ನಮಗೆ ಮಾತ್ರ ಏಕೆ 8 ಹಂತ?: ಚುನಾವಣಾ ಆಯೋಗಕ್ಕೆ ಮಮತಾ ಬ್ಯಾನರ್ಜಿ ಪ್ರಶ್ನೆ
ಕೋಲ್ಕತಾ, ಫೆಬ್ರವರಿ 26: ಪಶ್ಚಿಮ ಬಂಗಾಳದ 294 ವಿಧಾನಸಭೆ ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಸುವ ಕೇಂದ್ರ ಚುನಾವಣಾ ಆಯೋಗದ ನಿರ್ಧಾರವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ಅಸ್ಸಾಂನಲ್ಲಿ ಮೂರು ಹಂತದಲ್ಲಿ, ಕೇರಳ ಮತ್ತು ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಸಾಧ್ಯವಾದರೆ ಪಶ್ಚಿಮ ಬಂಗಾಳದಲ್ಲಿ ಏಕೆ ಎಂಟು ಹಂತದಲ್ಲಿ ವಿಂಗಡಿಸಲಾಗಿದೆ ಎಂದು ಅವರು ಕೇಳಿದ್ದಾರೆ. ಬಿಜೆಪಿ ಅನುಕೂಲತೆಗಾಗಿ ಚುನಾವಣಾ ಆಯೋಗ ಈ ನಿರ್ಧಾರ ಮಾಡಿದೆ ಎಂದು ಆರೋಪಿಸಿದ್ದಾರೆ.
ನೀತಿ ಸಂಹಿತೆ ಜಾರಿಯ ಗಂಟೆಯ ಮುನ್ನ ದಿನಗೂಲಿ ವೇತನ ಹೆಚ್ಚಳ ಘೋಷಿಸಿದ ಮಮತಾ ಬ್ಯಾನರ್ಜಿ
'ಇದನ್ನು ಅವರು ಮೋದಿ ಮತ್ತು ಅಮಿತ್ ಶಾ ಅವರ ಸಲಹೆಯಂತೆ ಮಾಡಿರಬಹುದೇ? ಇದನ್ನು ಅವರ ಪ್ರಚಾರಕ್ಕೆ ಅನುಕೂಲಕರವಾಗಿರುವಂತೆ ಮಾಡಿರಬಹುದೇ? ಇದರಿಂದ ಅವರು ಬಂಗಾಳಕ್ಕೆ ಬರುವ ಮುನ್ನ ಅಸ್ಸಾಂ ಮತ್ತು ತಮಿಳುನಾಡಿನಲ್ಲಿ ಪ್ರಚಾರ ಮುಗಿಸಬಹುಲ್ಲವೇ? ಆದರೆ ಇದು ಬಿಜೆಪಿಗೆ ಸಹಾಯ ಮಾಡುವುದಿಲ್ಲ. ನಾವು ಅವರನ್ನು ನಾಶಮಾಡುತ್ತೇವೆ' ಎಂದು ಮಮತಾ ಬ್ಯಾನರ್ಜಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೇಂದ್ರ ಚುನಾವಣಾ ಆಯೋಗವು ಶುಕ್ರವಾರ ಸಂಜೆ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೆರಿ ವಿಧಾನಸಭೆಗಳಿಗೆ ಚುನಾವಣೆ ದಿನಾಂಕಗಳನ್ನು ಪ್ರಕಟಿಸಿದ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಸುದ್ದಿಗೋಷ್ಠಿ ನಡೆಸಿದರು. ಮುಂದೆ ಓದಿ,
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 2021 ದಿನಾಂಕ ಪ್ರಕಟ...
