ದೀದಿ ಕ್ಷೇತ್ರದಲ್ಲಿ ಬೆಂಗಾಳಿಯೇತರರ ಬೆಂಬಲಕ್ಕಾಗಿ ಟಿಎಂಸಿ ಮಾಸ್ಟರ್ ಪ್ಲ್ಯಾನ್
ಕೋಲ್ಕತ್ತಾ, ಸೆಪ್ಟೆಂಬರ್ 14: ಮುಂಬರುವ ಉಪಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭವಾನಿಪುರ ಕ್ಷೇತ್ರದಲ್ಲಿ ಜಯ ಗಳಿಸಲು ಬೇಕಾದ ಎಲ್ಲಾ ಪ್ರಚಾರ, ಕಾರ್ಯತಂತ್ರಗಳನ್ನು ತೃಣಮೂಲ ಕಾಂಗ್ರೆಸ್ ಮಾಡುತ್ತಿದೆ. ಹಾಗೆಯೇ ಉಳಿದ ಎರಡು ಕ್ಷೇತ್ರಗಳಾದ ಮುರ್ಷಿದಾಬಾದ್ನ ಜಂಗೀಪುರ ಹಾಗೂ ಸಮ್ಸೇರ್ಗಂಜ್ ಕ್ಷೇತ್ರದಲ್ಲಿಯೂ ಟಿಎಂಸಿ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದೆ.
ಕಳೆದ ವರ್ಷದ ನಡೆದ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿಯ ಎದುರು ಸೋಲು ಕಂಡ ಬೆನ್ನಲ್ಲೇ ತನ್ನ ಸ್ವ ಕ್ಷೇತ್ರ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಈಗ ಉಪಚುನಾವಣೆಗೆ ಇಳಿದಿದ್ದಾರೆ. ಈ ನಡುವೆ ಭವಾನಿಪುರದಲ್ಲಿ ಬಂಗಾಳಿ ಜನರ ಮತ ಮಾತ್ರವಲ್ಲದೆ ಬಂಗಾಳಿಯೇತರರ ಮತಗಳನ್ನು ಪಡೆಯಲು ಕೂಡಾ ತೃಣಮೂಲ ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ.
ಪಶ್ಚಿಮ ಬಂಗಾಳ ಉಪಚುನಾವಣೆ: ಮಮತಾ ಬ್ಯಾನರ್ಜಿ ಭವಾನಿಪುರದಿಂದ ಕಣಕ್ಕೆ
ತಮ್ಮ ಕ್ಷೇತ್ರದ ಎತ್ತರದ ವಸತಿ ಕಟ್ಟಡಗಳಲ್ಲಿ ನೆಲೆಸಿರುವ ಎಲ್ಲಾ ಜನರಿಗೂ ಸರ್ಕಾರದ ಯೋಜನೆಯ ಫಲ ದೊರಕಿದೆಯೇ ಎಂದು ಖಚಿತ ಪಡಿಸಿಕೊಳ್ಳಲು ತೃ ಣಮೂಲ ಕಾಂಗ್ರೆಸ್ ತನ್ನ ಮಹಿಳಾ ಕಾರ್ಯಕರ್ತರ ಗುಂಪನ್ನು ಈ ಕಟ್ಟಡಗಳಿಗೆ ಕಳುಹಿಸುತ್ತಿದೆ. ಈ ಗುಂಪಿನಲ್ಲಿ ಇರುವ ಕೆಲವು ಮಹಿಳೆಯರಿಗೆ ಪ್ರತ್ಯೇಕವಾಗಿ ಈ ಕಟ್ಟಡಗಳ ನಿವಾಸಿಗಳ ಕುಂದು ಕೊರತೆಗಳನ್ನು ಆಲಿಸುವ ಜವಾಬ್ದಾರಿಯನ್ನು ನೀಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಟಿಎಂಸಿಯ ರಾಜ್ಯ ಸಭೆ ಸಂಸದ ಸುಕೆಂದು ಶೇಖರ ರಾಯ್, "ನಮ್ಮ ಪಶ್ಚಿಮ ಬಂಗಾಳ ತೃಣಮೂಲ ಕಾಂಗ್ರೆಸ್ ಸರ್ಕಾರ ಹೇಗೆ ಮನೆ-ಮನೆ ಬಾಗಿಲಿಗೆ ತಲುಪುತ್ತಿದೆಯೋ ಅದೇ ರೀತಿಯಲ್ಲಿ ನಮ್ಮ ಪಕ್ಷ ಟಿಎಂಸಿಯು ಮನೆ-ಮನೆ ಬಾಗಿಲಿಗೆ ತೆರಳಿ ಜನರ ಕುಂದು ಕೊರತೆಯನ್ನು ಆಲಿಸಲಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಹಾಗೂ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಈ ಗುಂಪು ಮನೆ-ಮನೆ ಭೇಟಿ ನೀಡಿ ಜನರಿಗೆ ಮಾಹಿತಿ ನೀಡಲಿದೆ," ಎಂದು ತಿಳಿಸಿದ್ದಾರೆ. ಇನ್ನು ಭವಾನಿಪುರದಲ್ಲಿ ಜನರ ಬೆಂಬಲವನ್ನು ಕೋರಿ ಪಕ್ಷವು ಸಣ್ಣ ರ್ಯಾಲಿಯನ್ನು ನಡೆಸಲು ಕೂಡಾ ಸಿದ್ದತೆ ನಡೆಸಿದೆ ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.
ಭವಾನಿಪುರದಲ್ಲಿ ಹೈ ವೋಲ್ಟೆಜ್ ಸ್ಪರ್ಧೆ: ದೀದಿ ಎದುರು ಬಿಜೆಪಿಯಿಂದ ವಕೀಲೆ ಕಣಕ್ಕೆ?
ಇನ್ನೊಂದೆಡೆ ಬಿಜೆಪಿಯು ವಕೀಲೆಯಾದ ಪ್ರಿಯಾಂಕ ಟಿಬ್ರೆವಾಲ್ರನ್ನು ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿಯ ಎದುರು ಕಣಕ್ಕೆ ಇಳಿಸಿದೆ. ಪ್ರಿಯಾಂಕ ಟಿಬ್ರೆವಾಲ್ ಬಿಜೆಪಿ ಪಕ್ಷದಲ್ಲಿದ್ದ ತಮ್ಮ ಆರು ವರ್ಷಗಳ ಕಾಲದಲ್ಲಿ ಪ್ರಿಯಾಂಕ ಬಿಜೆಪಿಯ ಹಲವಾರು ಕಾರ್ಯಗಳನ್ನು ನಿರ್ವಹಿಸಿದ್ದಾರೆ. 2020 ರಲ್ಲಿ ಪಶ್ಚಿಮ ಬಂಗಾಳದ ಭಾರತೀಯ ಜನತಾ ಯುವ ಮೋರ್ಚಾದ ಉಪಾಧ್ಯಕ್ಷೆಯಾಗಿ ಪ್ರಿಯಾಂಕ ಟಿಬ್ರೆವಾಲ್ ಆಯ್ಕೆಯಾಗಿದ್ದಾರೆ. ಇನ್ನು 2021 ರಲ್ಲಿ ವಕೀಲೆ ಪ್ರಿಯಾಂಕ ಟಿಬ್ರೆವಾಲ್ ಇಂತಲಿ ಕ್ಷೇತ್ರದಲ್ಲಿ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಿದ್ದು ಆದರೆ ಟಿಎಂಸಿಯ ಸ್ವರ್ಣ ಕಮಲ್ ಸಹಾ ಎದುರು 58,257 ಮತಗಳ ಅಂತರದ ಸೋಲನ್ನುಡಿದ್ದಾರೆ. ಈಗ ಮಮತಾ ಬ್ಯಾನರ್ಜಿಯ ಎದುರು ಭವಾನಿಪುರದಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ವಕೀಲೆಯಾಗಿ ಬಿಜೆಪಿಯ ಪರವಾಗಿ ವಾದ ಮಾಡಿರುವ ಪ್ರಿಯಾಂಕ ಟಿಬ್ರೆವಾಲ್ ಇತ್ತೀಚೆಗೆ ಚುನಾವಣಾ ನಂತರ ನಡೆದ ಪಶ್ಚಿಮ ಬಂಗಾಳ ಹಿಂಸಾಚಾರದ ಬಗ್ಗೆ ಬಿಜೆಪಿ ಪರವಾಗಿ ಸರ್ಕಾರದ ವಿರುದ್ದವಾಗಿ ವಾದ ಮಾಡಿದ್ದಾರೆ. ಈಗ ಈ ಪ್ರಕರಣ ಸಿಬಿಐ ತನಿಖೆಗೆ ಒಳಪಡುತ್ತಿದೆ.
