ಸಿತಲ್ಕುಚಿಯಲ್ಲಿನ ಘಟನೆ ಮರುಕಳಿಸುತ್ತದೆ ಹುಷಾರ್; ದಿಲೀಪ್ ಘೋಷ್ ಎಚ್ಚರಿಕೆ
ಕೋಲ್ಕತ್ತಾ, ಏಪ್ರಿಲ್ 12: ಪಶ್ಚಿಮ ಬಂಗಾಳದಲ್ಲಿ ಶನಿವಾರ ನಾಲ್ಕನೇ ಹಂತದ ಚುನಾವಣೆ ಸಂದರ್ಭ ನಡೆದ ಗಲಭೆ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್, ಕಿಡಿಗೇಡಿಗಳು ಸುಮ್ಮನಿರದಿದ್ದರೆ ಮುಂದೆಯೂ ಸಿತಲ್ ಕುಚಿಯಲ್ಲಿ ನಡೆದಂಥ ಘಟನೆ ಮರುಕಳಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜನರನ್ನು ಭದ್ರತಾ ಪಡೆ ವಿರುದ್ಧ ಎತ್ತಿಕಟ್ಟಿದ ಆರೋಪದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದಿಲೀಪ್ ಘೋಷ್ ಆಗ್ರಹಿಸಿದ್ದು, ಮಮತಾ ಬ್ಯಾನರ್ಜಿಗೆ, ರಾಜ್ಯದಲ್ಲಿ ಚುನಾವಣಾ ಸಮಾವೇಶ, ಪ್ರಚಾರ ಕೈಗೊಳ್ಳದಂತೆ ತಡೆಯಬೇಕು ಎಂದು ಹೇಳಿದ್ದಾರೆ.
"ಕೇಂದ್ರ ಭದ್ರತಾ ಪಡೆ ವಿರುದ್ಧ ಸ್ಥಳೀಯರನ್ನು ಎತ್ತಿ ಕಟ್ಟಿದ್ದೇ ದೀದಿ"
ಶನಿವಾರ್ ಕೂಚ್ಬೇಹರ್ನಲ್ಲಿನ ಸಿತಲ್ಕುಚಿಯಲ್ಲಿ ಮತದಾನ ಸಂದರ್ಭ ಗಲಭೆ ನಡೆದಿದ್ದು, ಸಿಐಎಸ್ಎಫ್ ಸಿಬ್ಬಂದಿ ಗುಂಡು ಹಾರಿಸಿದ್ದರು. ಈ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದರು.
"ಕಿಡಿಗೇಡಿಗಳು ಎಲ್ಲಿಂದ ಬಂದರು? ಅವರಿಗೆ ಬುಲೆಟ್ ಗಳನ್ನು ಯಾರು ಕೊಟ್ಟರು? ಇವರೆಲ್ಲಾ ಬಂಗಾಳದಲ್ಲಿ ಉಳಿಯುವುದಿಲ್ಲ. ಇದು ಆರಂಭವಷ್ಟೆ. ಸಿಐಎಸ್ಎಫ್ ಸಿಬ್ಬಂದಿ ಬರೀ ಪ್ರದರ್ಶನಕ್ಕೆ ಬಂದೂಕುಗಳನ್ನು ಇಟ್ಟುಕೊಂಡಿಲ್ಲ. ಹಾಗೆ ಅಂದುಕೊಂಡಿದ್ದರೆ ಅದು ಕಿಡಿಗೇಡಿಗಳ ತಪ್ಪು. ಯಾರೇ ಆಗಲಿ ಕಾನೂನನ್ನು ಅವರ ಕೈಗೆತ್ತಿಕೊಂಡರೆ, ಅಂಥದ್ದೇ ಉತ್ತರ ಅವರಿಗೆ ದೊರೆಯುತ್ತದೆ. ಮತದಾನದ ಬೂತ್ಗಳಿಗೆ ಕೇಂದ್ರ ಪಡೆ ನಿಯೋಜಿಸಲಾಗಿದೆ. ಯಾರೂ ಅವರಿಗೆ ಸಮಸ್ಯೆ ನೀಡುವಂತಿಲ್ಲ. ಪರಿಸ್ಥಿತಿ ಕೈಮೀರಿ ಹೋದರೆ, ಸಿತಲ್ಕುಚಿಯಲ್ಲಿ ನಡೆದಂಥ ಘಟನೆಯೇ ಹಲವೆಡೆ ಮರುಕಳಿಸುತ್ತದೆ. ಎಚ್ಚರಿಕೆಯಿಂದಿರಿ" ಎಂದು ಬಾರಾನಗರದಲ್ಲಿನ ಸಾರ್ವಜನಿಕ ಸಭೆಯಲ್ಲಿ ಘೋಷ್ ಎಚ್ಚರಿಕೆ ನೀಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ 8 ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಈಗಾಗಲೇ ನಾಲ್ಕು ಹಂತದ ಚುನಾವಣೆ ಪೂರ್ಣಗೊಂಡಿದೆ. ಮತದಾನದ ಸಂದರ್ಭ ರಾಜ್ಯದಲ್ಲಿ ಅಹಿತಕರ ಘಟನೆಗಳೂ ವರದಿಯಾಗುತ್ತಿವೆ.