ಬಿಎ ಪಾಠ ಮಾಡುತ್ತಿದ್ದಾರೆ
ಅವರು ಜಿಲ್ಲೆಗಳನ್ನು ಪಾರ್ಟ್ 1 ಮತ್ತು ಪಾರ್ಟ್ 2 ಎಂದು ವಿಭಜಿಸಿದ್ದಾರೆ. ನಾವು ದಕ್ಷಿಣ 24 ಪರಗಣದಲ್ಲಿ ಪ್ರಬಲರಾಗಿರುವುದರಿಂದ ಅಲ್ಲಿ ಮೂರು ಹಂತಗಳಲ್ಲಿ ಚುನಾವಣೆ ಮಾಡಲಾಗುತ್ತಿದೆ. ಅವರು ನಮಗೆ ಬಿಎ ಪಾರ್ಟ್ 1, ಪಾರ್ಟ್ 2.. ಪಾಠ ಮಾಡುತ್ತಿದ್ದಾರೆ ಎಂದು ಮಮತಾ ಕಿಡಿಕಾರಿದರು.
ಬಂಗಾಳ ನನಗೆ ಚೆನ್ನಾಗಿ ಗೊತ್ತು
ಧರ್ಮದ ಆಧಾರದಲ್ಲಿ ಜನರನ್ನು ಒಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. 'ಅವರು ಹಿಂದೂ-ಮುಸ್ಲಿಂ ಆಧಾರದಲ್ಲಿ ಜನರನ್ನು ವಿಭಜಿಸುತ್ತಿದ್ದಾರೆ. ಆಟ ಈಗ ಶುರುವಾಗಿದೆ. ನಾವು ಆಡಿ ಗೆಲ್ಲುತ್ತೇವೆ. ಅವರು ಇಡೀ ದೇಶವನ್ನು ಒಡೆಯುತ್ತಿದ್ದಾರೆ. ಆದರೆ ಕೇಳಿ, ಬಂಗಾಳದ ಬಗ್ಗೆ ನನಗೆ ಬಹಳ ಚೆನ್ನಾಗಿ ತಿಳಿದಿದೆ' ಎಂದರು.
ದುರ್ಬಳಕೆ ಮಾಡಿಕೊಳ್ಳುತ್ತಿದೆ
ಕೇಂದ್ರದಲ್ಲಿ ಆಡಳಿತ ಪಕ್ಷವಾಗಿರುವ ಬಿಜೆಪಿ, ರಾಜ್ಯ ಚುನಾವಣೆಗಳಲ್ಲಿ ಪ್ರಭಾವ ಬೀರಲು ತನ್ನ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ನಮಗೆ ಅವರ ಎಲ್ಲ ಆಟಗಳೂ ತಿಳಿದಿವೆ. ಬಿಜೆಪಿಗೆ ಸಾಂಸ್ಥಿಕ ಅಧಿಕಾರವಿದೆ, ಸರ್ಕಾರದ ಬಲವಿದೆ. ಆದರೆ ಒಂದು ರಾಜ್ಯ ಚುನಾವಣೆಗಾಗಿ ಕೇಂದ್ರ ತನ್ನ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವರು ಅದಕ್ಕೆ ಪ್ರತಿಫಲ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಮಹಿಳೆಯರೇ ತಕ್ಕ ಉತ್ತರ ನೀಡುತ್ತಾರೆ
'ಬಿಜೆಪಿಯು ಬಂಗಾಳವನ್ನು ನಾಶಪಡಿಸಲು ಬಯಸಿದ್ದರೆ... ಅವರಿಗೆ ಎಷ್ಟು ಸಾಧ್ಯವೋ ಎಲ್ಲ ನಾಯಕರನ್ನೂ ಕರೆತರಲಿ. ಆದರೆ ಬಂಗಾಳದ ಜನರು ಪ್ರತಿಕ್ರಿಯಿಸಲಿದ್ದಾರೆ. ರಾಜ್ಯವನ್ನು ಅಗೌರವಿಸುತ್ತಿರುವುದಕ್ಕಾಗಿ ಬಂಗಾಳದ ಮಹಿಳೆಯರು ತಕ್ಕ ಉತ್ತರ ನೀಡಲಿದ್ದಾರೆ' ಎಂದ ಅವರು ಇಡೀ ಭಾರತದಲ್ಲಿ ತಾವೊಬ್ಬರೇ ಮಹಿಳಾ ಮುಖ್ಯಮಂತ್ರಿ ಇರುವುದು ಎಂಬುದನ್ನು ಉಲ್ಲೇಖಿಸಿದರು.