ಪಶ್ಚಿಮ ಬಂಗಾಳ ಡ್ರಗ್ಸ್ ಪ್ರಕರಣ: ಬಿಜೆಪಿ ನಾಯಕನ ಮನೆ ಮೇಲೆ ಪೊಲೀಸರ ದಾಳಿ, ಬಂಧನ
ಕೋಲ್ಕತಾ, ಫೆಬ್ರವರಿ 24: ಬಿಜೆಪಿಯ ಯುವ ಮೋರ್ಚಾ ನಾಯಕಿ ಪಮೇಲಾ ಗೋಸ್ವಾಮಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರು ಬಿಜೆಪಿ ಮುಖಂಡ ರಾಕೇಶ್ ಸಿಂಗ್ ಅವರನ್ನು ಪುರ್ಬ ಬರ್ಧಮಾನ್ ಜಿಲ್ಲೆಯ ಗಲ್ಸಿಯಲ್ಲಿ ಬಂಧಿಸಿದ್ದಾರೆ. ರಾಕೇಶ್ ಸಿಂಗ್ ಅವರು ಪಶ್ಚಿಮ ಬಂಗಾಳದಿಂದ ಪರಾರಿಯಾಗಲು ಸಿದ್ಧತೆ ನಡೆಸಿದ್ದ ಸಂದರ್ಭದಲ್ಲಿ ಅವರನ್ನು ಡಿಟೆಕ್ಟಿವ್ ಇಲಾಖೆ ಬಂಧಿಸಿದೆ.
ರಾಕೇಶ್ ಸಿಂಗ್ ಅವರನ್ನು ವಿಚಾರಣೆಗೆ ಒಳಪಡಿಸಲು ಕೋಲ್ಕತಾ ಪೊಲೀಸರ ತಂಡವೊಂದು ಗಲ್ಸಿ ಪೊಲೀಸ್ ಠಾಣೆಗೆ ತೆರಳಿದೆ. ಕೆಲವು ದಿನಗಳ ಹಿಂದೆ ಬಿಜೆಪಿ ಪಶ್ಚಿಮ ಬಂಗಾಳ ಯುವಮೋರ್ಚಾ ಘಟಕದ ನಾಯಕಿ ಪಮೇಲಾ ಗೋಸ್ವಾಮಿ ಅವರನ್ನು ಕೊಕೇನ್ ಸಾಗಿಸುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿತ್ತು. ಪಮೇಲಾ ಅವರು ಪೊಲೀಸರ ಮುಂದೆ ಬಿಜೆಪಿ ಬಂಗಾಳ ಘಟಕದ ರಾಜ್ಯ ಸಮಿತಿ ಸದಸ್ಯ ರಾಕೇಶ್ ಸಿಂಗ್ ಹೆಸರು ಹೇಳಿದ್ದರು ಎನ್ನಲಾಗಿದೆ.
ಡ್ರಗ್ಸ್ ಜೊತೆ ಸಿಕ್ಕಿಬಿದ್ದ ಪ್ರಕರಣ; ಸಿಐಡಿ ತನಿಖೆಗೆ ಪಮೇಲಾ ಗೋಸ್ವಾಮಿ ಒತ್ತಾಯ
ಮಂಗಳವಾರ ಕೋಲ್ಕತಾ ಪೊಲೀಸರು ರಾಕೇಶ್ ಸಿಂಗ್ ಮನೆಗೆ ಪ್ರವೇಶಿಸಲು ಪ್ರಯತ್ನಿಸಿದರು. ಆದರೆ ಸರ್ಚ್ ವಾರಂಟ್ ತೋರಿಸದ ಹೊರತು ಒಳಗೆ ಬಿಡುವುದಿಲ್ಲ ಎಂದು ರಾಕೇಶ್ ಸಿಂಗ್ ಕುಟುಂಬದವರು ಪಟ್ಟು ಹಿಡಿದಿದ್ದರಿಂದ ಪೊಲೀಸರು ಕೆಲವು ಸಮಯ ಮನೆಯ ಹೊರಗೆ ಕಾಯಬೇಕಾಯಿತು. ನ್ಯೂ ಅಲಿಪೊರ್ ಪೊಲೀಸ್ ಠಾಣೆಯ ಡಿಟೆಕ್ಟಿವ್ ಇಲಾಖೆಯ ಮಾದಕವಸ್ತು ವಿರೋಧಿ ಮತ್ತು ರೌಡಿ ವಿರೋಧಿ ವಿಭಾಗಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ಮುಂದೆ ಓದಿ.
