ಪಶ್ಚಿಮ ಬಂಗಾಳ: ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರ ಮೆರವಣಿಗೆ, ಹಿಂಸಾಚಾರ
ಕೋಲ್ಕತಾ, ಅಕ್ಟೋಬರ್ 8: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಬಿಜೆಪಿ ಯುವ ಮೋರ್ಚಾದ ನೂತನ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬಿಜೆಪಿಯ ಯುವ ಘಟಕವು ನಡೆಸುತ್ತಿದ್ದ 'ನಬನ್ನಾಕ್ಕೆ ನಡಿಗೆ' ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ತೀವ್ರ ಸಂಘರ್ಷ ನಡೆದಿದೆ. ನಬನ್ನಾಕ್ಕೆ ಮೆರವಣಿಗೆ ಸಾಗುತ್ತಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಪಶ್ಚಿಮ ಬಂಗಾಳದ ಪೊಲೀಸರ ನಡುವೆ ಘರ್ಷಣೆ ನಡೆದಿದೆ.
ಮೆರವಣಿಗೆ ತಡೆಯಲು ಮುಂದಾದ ಪಶ್ಚಿಮ ಬಂಗಾಳ ಪೊಲೀಸರು ಹೌರಾದ ಸಂಟ್ರಗಚಿಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಿ, ಅಶ್ರುವಾಯು ಹಾಗೂ ಜಲಫಿರಂಗಿ ಪ್ರಯೋಗ ಮಾಡಿದರು. ಬುಧವಾರ ಬೆಳಿಗ್ಗೆಯೇ ಕೋಲ್ಕತಾದ ಬಿಜೆಪಿ ರಾಜ್ಯ ಪ್ರಧಾನ ಕಚೇರಿ ಬಳಿ ಪೊಲೀಸ್ ಸಿಬ್ಬಂದಿ ಜಮಾವಣೆಯಾಗಿದ್ದರು.
ಇದಕ್ಕೆ ಪ್ರತಿಯಾಗಿ ನಬನ್ನಾ ಚಲೋ ಮೆರವಣಿಗೆಗೆ ಭಾರಿ ಸಂಖ್ಯೆಯಲ್ಲಿ ಸೇರಿಕೊಂಡ ಬಿಜೆಪಿ ಕಾರ್ಯಕರ್ತರು ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಭಾರತೀಯ ಜನತಾ ಯುವ ಮೋರ್ಚಾವು ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲು ಈ ಮೆರವಣಿಗೆ ಆಯೋಜಿಸಿತ್ತು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ನಡೆಯುತ್ತಿರುವ ಸಂಘರ್ಷ ಮತ್ತಷ್ಟು ತೀವ್ರವಾಗುವ ಸೂಚನೆಗಳು ಕಾಣಿಸುತ್ತಿವೆ. ಮುಂದೆ ಓದಿ.
ನಬನ್ನಾಕ್ಕೆ ಮೆರವಣಿಗೆ
ಯೋಜನೆಯಂತೆ ಬಿಜೆಪಿ ಮತ್ತು ಯುವ ಮೋರ್ಚಾ ಕಾರ್ಯಕರ್ತರು ಕೋಲ್ಕತಾ ಮತ್ತು ಹೌರಾದ ನಾಲ್ಕು ವಿವಿಧ ಸ್ಥಳಗಳಿಂದ ನಬನ್ನಾಕ್ಕೆ ಗುರುವಾರ ಮೆರವಣಿಗೆ ಆಯೋಜಿಸಿದ್ದರು. ಪ್ರತಿ ಮೆರವಣಿಗೆಯಲ್ಲಿಯೂ ಸುಮಾರು 25,000 ಮಂದಿಯನ್ನು ಸೇರಿಸುವ ಗುರಿ ಹೊಂದಲಾಗಿತ್ತು.
