್ಕಾರ ಏಕೆ ವಿಫಲವಾಯಿತು ಎನ್ನುವುದಕ್ಕೆ ಸರ್ಕಾರಗಳೇ ಉತ್ತರದಾಯಿ ಎಂದು ಶಮಿಕ್ ಲಾಹಿರಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಮತದಾನ
ಕಳೆದ ಫೆಬ್ರವರಿ.26ರಂದು ನಾಲ್ಕು ರಾಜ್ಯ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಾನಸಭಾ ಚುನಾವಣೆ ನಡೆಸುವುದಕ್ಕೆ ಕೇಂದ್ರ ಚುನಾವಣಾ ಆಯೋಗವು ದಿನಾಂಕ ಘೋಷಿಸಿತು. ಈ ಪೈಕಿ ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಮಾರ್ಚ್.27ರಿಂದ ಆರಂಭವಾಗಲಿರುವ ಚುನಾವಣೆಯು ಏಪ್ರಿಲ್.29ರಂದು ಮುಕ್ತಾಯಗೊಳ್ಳಲಿದ್ದು, ಮೇ.02ರಂದು ಫಲಿತಾಂಶ ಹೊರ ಬೀಳಲಿದೆ.