ಸಿಂಗ್ ಪುತ್ರರ ಬಂಧನ
ಕೋಲ್ಕತಾ ಪೊಲೀಸರ ಡಿಟೆಕ್ಟಿವ್ ಇಲಾಖೆಯು ರಾಕೇಶ್ ಸಿಂಗ್ ಅವರ ಇಬ್ಬರು ಗಂಡುಮಕ್ಕಳನ್ನು ಕೂಡ ಬಂಧಿಸಿದೆ. ಅವರು ಮಾಧ್ಯಮಗಳ ಮುಂದೆ ಮಾತನಾಡದಂತೆ ಬೇರೆಡೆಗೆ ಕರೆದೊಯ್ಯಲಾಯಿತು. ರಾಕೇಶ್ ಸಿಂಗ್ ನಿವಾಸದಿಂದ ಅವರ ಮಕ್ಕಳಾದ ಸುವಮ್ ಸಿಂಗ್ (25) ಮತ್ತು ಸಾಹೇಬ್ ಸಿಂಗ್ (21) ಅವರನ್ನು ಎಳೆದೊಯ್ದು ಪೊಲೀಸ್ ವಾಹನಕ್ಕೆ ದಬ್ಬಿದ ಘಟನೆ ತೀವ್ರ ಗದ್ದಲಕ್ಕೆ ಕಾರಣವಾಯಿತು.
ಸರ್ಚ್ ವಾರಂಟ್ ಇರಲಿಲ್ಲ
ಪೊಲೀಸರ ಬಳಿ ಸರ್ಚ್ ವಾರಂಟ್ ಇರಲಿಲ್ಲ. ಮನೆಯಲ್ಲಿ ಏಕೆ ಶೋಧನೆ ನಡೆಸಬೇಕು ಎಂಬುದನ್ನು ಕೂಡ ಅವರು ಉಲ್ಲೇಖಿಸಿರಲಿಲ್ಲ ಎಂದು ರಾಕೇಶ್ ಸಿಂಗ್ ಪುತ್ರಿ ಸಿಮ್ರಾನ್ ಸಿಂಗ್ ಆರೋಪಿಸಿದ್ದಾರೆ. ನಾನು ನ್ಯಾಯಕ್ಕಾಗಿ ಹೋರಾಡುತ್ತೇನೆ ಎಂದು ತಿಳಿಸಿದ್ದಾರೆ.
ಮಾದಕವಸ್ತು ಜತೆ ಸಿಕ್ಕಿಬಿದ್ದ ಬಿಜೆಪಿ ಯುವ ನಾಯಕಿ: ಯಾರಿದು ಪಮೇಲಾ ಗೋಸ್ವಾಮಿ?
ನನ್ನ ಮೇಲೂ ಹಲ್ಲೆ ನಡೆಸಿದರು
'ಅವರು ನನ್ನನ್ನು ದೂಡಿದರು. ಮಹಿಳಾ ಪೊಲೀಸರೊಬ್ಬರು ಒದ್ದು ಹಲ್ಲೆ ನಡೆಸಿದರು. ನನ್ನ ತಾಯಿ ಖಿನ್ನತೆಗೆ ಒಳಗಾಗಿದ್ದಾರೆ. ಅವರು ನನ್ನ ಸಹೋದರರನ್ನು ಎಳೆದೊಯ್ದರು, ನನಗೆ ನ್ಯಾಯ ಬೇಕು. ಅದಕ್ಕಾಗಿ ಹೋರಾಡುತ್ತೇನೆ. ನನ್ನ ಸಹೋದರರನ್ನು ಭೇಟಿ ಮಾಡಲೂ ನನಗೆ ಬಿಡುತ್ತಿಲ್ಲ. ನನ್ನ ಸಹೋದರರನ್ನು ಏಕೆ ಬಂಧಿಸಿ ಕರೆದೊಯ್ಯಲಾಗುತ್ತಿದೆ ಎಂಬುದನ್ನು ಕೂಡ ಪೊಲೀಸರು ತಿಳಿಸಲಿಲ್ಲ' ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಅವರಿಗೆ ಏನೂ ಸಿಗಲಿಲ್ಲ
'ನನ್ನ ತಂದೆ ರಾಜಕೀಯ ವ್ಯಕ್ತಿಯಾಗಿರುವ ಕಾರಣ ಈ ಹಿಂದೆಯೂ ಕಿರುಕುಳ ಅನುಭವಿಸಿದ್ದೆವು. ಆದರೆ ಈ ರೀತಿಯ ಕೆಟ್ಟ ಅನುಭವ ಆಗಿರಲಿಲ್ಲ. ಸುಮಾರು 200 ಪೊಲೀಸರು ನಮ್ಮ ಮನೆಗೆ ಬಂದಿದ್ದರು. ಅವರಲ್ಲಿ 20 ಜನರು ಮನೆಯೊಳಗೆ ಹುಡುಕಾಟ ನಡೆಸಿದರು. ಅಲ್ಮೆರಾಗಳನ್ನು ತೆರೆದು ನೋಡಿದರು. ಅವರಿಗೆ ಏನೂ ಸಿಗಲಿಲ್ಲ. ತಮ್ಮ ದಾಖಲೆಯಲ್ಲಿ 'ನಿಲ್' ಎಂದೂ ನಮೂದಿಸಿದರು. ನಮ್ಮ ಮನೆಯನ್ನು ಸಂಪೂರ್ಣವಾಗಿ ಜಾಲಾಡಿದರು. ಅವರು ಏನನ್ನು ಹುಡುಕಲು ಬಂದಿದ್ದರೋ ನಮಗೆ ಗೊತ್ತಿಲ್ಲ' ಎಂದು ತಿಳಿಸಿದ್ದಾರೆ.