ನಬನ್ನಾದತ್ತ ಮೆರವಣಿಗೆ ಪ್ರಾರಂಭಿಸುವ ಮುನ್ನ ತೇಜಸ್ವಿ ಸೂರ್ಯ ಬುಧವಾರ ಬೆಳಗ್ಗೆ ಸ್ವಾಮಿ ವಿವೇಕಾನಂದ ಅವರ ಮನೆಗೆ ಭೇಟಿ ನೀಡಿದ್ದರು. ಬುಧವಾರ ಪತ್ರಿಕಾಗೋಷ್ಠಿ ನಡೆಸಿದ್ದ ತೇಜಸ್ವಿ ಸೂರ್ಯ, ಮಮತಾ ಬ್ಯಾನರ್ಜಿ ಅವರು ಭಯದಿಂದ ನಬನ್ನಾವನ್ನು ಮುಚ್ಚಿಬಿಟ್ಟಿದ್ದಾರೆ ಎಂದು ಆರೋಪಿಸಿದ್ದರು.ಸರ್ಕಾರಿ ಕಚೇರಿ ಬಂದ್
ಸ್ವಚ್ಛತಾ ಕಾರ್ಯಗಳ ಉದ್ದೇಶದಿಂದ ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳನ್ನು ಎರಡು ದಿನ ಮುಚ್ಚುತ್ತಿರುವುದಾಗಿ ಬುಧವಾರ ಸಂಜೆ ಮಮತಾ ಬ್ಯಾನರ್ಜಿ ಸರ್ಕಾರ ಪ್ರಕಟಿಸಿತ್ತು. ತೇಜಸ್ವಿ ಸೂರ್ಯ ಅವರು ಬಂಗಾಳಿಯಲ್ಲಿ ಕೂಡ ಟ್ವೀಟ್ ಮಾಡುವ ಮೂಲಕ ಪಶ್ಚಿಮ ಬಂಗಾಳದ ಜನತೆಯ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.
ಉಳಿವಿನ ಸಂಘರ್ಷ
ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಉಚಿತವಾಗಿ ಸಿಗೋದಿಲ್ಲ ಎಂಬುದಕ್ಕೆ ಪಶ್ಚಿಮ ಬಂಗಾಳದಲ್ಲಿ ಇಂದು ಪ್ರಜಾಪ್ರಭುತ್ವದ ಉಳಿಯುವಿಕೆಗೋಸ್ಕರ ನಡೆಯುತ್ತಿರುವ ಸಂಘರ್ಷವೇ ಸಾಕ್ಷಿ. ಮುಂದಿನ ಪೀಳಿಗೆಯ ಬಂಗಾಳದ ಯುವ ಜನತೆ, ಇಂದಿನ ಭಾರತೀಯ ಯುವ ಮೋರ್ಚಾ ಕಾರ್ಯಕರ್ತರ ಸಂಘರ್ಷವನ್ನು ಸ್ಮರಿಸಲಿದೆ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.
ಅಂತ್ಯ ಹಾಡಲಿದ್ದಾರೆ
ಬಂಗಾಳದ ಮಮತಾ ದೀದಿಯ, ಟಿಎಂಸಿ ಗೂಂಡಾಗಳ ವರ್ತನೆ ಫ್ಯಾಸಿಸಂ ನ ನೈಜ ಸ್ವರೂಪ ಪ್ರದರ್ಶಿಸುತ್ತಿದೆ. ಶಾಂತ ರೀತಿಯ ಪ್ರತಿಭಟನೆಗೆ ಟಿ ಎಂ ಸಿ ಗುಂಡಾಗಳು ಕಂಟ್ರಿ ಬಾಂಬ್ ಎಸೆಯುವುದರ ಮೂಲಕ ಶಾಂತಿ ಭಂಗ ತರುವ ಕಾರ್ಯ ನಡೆಸುತ್ತಿರುವುದು ಅಕ್ಷಮ್ಯ. ಟಿಎಂಸಿಯ ಸರ್ವಾಧಿಕಾರಿ ವರ್ತನೆಗೆ ಶೀಘ್ರವೇ ಬಂಗಾಳದ ಜನತೆ ಅಂತ್ಯ ಹಾಡಲಿದೆ ಎಂದಿದ್ದಾರೆ.
ಬಿಜೆಪಿಯಿಂದ ಮಾತ್ರ ಗತ ವೈಭವ
ಸ್ವಾಮಿ ವಿವೇಕಾನಂದ, ನೇತಾಜಿ ಸುಭಾಷ್ ಚಂದ್ರ ಬೋಸ್, ಡಾ.ಶ್ಯಾಮ ಪ್ರಸಾದ್ ಮುಖರ್ಜಿ ರವರ ಪುಣ್ಯ ಭೂಮಿ ಬಂಗಾಲವು ಇಂದು ಸಿಂಡಿಕೇಟ್ & ಕಟ್ ಮನಿ ಯಂತಹ ದುರಾಡಳಿತಕ್ಕೆ ಸಿಕ್ಕು ನರಳಾಡುತ್ತಿರುವುದು ದುರಂತ. ಬಿಜೆಪಿ ಪಕ್ಷದಿಂದ ಮಾತ್ರ ಬಂಗಾಲದ ಗತ ವೈಭವ ಮರಳಲು ಸಾಧ್ಯ. ರಾಜಕೀಯ ಅಪರಾಧೀಕರಣದಿಂದ ಬಂಗಾಲವನ್ನು ಮುಕ್ತಗೊಳಿಸಿ, ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಬಿಜೆಪಿ ಅವಿರತ ಹೋರಾಟ ನಡೆಸಲಿದೆ ಎಂದು ತೇಜಸ್ವಿ ಹೇಳಿದ್ದಾರೆ.