ಮಮತಾ ಬ್ಯಾನರ್ಜಿ ಈ ಪುಟ್ಟ ಕೊಠಡಿಯಲ್ಲಿ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ್ದೇಕೆ? ಸೀಕ್ರೆಟ್ ಬಹಿರಂಗ
ಕೋಲ್ಕತಾ, ಮಾರ್ಚ್ 5: ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿಯಾಗಿ 'ಹ್ಯಾಟ್ರಿಕ್' ಸಾಧಿಸುವ ಗುರಿ ಹೊಂದಿರುವ ಮಮತಾ ಬ್ಯಾನರ್ಜಿ, ಮುಂಬರುವ ಚುನಾವಣೆಗೆ ತೃಣಮೂಲ ಕಾಂಗ್ರೆಸ್ನ 291 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಆಸಕ್ತಿಕರ ಸಂಗತಿಯೆಂದರೆ ಮಮತಾ ಅವರು ಈ ಪಟ್ಟಿ ಬಿಡುಗಡೆ ಮಾಡಿದ್ದು, ಕೋಲ್ಕತಾದ ಕಾಳಿಘಾಟ್ನ ಅತ್ಯಂತ ಕಿರಿದಾದ ಕೊಠಡಿಯಲ್ಲಿ.
ಇಷ್ಟು ಮಹತ್ವದ ಸುದ್ದಿಗೋಷ್ಠಿಯನ್ನು ನಡೆಸಲು ಚಿಕ್ಕ ಕೋಣೆಯನ್ನು ಅವರು ಆಯ್ಕೆ ಮಾಡಿಕೊಂಡಿದ್ದು ಏಕೆ ಎಂಬ ಪ್ರಶ್ನೆ ಮೂಡಬಹುದು. ಇದಕ್ಕೆ ಕಾರಣವಿದೆ. ಈ ಕೊಠಡಿಯು ತಮ್ಮ ಪಾಲಿಗೆ ಅದೃಷ್ಟದ ಜಾಗ ಎಂದೇ ಮಮತಾ ಪರಿಗಣಿಸಿದ್ದಾರೆ. ಅನೇಕ ರಾಜಕೀಯ ಮುಖಂಡರು ಈ ರೀತಿಯ ಅಸಾಧಾರಣ ಶಕ್ತಿಗಳಲ್ಲಿ ನಂಬಿಕೆ ಇರಿಸಿಕೊಂಡಿರುವುದು ಹೊಸದೇನಲ್ಲ. ಅದರಲ್ಲಿಯೂ ಚುನಾವಣೆಯ ಸಂದರ್ಭದಲ್ಲಿ ಅನೇಕ ಪ್ರಮುಖ ರಾಜಕಾರಣಿಗಳು ಕೆಲವು ಸಂಪ್ರದಾಯ, ರೂಢಿಗಳನ್ನು ಪಾಲಿಸುತ್ತಾರೆ. ಆ ಕಾರಣದಿಂದಲೇ ತಮಗೆ ಗೆಲುವು, ಅಧಿಕಾರ ಸಿಗುತ್ತಿರುವುದೆಂದು ನಂಬುತ್ತಾರೆ.
ತೃಣಮೂಲ ಕಾಂಗ್ರೆಸ್ ಪಟ್ಟಿ ಬಿಡುಗಡೆ; ನಂದಿಗ್ರಾಮದ ಕಣದಲ್ಲಿ ಮಮತಾ ಬ್ಯಾನರ್ಜಿ
ಟಿಎಂಸಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಕಾಳಿಘಾಟ್ನ ಈ ಪುಟ್ಟ ಕೊಠಡಿ ಆಯ್ದುಕೊಂಡಿದ್ದರ ಜತೆಗೆ, ತಮ್ಮ ಅದೃಷ್ಟದ ದಿನ ಎಂದೇ ಭಾವಿಸಿರುವ ಶುಕ್ರವಾರವನ್ನೇ ಈ ಶುಭ ಗಳಿಗೆಗಾಗಿ ಆಯ್ಕೆ ಮಾಡಿಕೊಂಡಿದ್ದರು. ಮುಂದೆ ಓದಿ.
