ಶಾಸಕನ ಹತ್ಯೆ: ಆರೋಪಪಟ್ಟಿಯಲ್ಲಿ ಬಿಜೆಪಿ ಉಪಾಧ್ಯಕ್ಷ ಮುಕುಲ್ ರಾಯ್ ಹೆಸರು
ಕೋಲ್ಕತಾ, ಡಿಸೆಂಬರ್ 5: ನಾಡಿಯಾ ಜಿಲ್ಲೆಯಲ್ಲಿ ನಡೆದ ತೃಣಮೂಲ ಕಾಂಗ್ರೆಸ್ ಶಾಸಕ ಸತ್ಯಜಿತ್ ಬಿಸ್ವಾಸ್ ಅವರ ಕೊಲೆ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಅವರು ಪ್ರಮುಖ ಸಂಚುಕೋರ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಸಿಐಡಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ.
ರಣಾಘಾಟ್ನ ಎಸಿಜೆಎಂ ನ್ಯಾಯಾಲಯದಲ್ಲಿ ಶನಿವಾರ ಸಿಐಡಿ ಉಪ ದೋಷಾರೋಪಪಟ್ಟಿ ಸಲ್ಲಿಸಿದೆ. 'ಮುಕುಲ್ ರಾಯ್ ಅವರನ್ನು ಆರೋಪಿ ಎಂದು ಅದರಲ್ಲಿ ಹೆಸರಿಸಲಾಗಿದೆ. ಇದುವರೆಗೂ ಒಟ್ಟು ಐವರನ್ನು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ. ಇದರಲ್ಲಿ ಮುಕುಲ್ ರಾಯ್ ಮತ್ತು ಬಿಜೆಪಿ ಸಂಸದ ಜಗನ್ನಾಥ್ ಸರ್ಕಾರ್ ಅವರ ಹೆಸರು ಒಳಗೊಂಡಿದೆ' ಎಂದು ರಾಯ್ ಪರ ವಕೀಲ ಸುಮನ್ ರಾಯ್ ತಿಳಿಸಿದ್ದಾರೆ.
ಕೃಷಿ ಕಾಯ್ದೆ ಹಿಂಪಡೆಯದಿದ್ದರೆ ದೇಶಾದ್ಯಂತ ಪ್ರತಿಭಟನೆಯ ಎಚ್ಚರಿಕೆ ನೀಡಿದ ಮಮತಾ
ಸತ್ಯಜಿತ್ ಬಿಸ್ವಾಸ್ ಅವರ ಕೊಲೆ ಪ್ರಕರಣ ಸಂಬಂಧ ಮುಕುಲ್ ರಾಯ್ ಅವರನ್ನು ಮಾರ್ಚ್ನಲ್ಲಿ ಸಿಐಡಿ ವಿಚಾರಣೆಗೆ ಒಳಪಡಿಸಿತ್ತು. ಕಲ್ಕತ್ತಾ ಹೈಕೋರ್ಟ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
'ನನ್ನ ವಿರುದ್ಧ 44 ಪ್ರಕರಣಗಳಿವೆ. ನಾನು ಇದರ ಬಗ್ಗೆ ಚಿಂತೆ ಮಾಡುವುದಿಲ್ಲ. ಅವರು ನನ್ನನ್ನು ಬಂಧಿಸಲು ಸಾಧ್ಯವಿಲ್ಲ. ಆದರೆ ಪಶ್ಚಿಮ ಬಂಗಾಳದ ಪೊಲೀಸ್ ಸಚಿವರು ಯಾರೆಂದು ಕೇಳಲು ಬಯಸುತ್ತೇನೆ. ಆರೋಪಪಟ್ಟಿಯಲ್ಲಿ ನನ್ನ ಹೆಸರು ಇರಬೇಕು ಎಂದು ಹಠ ಹಿಡಿದಿದ್ದು ಆಕೆ (ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ) ಅಲ್ಲವೇ? ನನಗೆ ನ್ಯಾಯಾಂಗದ ಬಗ್ಗೆ ಸಂಪೂರ್ಣ ನಂಬಿಕೆ ಇದೆ' ಎಂದು ಈ ಬೆಳವಣಿಗೆ ಬಗ್ಗೆ ಮುಕುಲ್ ರಾಯ್ ಪ್ರತಿಕ್ರಿಯಿಸಿದ್ದಾರೆ.
ಮುಕುಲ್ ರಾಯ್, ಈ ಪ್ರಕರಣದಲ್ಲಿ ಹೆಸರು ದಾಖಲಾದ ಎರಡನೆಯ ಪ್ರಮುಖ ಬಿಜೆಪಿ ನಾಯಕರಾಗಿದ್ದಾರೆ. ಇದಕ್ಕೂ ಮುನ್ನ ರಾಣಾಘಾಟ್ನ ಬಿಜೆಪಿ ಸಂಸದ ಜಗನ್ನಾಥ್ ಸರ್ಕಾರ್ ಅವರ ಹೆಸರನ್ನು ಸಿಐಡಿ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿತ್ತು.
ಸುವೇಂದು ಅಧಿಕಾರಿ ಮುನಿಸು ಶಮನ, ಮತ್ತೆ ಟಿಎಂಸಿಗೆ ವಾಪಸ್
ಕೃಷ್ಣಗಂಜ್ ವಿಧಾನಸಭೆ ಕ್ಷೇತ್ರದ ಟಿಎಂಸಿ ಶಾಸಕ ಸತ್ಯಜಿತ್ ಬಿಸ್ವಾಸ್ ಅವರನ್ನು ಕಳೆದ ವರ್ಷದ ಫೆಬ್ರವರಿ 9ರಂದು ನಾಡಿಯಾ ಜಿಲ್ಲೆಯಲ್ಲಿ ಗುಂಡುಹಾರಿಸಿ ಕೊಲೆ ಮಾಡಲಾಗಿತ್ತು. ಫಲ್ಬರಿ ಪ್ರದೇಶದ ತಮ್ಮ ಮನೆ ಸಮೀಪದಲ್ಲಿನ ಸ್ಥಳೀಯ ಕ್ಲಬ್ ಒಂದರಲ್ಲಿ ಸರಸ್ವತಿ ಪೂಜೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ 41 ವರ್ಷದ ಬಿಸ್ವಾಸ್ ಅವರ ಮೇಲೆ ಹತ್ತಿರದಿಂದ ಗುಂಡು ಹಾರಿಸಲಾಗಿತ್ತು.