ಗೋಮಾಂಸ ಮಾತ್ರ ಏಕೆ, ನಾಯಿ ಮಾಂಸವನ್ನೂ ತಿನ್ನಿ ಎಂದ ಬಿಜೆಪಿ ಅಧ್ಯಕ್ಷ
ಕೋಲ್ಕತಾ, ನವೆಂಬರ್ 5: ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುವ ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಘೋಷ್, ಸೋಮವಾರ ಬುದ್ಧಿಜೀವಿಗಳ ವಿರುದ್ಧ ವಾಗ್ದಾಳಿ ನಡೆಸುವ ವೇಳೆ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.
ಗೋಮಾಂಸ ತಿನ್ನುವವರು ನಾಯಿ ಮಾಂಸವನ್ನೂ ತಿನ್ನಿ. ಅದರಿಂದ ಅವರ ಆರೋಗ್ಯಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ದಿಲೀಪ್ ಘೋಷ್, ಗೋಮಾಂಸದ ಭಕ್ಷಣೆ ಪರ ವಾದಿಸುವ ಬುದ್ಧಿಜೀವಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ಆಕ್ರೋಶಕ್ಕೆ ಹೆದರಿ ಕೋಲ್ಕತ್ತಾ 'ಗೋಮಾಂಸ ಹಬ್ಬ' ಕಾರ್ಯಕ್ರಮ ರದ್ದು
ಬುರ್ದ್ವಾನ್ನಲ್ಲಿ ಸೋಮವಾರ ನಡೆದ 'ಗೋ ಅಷ್ಟಮಿ ಕಾರ್ಯಕ್ರಮ'ದಲ್ಲಿ ಮಾತನಾಡಿದ ಘೋಷ್, ಕೆಲವು ಜನರು ರಸ್ತೆ ಬದಿಯ ಅಂಗಡಿಗಳಲ್ಲಿ ಗೋಮಾಂಸ ತಿನ್ನುತ್ತಾರೆ ಮತ್ತು ವಿದೇಶಿ ತಳಿಯ ನಾಯಿಗಳ ಮಲವನ್ನು ಸ್ವಚ್ಛಗೊಳಿಸುವುದರಲ್ಲಿ ಹೆಮ್ಮೆ ಪಡುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
ನಿಮ್ಮ ಮನೆಯಲ್ಲಿ ಯಾವ ಮಾಂಸವನ್ನು ಬೇಕಾದರೂ ತಿನ್ನಿ. ಗೋಮಾಂಸವನ್ನಷ್ಟೇ ಅಲ್ಲ, ಇತರೆ ಪ್ರಾಣಿಗಳ ಮಾಂಸವನ್ನೂ ಸೇವಿಸಿ. ಆದರೆ ಗೋವುಗಳ ಹತ್ಯೆಯನ್ನು ನಾವು ಸಹಿಸುವುದಿಲ್ಲ. ಗೋವು ನಮಗೆ ತಾಯಿಯಿದ್ದಂತೆ ಎಂದು ಅವರು ಹೇಳಿದ್ದಾರೆ.
ನಾಯಿ ಮಾಂಸವನ್ನೂ ಸೇವಿಸಿ
'ಸುಶಿಕ್ಷಿತ ಸಮಾಜಕ್ಕೆ ಸೇರಿದ ಕೆಲವು ಜನರು ರಸ್ತೆ ಬದಿಯಲ್ಲಿ ಗೋಮಾಂಸ ಸೇವಿಸುತ್ತಾರೆ. ಗೋವು ಏಕೆ? ಅವರು ನಾಯಿ ಮಾಂಸವನ್ನೂ ತಿನ್ನಲಿ ಎಂದು ಹೇಳಲು ಬಯಸುತ್ತೇನೆ. ಅದು ಆರೋಗ್ಯಕ್ಕೆ ಒಳ್ಳೆಯದು. ಇತರೆ ಪ್ರಾಣಿಗಳ ಮಾಂಸವನ್ನೂ ತಿನ್ನಿ. ನಿಮ್ಮನ್ನು ತಡೆಯುತ್ತಿರುವುದು ಯಾರು? ಆದರೆ ನಿಮ್ಮ ಮನೆಯಲ್ಲಿ ತಿಂದುಕೊಳ್ಳಿ. ಗೋವು ನಮಗೆ ತಾಯಿಯಿದ್ದಂತೆ. ಗೋಹತ್ಯೆಯನ್ನು ನಾವು ಸಮಾಜ ವಿರೋಧಿ ಎಂದು ಪರಿಗಣಿಸುತ್ತೇವೆ. ಕೆಲವು ಜನರು ತಮ್ಮ ಮನೆಯಲ್ಲಿ ವಿದೇಶಿ ನಾಯಿಗಳನ್ನು ಸಾಕಿಕೊಂಡು ಅವುಗಳ ಮಲಗಳನ್ನು ಕೂಡ ಸ್ವಚ್ಛಗೊಳಿಸುತ್ತಾರೆ. ಇದು ಮಹಾ ಅಪರಾಧ' ಎಂದು ಹೇಳಿದ್ದಾರೆ.