10*10 ಅಳತೆಯ ಕೊಠಡಿ
2011 ಮತ್ತು 2016ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗಳ ಸಂದರ್ಭದಲ್ಲಿ ಕೋಲ್ಕತಾದ ಕಾಳಿಘಾಟ್ನ 10*10 ಅಳತೆಯ ಈ ಚಿಕ್ಕ ಕೊಠಡಿಯಲ್ಲಿಯೇ ಮಮತಾ ಬ್ಯಾನರ್ಜಿ ವಿವಿಧ ಸುದ್ದಿಗೋಷ್ಠಿಗಳನ್ನು ನಡೆಸಿದ್ದರು. ಈ ಎರಡೂ ಚುನಾವಣೆಗಳಲ್ಲಿ ಭರ್ಜರಿ ಗೆಲುವುಗಳನ್ನು ಪಡೆದಿದ್ದರು. ಹೀಗಾಗಿಯೇ ಅವರು ಅದನ್ನು ತಮ್ಮ ಅದೃಷ್ಟದ ಜಾಗ ಎಂದು ಪರಿಗಣಿಸಿದ್ದಾರೆ.
ಲೋಕಸಭೆ ಚುನಾವಣೆಯ ಸೋಲು
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರು ಸುದ್ದಿಗೋಷ್ಠಿ ನಡೆಸಲು ಬೇರೆಯ ದೊಡ್ಡ ಸಭಾಂಗಣವನ್ನು ಆಯ್ದುಕೊಂಡಿದ್ದರು. ಆದರೆ ಈ ಚುನಾವಣೆ ಟಿಎಂಸಿಗೆ ಕಹಿ ಫಲಿತಾಂಶ ನೀಡಿತ್ತು. ಎದುರಾಳಿ ಬಿಜೆಪಿ 42 ಲೋಕಸಭಾ ಕ್ಷೇತ್ರಗಳ ಪೈಕಿ 18ರಲ್ಲಿ ಗೆದ್ದು ಅಚ್ಚರಿ ಮೂಡಿಸಿತ್ತು. ಹೀಗಾಗಿ ಮಮತಾ ತಮ್ಮ 'ಲಕ್ಕಿ ಕೊಠಡಿ'ಗೆ ಮರಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 3 ಸಚಿವರು ಸೇರಿ 20 ಶಾಸಕರಿಗೆ ಟಿಎಂಸಿ ಟಿಕೆಟ್ ಇಲ್ಲ!
ಕಿಕ್ಕಿರಿದು ತುಂಬಿದ್ದ ಕೊಠಿಡಿ
ಇಷ್ಟು ದೊಡ್ಡ ಸುದ್ದಿಗೋಷ್ಠಿಗೆ ಚಿಕ್ಕ ಕೊಠಡಿ ಆಯ್ದುಕೊಂಡಿದ್ದು, ಮಾಧ್ಯಮ ಪ್ರತಿನಿಧಿಗಳ ಅಚ್ಚರಿಗೆ ಕಾರಣವಾಯಿತು. ರಾಷ್ಟ್ರೀಯ ಹಾಗೂ ಪ್ರಾದೇಶಿಕ ಮಾಧ್ಯಮಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಿದ್ದರಿಂದ ಒಂದೇ ಬಾಗಿಲಿನ ಕೋಣೆಯೊಳಗೆ ಪ್ರವೇಶಿಸಲು ಸಾಕಷ್ಟು ಸಮಯ ಹಿಡಿಯಿತು. ಕಿಕ್ಕಿರಿದು ತುಂಬಿದ್ದ ಕೊಠಡಿಯಲ್ಲಿ ಮಮತಾ ಪಟ್ಟಿ ಬಿಡುಗಡೆ ಮಾಡಿದರು.
27 ಹೊಸ ಮುಖಗಳು
ಈ ಬಾರಿ 50 ಮಹಿಳಾ ಅಭ್ಯರ್ಥಿಗಳು, 42 ಮುಸ್ಲಿಂ ಅಭ್ಯರ್ಥಿಗಳು, 79 ಪರಿಶಿಷ್ಟ ಜಾತಿ ಹಾಗೂ 17 ಪರಿಶಿಷ್ಟ ವರ್ಗದ ಅಭ್ಯರ್ಥಿಗಳನ್ನು ಟಿಎಂಸಿಯಿಂದ ಕಣಕ್ಕೆ ಇಳಿಸಲಾಗುತ್ತಿದೆ. ಹಲವು ಕಾರಣಗಳಿಂದಾಗಿ 27-28 ಅಭ್ಯರ್ಥಿಗಳನ್ನು ಈ ಬಾರಿ ಮರಳಿ ತಂದಿಲ್ಲ. 80 ವರ್ಷ ಮೇಲ್ಪಟ್ಟ ಯಾರಿಗೂ ಟಿಕೆಟ್ ನೀಡಿಲ್ಲ. 27 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.