ಸಿಟ್ಟೆಂದರೆ ಸಿಟ್ಟು ಅದು ದೀದಿ ಸಿಟ್ಟು: ಪಿಎಂ ಸಭೆಗೆ ಮತ್ತೆ ನೋ ಎಂದ ಮಮತಾ
ಕೋಲ್ಕತ್ತಾ, ಜೂನ್ 18: ಪ್ರಧಾನಮಂತ್ರಿಯಾಗಿ ಎರಡನೇ ಬಾರಿ ಮೋದಿಯ ಪ್ರಮಾಣವಚನಕ್ಕೂ ಬರಲಿಲ್ಲ, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ನೀತಿ ಆಯೋಗದ ಸಭೆಗೂ ಹೋಗಲಿಲ್ಲ. ಬುಧವಾರ ನಡೆಯಲಿರುವ ಪ್ರಧಾನಿ ಮೋದಿ ಸಭೆಗೂ ಬರುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಪ್ರಲ್ಹಾದ್ ಜೋಶಿಗೆ ಬರೆದ ಪತ್ರದಲ್ಲಿ, ಮೊದಲು ಪ್ರಧಾನಮಂತ್ರಿ ಕಾರ್ಯಾಲಯ ಶ್ವೇತ ಪತ್ರವನ್ನು ಹೊರಡಿಸಲಿ. ತರಾತುರಿಯ ನಿರ್ಧಾರ ಬೇಡ ಎಂದು ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ.
ಬಿಟ್ಟು ಹೋಗುವವರು ಹೋಗಲಿ, ಡೋಂಟ್ ಕೇರ್: ಮಮತಾ ಬ್ಯಾನರ್ಜಿ
ಒಂದು ದೇಶ, ಒಂದು ಚುನಾವಣೆ (One Nation, One Election) ಸಂಬಂಧ ಎಲ್ಲಾ ಪಕ್ಷಗಳ ಪ್ರಮುಖರ ಸಭೆಯನ್ನು ಬುಧವಾರ (ಜೂ 19) ಪ್ರಧಾನಮಂತ್ರಿ ಕಾರ್ಯಾಲಯ ಆಯೋಜಿಸಿತ್ತು. ಸಭೆಗೆ ಸಂಬಂಧಿಸಿದಂತೆ, ಪ್ರಲ್ಹಾದ್ ಜೋಶಿ, ಪತ್ರವನ್ನು ಬರೆದಿದ್ದರು. ಇದಕ್ಕೆ ಪತ್ರ ಮೂಲಕವೇ ಮಮತಾ ತಮ್ಮ ನಿಲುವನ್ನು ತಿಳಿಸಿದ್ದಾರೆ.
"ಒಂದು ದೇಶ, ಒಂದು ಚುನಾವಣೆ" ಸಂಬಂಧಿಸಿದಂತೆ, ಸಭೆ ಕರೆಯುವ ಮೊದಲು, ಎಲ್ಲಾ ಪಕ್ಷಗಳ ನಿಲುವನ್ನು ತಿಳಿಸುವ ಶ್ವೇತಪತ್ರವನ್ನು ಹೊರಡಿಸಲಿ. ಇದೊಂದು ಸ್ವತಂತ್ರ ಭಾರತದ ಬಹುದೊಡ್ಡ ನಿರ್ಧಾರವಾಗಿರುವುದರಿಂದ, ಸಮರ್ಪಕ ಹೆಜ್ಜೆಯನ್ನು ಇಡಬೇಕಾಗುತ್ತದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಪ.ಬಂಗಾಳದ ಬಿಜೆಪಿ ಸಂಸದನ ಪ್ರಮಾಣವಚನದ ವೇಳೆ ಮೊಳಗಿದ ಜೈಶ್ರೀರಾಂ ಘೋಷಣೆ
ಇದು ಗಂಭೀರವಾಗಿ ಚರ್ಚೆಯಾಗಿ ಅಂತಿಮವಾಗ ಬೇಕಾದಂತಹ ಸೂಕ್ಷ್ಮ ವಿಚಾರ, ಎಲ್ಲಾ ವರ್ಗದವರ ಅಭಿಪ್ರಾಯವನ್ನು ಪಡೆಯಬೇಕಾಗುತ್ತದೆ. ಈ ರೀತಿಯ ಅಲ್ವ ಸಮಯಾವಧಿಯಲ್ಲಿ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತವಲ್ಲ ಎಂದು ಮಮತಾ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ರಾಜಕೀಯ ಪಂಡಿತರ, ಪರಿಣತರ ಅಭಿಪ್ರಾಯಗಳನ್ನು ಕ್ರೋಢೀಕರಿಸಿಕೊಂಡು, ಸಮಯಾವಕಾಶ ಕೊಟ್ಟರೆ, ನಾವೂ ಸೂಕ್ತ ಸಲಹೆಯನ್ನು ನೀಡಬಹುದು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಮಹಾತ್ಮ ಗಾಂಧಿಯವರ 150ನೇ ಜನ್ಮ ವಾರ್ಷಿಕೋತ್ಸವ ಮತ್ತು ಸ್ವಾತಂತ್ರ್ಯೋತ್ಸವದ 75ನೇ ವರ್ಷದ ದಿನಾಚರಣೆಯ ಸಂಬಂಧದ ಕಾರ್ಯಕ್ರಮಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.