ಒಂದೇ ಮಾತಿನಲ್ಲಿ ಬಿಜೆಪಿ-ಟಿಎಂಸಿಗೆ ರಾಹುಲ್ ಗಾಂಧಿ ತಿರುಗೇಟು!
ಕೋಲ್ಕತ್ತಾ, ಏಪ್ರಿಲ್ 15: ಪಶ್ಚಿಮ ಬಂಗಾಳದಲ್ಲಿ ನಾಲ್ಕು ಹಂತಗಳ ವಿಧಾನಸಭಾ ಚುನಾವಣೆ ಬಳಿಕ ಮೊದಲ ಬಾರಿಗೆ ಪ್ರಚಾರ ನಡೆಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭಾರತೀಯ ಜನತಾ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ನಾಯಕರ ಅನುಪಸ್ಥಿತಿ ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿತ್ತು. ವಿಧಾನಸಭಾ ಚುನಾವಣೆ ನಂತರ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷ ಒಪ್ಪಂದ ಮಾಡಿಕೊಳ್ಳುತ್ತವೆ ಎಂದು ಹೇಳಲಾಗುತ್ತಿತ್ತು. ಎಲ್ಲ ಊಹಾಪೋಹಗಳಿಗೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಬುಧವಾರ ಸ್ವತಃ ರಾಹುಲ್ ಗಾಂಧಿಯವರು ಪ್ರಚಾರದ ಅಖಾಡಕ್ಕೆ ಧುಮುಕಿದ್ದರು.
ಮೊದಲು ನಿಮ್ಮನ್ನು ನಿರ್ಲಕ್ಷಿಸುತ್ತಾರೆ, ಕೊನೆಗೆ ನೀವು ಗೆಲ್ಲುತ್ತೀರ; ರಾಹುಲ್ ಗಾಂಧಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸಂಸದ ರಾಹುಲ್ ಗಾಂಧಿ ನೇರ ವಾಗ್ದಾಳಿ ನಡೆಸಿದರು. ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತಾರೆಯೇ ಹೊರತೂ ತೃಣಮೂಲ ಮುಕ್ತ ಭಾರತ ಎಂದು ಹೇಳುವುದಿಲ್ಲ ಎನ್ನುವ ಮೂಲಕ ಎರಡೂ ಪಕ್ಷಗಳಿಗೆ ತಿವಿದರು.
ಮಮತಾ ಬ್ಯಾನರ್ಜಿ ವಿರುದ್ಧ ಮೊದಲು ವಾಗ್ದಾಳಿ:
ಪಶ್ಚಿಮ ಬಂಗಾಳದಲ್ಲಿ ನೀವು ಮಮತಾ ಬ್ಯಾನರ್ಜಿ ಅವರಿಗೆ ಅವಕಾಶ ನೀಡಿದ್ದರೂ ಅವರು ವಿಫಲರಾಗಿದ್ದಾರೆ. ಮಮತಾ ಅವರು ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆಯೇ ಅಥವಾ ಕಾಲೇಜುಗಳನ್ನು ನಿರ್ಮಿಸಿದ್ದಾರೆಯೇ. ಇಂದಿಗೂ ರಾಜ್ಯದ ಜನರಿಗೆ ಉದ್ಯೋಗ ಸಿಗುವುದೊಂದು ಸಾಹಸವಾಗಿದೆ. ಉದ್ಯೋಗಕ್ಕಾಗಿ ಲಂಚ ಸ್ವೀಕರಿಸುವ ಏಕೈಕ ರಾಜ್ಯವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬಿಜೆಪಿ ವಿರುದ್ಧ ಸೈದ್ಧಾಂತಿಕ ಹೋರಾಟ:
ನಮ್ಮ ಹೋರಾಟ ಕೇವಲ ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ನಡೆಯುತ್ತಿರುವುದು ಅಲ್ಲ. ನಮ್ಮ ಹೋರಾಟ ಕೇವಲ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ನಮ್ಮ ಹೋರಾಟದ ಹಿಂದೆ ಸೈದ್ಧಾಂತಿಕ ನಿಲುವು ಹೊಂದಿದೆ. ಆದರೆ ಮಮತಾ ಬ್ಯಾನರ್ಜಿಯವರದ್ದು ಕೇವಲ ರಾಜಕೀಯ ಹೋರಾಟವಷ್ಟೇ ಎಂದು ದೂಷಿಸಿದರು. ಬಂಗಾಳದಲ್ಲಿ ಸಂಸ್ಕೃತಿ ಮತ್ತು ಪರಂಪರೆಯನ್ನು ನಾಶಮಾಡಿ ದ್ವೇಷ, ಹಿಂಸೆ ಮತ್ತು ಒಡೆದು ಆಳುವ ರಾಜಕಾರಣವನ್ನು ಹೊರತುಪಡಿಸಿ ಬಿಜೆಪಿಯಿಂದ ಏನನ್ನೂ ನೀಡಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಕಿಡಿ ಕಾರಿದರು.
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಎರಡು ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಮಾರ್ಚ್ 27ರಂದು ಮೊದಲ ಹಂತ, ಏಪ್ರಿಲ್ 1ರಂದು ಎರಡನೇ ಹಂತ, ಏಪ್ರಿಲ್ 6ರಂದು ಮೂರನೇ ಹಂತ, ಏಪ್ರಿಲ್ 10ರಂದು ನಾಲ್ಕನೇ ಹಂತದ ಮತದಾನ ನಡೆದಿದೆ. ಉಳಿದಂತೆ ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಅಂತಿಮ ಫಲಿತಾಂಶ ಮೇ 2ರಂದು ಹೊರ ಬೀಳಲಿದೆ.