ಭವಾನಿಪುರ ಉಪಚುನಾವಣೆ: ಮಮತಾ ಎದುರು ವಕೀಲೆ ಪ್ರಿಯಾಂಕ ಟಿಬ್ರೆವಾಲ್ ಕಣಕ್ಕೆ
ಇನ್ನು ತೃಣಮೂಲ ಕಾಂಗ್ರೆಸ್ ಹೊಸದಾಗಿ ಬಂಗಾಳಿಯೇತರರ ಮತಕ್ಕೂ ಕಣ್ಣು ಇಟ್ಟಿರುವ ನಡುವೆ ಬಿಜೆಪಿಯು ಭವಾನಿಪುರ ಕ್ಷೇತ್ರದಲ್ಲಿ ತನ್ನ ಪ್ರಚಾರ ಕಾರ್ಯ ಆರಂಭ ಮಾಡಿದೆ. ಆದರೆ ಈ ನಡುವೆ ಕಾಂಗ್ರೆಸ್ ಮಾತ್ರ ತೃಣಮೂಲ ಕಾಂಗ್ರೆಸ್ ಎದುರು ತನ್ನ ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಹೈಕಮಾಂಡ್ ಆಜ್ಞೆಯಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಆದರೆ ಸಿಪಿಐಎಂ ಮಾತ್ರ ಬಿಜೆಪಿ, ಟಿಎಂಸಿ ಎರಡು ಕೂಡಾ ಈ ರಾಜ್ಯಕ್ಕೆ ಆಪತ್ತು, ಬದಲಾವಣೆ ಅಗತ್ಯ ಎಂದು ಹೇಳಿ ಟಿಎಂಸಿ ಎದುರು ತಮ್ಮ ಅಭ್ಯರ್ಥಿಯನ್ನು ಇಳಿಸಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರ ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿರಲಿಲ್ಲ. ಬದಲಾಗಿ ನಂದಿಗ್ರಾಮ ಕ್ಷೇತ್ರದಲ್ಲಿ ಸ್ಪರ್ಧಿಸಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋಲನ್ನುಂಡಿದ್ದರು. ಆದರೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಭರ್ಜರಿ ಜಯಗಳಿಸಿದ ಹಿನ್ನೆಲೆ ಪಕ್ಷ ಮಮತಾ ಬ್ಯಾನರ್ಜಿಯನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಆದರೆ ತನ್ನ ಈ ಮುಖ್ಯಮಂತ್ರಿ ಸ್ಥಾನವನ್ನು ಮಮತಾ ಉಳಿಸಿಕೊಳ್ಳಬೇಕಾದರೆ ನವೆಂಬರ್ 5 ರ ಒಳಗೆ ವಿಧಾನಸಭೆಗೆ ಆಯ್ಕೆಯಾಗಬೇಕಿದೆ. ಈ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಲು ಭವಾನಿಪುರದ ಶಾಸಕ ಸ್ಥಾನಕ್ಕೆ ಶೋಭನ್ದೇವ್ ಚಟ್ಟೋಪಾಧ್ಯಾಯ ರಾಜೀನಾಮೆ ನೀಡಿದ್ದಾರೆ. ಭವಾನಿಪುರದಿಂದ ಮಮತಾ ಬ್ಯಾನರ್ಜಿ ಸ್ಪರ್ಧೆಗೆ ಇಳಿದಿದ್ದಾರೆ. ಸೆಪ್ಟೆಂಬರ್ 30ಕ್ಕೆ ಉಪಚುನಾವಣೆ ನಡೆಯಲಿದೆ.
(ಒನ್ ಇಂಡಿಯಾ ಸುದ್ದಿ)