'ನಾಲ್ಕಲ್ಲ, ಎಂಟು ಹೆಣ ಉರುಳಬೇಕಿತ್ತು': ಬಿಜೆಪಿ ಮುಖಂಡನ ವಿವಾದಾತ್ಮಕ ಹೇಳಿಕೆ
ಕೋಲ್ಕತಾ, ಏಪ್ರಿಲ್ 12: ಪಶ್ಚಿಮ ಬಂಗಾಳದಲ್ಲಿ ಶನಿವಾರ ಸಿತಲ್ಕುಚಿಯಲ್ಲಿ ನಡೆದ ಗುಂಡಿನ ದಾಳಿ ಪ್ರಕರಣ ಮತ್ತಷ್ಟು ರಾಜಕೀಯ ವಿವಾದ ಸೃಷ್ಟಿಸಿದೆ. ಕಿಡಿಗೇಡಿಗಳು ಸುಮ್ಮನಿರದೆ ಇದ್ದರೆ ಸಿತಲ್ಕುಚಿಯಲ್ಲಿ ನಡೆದ ಘಟನೆ ಮರುಕಳಿಸುತ್ತದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ, ಬಿಜೆಪಿಯ ಮತ್ತೊಬ್ಬ ಮುಖಂಡ ರಾಹುಲ್ ಸಿನ್ಹಾ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಕೂಚ್ ಬೆಹಾರ್ನ ಸಿತಲ್ಕುಚಿಯಲ್ಲಿ ನಾಲ್ಕಲ್ಲ, ಎಂಟು ಮಂದಿಯನ್ನು ಸಿಐಎಸ್ಎಫ್ ಪಡೆಗಳು ಹತ್ಯೆ ಮಾಡಬೇಕಿತ್ತು ಎಂದು ಅವರು ಹೇಳಿದ್ದಾರೆ.
ಹಬ್ರಾ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಯಾಗಿರುವ ರಾಹುಲ್ ಸಿನ್ಹಾ ಚುನಾವಣಾ ಸಮಾವೇಶದ ವೇಳೆ ಮಾತನಾಡುವ ಸಂದರ್ಭದಲ್ಲಿ, 'ಸಿತಲ್ಕುಚಿಯಲ್ಲಿ ನಾಲ್ಕಲ್ಲ, ಎಂಟು ಮಂದಿಯನ್ನು ಗುಂಡಿಕ್ಕಿ ಸಾಯಿಸಬೇಕಿತ್ತು' ಎಂದಿದ್ದಾರೆ.
ಸಿತಲ್ಕುಚಿಯಲ್ಲಿನ ಘಟನೆ ಮರುಕಳಿಸುತ್ತದೆ ಹುಷಾರ್; ದಿಲೀಪ್ ಘೋಷ್ ಎಚ್ಚರಿಕೆ
'ಕೇಂದ್ರ ಪಡೆಗಳು ಸಿತಲ್ಕುಚಿಯಲ್ಲಿ ನಾಲ್ಕು ಮಂದಿಯ ಬದಲು ಎಂಟು ಮಂದಿಯನ್ನು ಸಾಯಿಸಬೇಕಿತ್ತು. ಆದರೆ ಕೇಂದ್ರ ಪಡೆಗಳು ನಾಲ್ಕು ಮಂದಿಯನ್ನು ಸಾಯಿಸಿದ್ದು ಏಕೆಂದರೆ ಅದರ ಪರಿಣಾಮ ಗೊತ್ತಿರಲಿ ಎಂದು. ಬಿಜೆಪಿಯನ್ನು ಬೆಂಬಲಿಸಿದ ಕಾರಣಕ್ಕೆ ಮತಗಟ್ಟೆಯಲ್ಲಿ ಸಾರ್ವಜನಿಕವಾಗಿ 18 ವರ್ಷದ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಹಾಗೆ ಕೊಂದವರ ನಾಯಕಿ ಮಮತಾ ಬ್ಯಾನರ್ಜಿ' ಎಂದು ಆರೋಪಿಸಿದ್ದಾರೆ.
ಶನಿವಾರ ನಡೆದ ನಾಲ್ಕನೆಯ ಹಂತದ ಚುನಾವಣೆಯಲ್ಲಿ ಸನ್ನಿವೇಶಕ್ಕೆ ತಕ್ಕಂತೆಯೇ ಕೇಂದ್ರ ಪಡೆಗಳು ಪ್ರತಿಕ್ರಿಯೆ ನೀಡಿವೆ. ಈ ರೀತಿ ಮತ್ತೆ ಸಂಭವಿಸಿದರೆ ಅದಕ್ಕೂ ಕೇಂದ್ರ ಪಡೆಗಳು ಪ್ರತಿಕ್ರಿಯೆ ನೀಡುತ್ತವೆ ಎಂದಿದ್ದಾರೆ.
"ಕೇಂದ್ರ ಭದ್ರತಾ ಪಡೆ ವಿರುದ್ಧ ಸ್ಥಳೀಯರನ್ನು ಎತ್ತಿ ಕಟ್ಟಿದ್ದೇ ದೀದಿ"
'ಜನರು ಮತದಾನ ಮಾಡುವುದನ್ನು ತಡೆಯಲು ಕೆಟ್ಟ ಮಾರ್ಗ ಅನುಸರಿಸುತ್ತಿರುವವರ ನಾಯಕಿ ಮಮತಾ ಬ್ಯಾನರ್ಜಿ. ಹೀಗಾಗಿ ಮಮತಾರ ದಿನಗಳು ಮುಗಿಯಿತು. ತಮ್ಮ ಶಕ್ತಿ ಪ್ರದರ್ಶನದ ಮೂಲಕ ಜನರು ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಈಡೇರಿಸುವುದಕ್ಕೆ ಗೂಂಡಾಗಳು ಅಡ್ಡಿಪಡಿಸುತ್ತಿದ್ದಾರೆ. ಸಿತಕ್ಕುಚಿಯಲ್ಲಿ ಅದೇ ನಡೆದಿರುವುದು. ಅದು ಮತ್ತೆ ನಡೆದರೆ, ಅವರು ಪುನಃ ಉತ್ತರ ನೀಡುತ್ತಾರೆ' ಎಂದು ಸಿನ್ಹಾ ಎಚ್ಚರಿಕೆ ನೀಡಿದ್ದಾರೆ.