ಬುದ್ಧಿಜೀವಿಗಳನ್ನು 'ಕೋತಿಗಳು' ಎಂದ ಪಶ್ಚಿಮ ಬಂಗಾಳ ಬಿಜೆಪಿ ಮುಖಂಡ
ಕೋಲ್ಕತಾ, ಜನವರಿ 21: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರು 'ಮಮತಾ ಬ್ಯಾನರ್ಜಿ ಅವರ ನಾಯಿಗಳು' ಎಂದು ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಸೌಮಿತ್ರಾ ಖಾನ್ ಟೀಕಿಸಿದ ಬೆನ್ನಲ್ಲೇ, ಅವರ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಯಾಂತನ್ ಬಸು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.
ಖಾನ್ ಅವರ 'ನಾಯಿ' ಉಪಮೆ ವಿಚಾರದಲ್ಲಿ ತಕರಾರು ಇರುವವರು ಬುದ್ಧಿಜೀವಿಗಳನ್ನು 'ಕೋತಿಗಳು' ಎಂದು ಕರೆಯಬಹುದು ಎಂದು ಲೇವಡಿ ಮಾಡಿದ್ದಾರೆ.
ಸಿಎಎ ವಿರುದ್ಧ ಪ್ರತಿಭಟನೆ: ಬೆಂಗಳೂರಲ್ಲಿ 9 ಮಾರುಕಟ್ಟೆಗಳು ಬಂದ್
ಪ್ರತಿಭಟನಾಕಾರರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ನಿಂದ ತಲಾ 500 ರೂ. ಪಡೆದಿದ್ದಾರೆ ಎಂದು ಸಹ ಅವರು ಆರೋಪಿಸಿದ್ದಾರೆ.
ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಖಾರಗ್ಪುರದಲ್ಲಿ ಸೋಮವಾರ ಮಾತನಾಡಿದ ಅವರು, 'ಬುದ್ಧಿಜೀವಿಗಳನ್ನು ನಾಯಿಗಳೆಂದು ಕರೆಯುವುದರ ಬಗ್ಗೆ ಸಮಸ್ಯೆ ಇದ್ದರೆ, ನೀವು ಅವರನ್ನು ಕೋತಿಗಳು ಎಂದು ಕರೆಯಬಹುದು. ಈ ಕಾನೂನು (ಸಿಎಎ) ಜನಸಾಮಾನ್ಯರಿಗಾಗಿ ಇರುವುದು. ಸಿಎಎ ಪರ ಸಮಾವೇಶಗಳು ನಡೆಯುವಾಗ ಎಲ್ಲಿ ಸಾಮಾನ್ಯ ಜನರು ಇರುತ್ತಾರೋ ನಾವು ಅಲ್ಲಿಗೆ ಭೇಟಿ ನೀಡುತ್ತೇವೆ. ನಾಯಿಗಳು ಮತ್ತು ಕೋತಿಗಳಿಂದ ತುಂಬಿರುವ ಸ್ಥಳಗಳಿಗೆ ಭೇಟಿ ನೀಡುವುದರಿಂದ ಯಾವ ಪ್ರಯೋಜನವೂ ಇಲ್ಲ' ಎಂದು ಹೇಳಿದ್ದಾರೆ.
'ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ಟಿಎಂಸಿಯಿಂದ 500 ರೂ ಪಡೆದಿದ್ದಾರೆ. ಸರಿಯಾದ ಸಮಯಕ್ಕೆ ದುಡ್ಡು ಬಾರದ ಕಾರಣದಿಂದ ಅವರು ಪ್ರತಿಭಟನೆಯನ್ನು ನಿಲ್ಲಿಸಿದ್ದಾರೆ' ಎಂದು ಬಸು ಟೀಕಿಸಿದ್ದಾರೆ.
"ವಂದೇ ಮಾತರಂ ಗೊತ್ತಿಲ್ವಾ ಹಾಗಾದರೆ ಭಾರತ ಬಿಟ್ಟು ತೊಲಗಿ"
ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಪ್ರತಿಭಟನೆ ನಡೆಸಲು ರಸ್ತೆಗಿಳಿದಿರುವ ಬುದ್ಧಿಜೀವಿಗಳು ಮತ್ತು ಪ್ರಸಿದ್ಧ ವ್ಯಕ್ತಿಗಳು ಮಮತಾ ಬ್ಯಾನರ್ಜಿ ಅವರ ನಾಯಿಗಳು ಎಂದು ಬಿಜೆಪಿ ಸಂಸದ ಸೌಮಿತ್ರಾ ಖಾನ್ ಭಾನುವಾರ ಟೀಕಿಸಿದ್ದರು.
ಬಸು ಮತ್ತು ಸೌಮಿತ್ರಾ ಅವರ ಹೇಳಿಕೆಯನ್ನು ಖಂಡಿಸಿರುವ ಟಿಎಂಸಿ ಸಚಿವ ತಪಸ್ ರಾಯ್, ಈ ಹೇಳಿಕೆಗಳಿಂದ ಅಚ್ಚರಿಯೇನೂ ಆಗಿಲ್ಲ ಎಂದಿದ್ದಾರೆ. 'ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರೇ ಹೆಚ್ಚು ಅವಹೇಳನಾಕಾರಿ ಹೇಳಿಕೆಗಳನ್ನು ನೀಡುತ್ತಾರೆ. ಹೀಗಿರುವಾಗ ಪಕ್ಷದ ಇತರರು ಅದನ್ನೇ ಅನುಸರಿಸುವುದರಲ್ಲಿ ಅಚ್ಚರಿಯೇನಿಲ್ಲ. ಬಂಗಾಳಿ ಸಂಸ್ಕೃತಿಯನ್ನು ನಾಶಪಡಿಸಲು ಮುಂದಾಗಿರುವ ಬಿಜೆಪಿ ನಾಯಕರಿಂದ ಬೇರೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ' ಎಂದು ಕಿಡಿಕಾರಿದ್ದಾರೆ.