ಟಿಎಂಸಿ ಸದಸ್ಯರಿಗೆ ತಿರುಗಿ ಬಾರಿಸಲು ಬಿದಿರಿನ ದೊಣ್ಣೆ ತನ್ನಿ: ಬಿಜೆಪಿ ಮುಖಂಡ
ಸುರಿ, ನವೆಂಬರ್ 26: ಬಿರ್ಭುಮ್ ಜಿಲ್ಲೆಯಲ್ಲಿ ಸಮಾವೇಶಕ್ಕೆ ತೆರಳುತ್ತಿದ್ದ ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ತೃಣಮೂಲ ಕಾಂಗ್ರೆಸ್ ಸದಸ್ಯರು ಹಲ್ಲೆ ನಡೆಸಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಆರೋಪಿಸಿದ್ದಾರೆ. ಇನ್ನು ಮುಂದೆ ಬೀದಿಗೆ ಇಳಿಯುವ ಸಂದರ್ಭದಲ್ಲಿ ಬಿದಿರಿನ ದೊಣ್ಣೆಗಳನ್ನು ಹಿಡಿದುಕೊಂಡು ಬನ್ನಿ. ಅಗತ್ಯಬಂದಾಗ ಅವರಿಗೆ ತಿರುಗಿ ಬಾರಿಸಬಹುದು ಎಂದು ಬಿಜೆಪಿ ಕಾರ್ಯಕರ್ತರಿಗೆ ಅವರು ಕರೆ ನೀಡಿದ್ದಾರೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಬಳಿ ಬಿಜೆಪಿ ಅಧಿಕಾರಕ್ಕೆ ಬಂದೊಡನೆ ಅನೇಕ ಟಿಎಂಸಿ ನಾಯಕರು ಜೈಲಿಗೆ ಹೋಗುತ್ತಾರೆ ಎಂದೂ ಅವರು ಹೇಳಿದ್ದಾರೆ.
''ಗೂಂಡಾರಾಜ್ ಬೆಂಬಲಿಸುವ ಪೊಲೀಸರು ಬೂಟು ನೆಕ್ಕಲಿ''
'ಸಭೆಗೆ ಬರುತ್ತಿದ್ದ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ತೃಣಮೂಲ ಕಾಂಗ್ರೆಸ್ ಹಲ್ಲೆ ನಡೆಸಿದೆ. ಬಿಜೆಪಿ ಕಾರ್ಯಕರ್ತರು ಹೊಡೆತ ತಿನ್ನುವುದಕ್ಕಾಗಿ ಹುಟ್ಟಿರುವುದಲ್ಲ. ಪಕ್ಷದ ಕಾರ್ಯಕರ್ತರು ರಸ್ತೆಗಳಿಗೆ ಬರಿಗೈಲಿ ಬರಬೇಡಿ ಎಂದು ನಾನು ಮನವಿ ಮಾಡುತ್ತೇನೆ. ಒಂದೊಂದು ಬಿದಿರಿನ ದೊಣ್ಣೆ ಹಿಡಿದು ಬನ್ನಿ. ಅಗತ್ಯ ಬಿದ್ದಾಗ ತಿರುಗಿ ಬಾರಿಸಬಹುದು' ಎಂದು ಸಲಹೆ ನೀಡಿದ್ದಾರೆ.
ಬಿರ್ಭುಮ್ ಜಿಲ್ಲೆಯ ಸಿಮುಲಿಯಾದಲ್ಲಿ ಮಿನಿ ಬಸ್ ಒಂದರಲ್ಲಿ ಸಮಾವೇಶಕ್ಕೆ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿತ್ತು.
ಓವೈಸಿ ಕಣ್ಣು ಬಂಗಾಳದ ಮೇಲೆ: ಬಿಜೆಪಿಗೆ ಲಾಭದ ನಿರೀಕ್ಷೆ
'ಪಶ್ಚಿಮ ಬಂಗಾಳದಲ್ಲಿ ಎಲ್ಲೆಡೆ ಅಶಾಂತಿ ತಲೆದೋರಿದೆ. ಪೊಲೀಸರು ಮತ್ತು ಆಡಳಿತವು ಪರಿಣಾಮಕಾರಿಯಾಗಿಲ್ಲ. ಅವರು ಟಿಎಂಸಿ ನಾಯಕರ ಸೇವೆ ಮಾಡುವುದರಲ್ಲಿ ಮುಳುಗಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಟಿಎಂಸಿ ನಾಯಕರು ಜೈಲಿನಲ್ಲಿ ಇರುತ್ತಾರೆ' ಎಂದು ಘೋಷ್ ಹೇಳಿದ್ದಾರೆ.
ಬಿಜೆಪಿ ಆಡಳಿತವಿರುವ ಇತರೆ ರಾಜ್ಯಗಳಲ್ಲಿರುವಂತೆಯೇ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇಲ್ಲಿನ ಜನರು ಶಾಂತಿಯುತವಾಗಿ ಇರಲು ಸಾಧ್ಯವಾಗಲಿದೆ ಎಂದಿದ್ದಾರೆ.