ಹಸು ನಮ್ಮ ತಾಯಿ
'ಭಾರತವು ಗೋಪಾಲಕನ (ಕೃಷ್ಣ) ನಾಡು. ಇಲ್ಲಿ ಗೋವುಗಳಿಗೆ ಗೌರವ ಎಂದೆಂದಿಗೂ ಇದ್ದೇ ಇರುತ್ತದೆ. ಗೋಮಾತೆಯನ್ನು ಕೊಲ್ಲುವುದು ಅತ್ಯಂತ ಹೀನ ಕೃತ್ಯ. ಹಾಗಾಗಿ ನಾವು ವಿರೋಧಿಸುವುದನ್ನು ಮುಂದುವರಿಸುತ್ತೇವೆ. ತಾಯಿ ಹಾಲು ಕುಡಿಯುವ ಮಗು ಬಳಿಕ ಹಸುವಿನ ಕಾಲು ಕುಡಿದು ಬದುಕುತ್ತದೆ. ಹಸು ನಮ್ಮ ತಾಯಿ. ನಮ್ಮ ತಾಯಿಯನ್ನು ಯಾರಾದರೂ ಕೊಂದರೆ ನಾವು ಅದನ್ನು ಸಹಿಸುವುದಿಲ್ಲ' ಎಂದಿದ್ದಾರೆ.
ಕೋಲಾಹಲ ಸೃಷ್ಟಿಸಿದ ಮೆಕ್ಡೊನಾಲ್ಡ್ಸ್ನ 'ಹಲಾಲ್'
ದೇಸಿ ಹಸುವಿನ ಹಾಲಿನಲ್ಲಿ ಚಿನ್ನ
ದೇಸಿ ಹಸುಗಳ ಹಾಲಿನಲ್ಲಿ ಚಿನ್ನದ ಅಂಶವಿದೆ. ಹೀಗಾಗಿ ಅವುಗಳ ಹಾಲಿನ ಬಣ್ಣ ಕೂಡ ಚಿನ್ನದ ಬಣ್ಣದಲ್ಲಿರುತ್ತದೆ ಎಂದು ಪ್ರತಿಪಾದಿಸಿದ್ದಾರೆ. ದೇಸಿ ಮತ್ತು ವಿದೇಶಿ ಹಸುಗಳ ನಡುವಿನ ವ್ಯತ್ಯಾಸವನ್ನು ವಿವರಿಸಿದ ಘೋಷ್, 'ದೇಸಿ ಹಸುಗಳು ಮಾತ್ರ ನಮ್ಮ ತಾಯಿಯಿದ್ದಂತೆಯೇ ಹೊರತು ವಿದೇಶಿ ಹಸುಗಳಲ್ಲ. ವಿದೇಶಿ ಪತ್ನಿಯರನ್ನು ಕರೆದುಕೊಂಡು ಬಂದ ಕೆಲವು ಜನರು ಈಗ ಸಂಕಷ್ಟದಲ್ಲಿದ್ದಾರೆ' ಎಂದು ಹೇಳಿದ್ದಾರೆ.
ನಿಮ್ಮ ದೇಹವೂ ಸಿಗುವುದಿಲ್ಲ
ಘೋಷ್ ಅವರು ವಿವಾದದ ಮೂಲಕ ಸುದ್ದಿಯಲ್ಲಿರುವುದು ಇದು ಮೊದಲೇನಲ್ಲ. ಆಗಸ್ಟ್ 27ರಂದು ಪೂರ್ವ ಮಿಡ್ನಾಪುರದ ಮೆಚೇಡಾದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಅವರು ಬೆದರಿಕೆ ಹಾಕಿದ್ದರು. ಜಿಲ್ಲೆಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕಿರುಕುಳ ನೀಡುವುದನ್ನು ಮುಂದುವರಿಸಿದರೆ ನಿಮ್ಮ ದೇಹವನ್ನು ಹುಡುಕುವುದಕ್ಕೂ ಸಾಧ್ಯವಾಗುವುದಿಲ್ಲ ಮತ್ತು ನಿಮ್ಮ ಕುಟುಂಬದವರು ನಿಮ್ಮ ಅಂತ್ಯಸಂಸ್ಕಾರ ಮಾಡುವುದು ಕೂಡ ಸಾಧ್ಯವಾಗುವುದಿಲ್ಲ ಎಂದು ಬೆದರಿಸಿದ್ದರು.
ಸೀತೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಲೈಸೆಲ್ವಿ ವಿರುದ್ಧ ದೂರು
ಪೊಲೀಸರನ್ನು ಥಳಿಸುವುದು ನಮ್ಮ ಹಕ್ಕು
2017ರಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರನ್ನು ಥಳಿಸಿದ ಪ್ರಕರಣದಲ್ಲಿ ಪೊಲೀಸರು ಟಿಎಂಸಿ ಕಾರ್ಯಕರ್ತರ ವಿರುದ್ಧ ಕ್ರಮ ತೆಗೆದುಕೊಳ್ಳದೆ ಬಿಜೆಪಿ ಕಾರ್ಯಕರ್ತರನ್ನೇ ಬಂಧಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಟಿಎಂಸಿ ಬೆಂಬಲಿಗರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂಜರಿದರೆ ಪೊಲೀಸರನ್ನು ಹೊಡೆಯಿರಿ. ಪಕ್ಷಪಾತಿಗಳು ಮತ್ತು ನಿರ್ದಿಷ್ಟವಾಗಿ ನಮ್ಮನ್ನೇ ಗುರಿಯನ್ನಾಗಿಸಿಕೊಳ್ಳುವ ಪೊಲೀಸರಿಗೆ ಥಳಿಸುವುದು ನಮ್ಮ ಪ್ರಜಾಸತ್ತಾತ್ಮಕ ಹಕ್ಕು ಎಂದು ಘೋಷ್ ಹೇಳಿಕೆ ನೀಡಿದ್ದರು.