ಅಧಿಕೃತವಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಾಬುಲ್ ಸುಪ್ರಿಯೋ
ಕೋಲ್ಕತ್ತಾ, ಅಕ್ಟೋಬರ್ 19: ಇತ್ತೀಚೆಗಷ್ಟೇ ಬಿಜೆಪಿ ತೊರೆದು ಟಿಎಂಸಿ ಸೇರಿರುವ ಬಾಬುಲ್ ಸುಪ್ರಿಯೋ ಮಂಗಳವಾರ ಅಧಿಕೃತವಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಲೋಕಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಅಪಾಯಿಂಟ್ಮೆಂಟ್ ನೀಡಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬಾಬುಲ್ ಸುಪ್ರಿಯೋ ಅವರು ಟ್ವೀಟ್ ಮೂಲಕ ಧನ್ಯವಾದ ಅರ್ಪಿಸಿದ್ದರು.
ಸಂಸದ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಲು ನನಗೆ ಸಮಯ ನೀಡಿದ್ದಕ್ಕಾಗಿ ಗೌರವಾನ್ವಿತ ಸ್ಪೀಕರ್ ಸರ್ ಓಂ ಬಿರ್ಲಾ ಅವರಿಗೆ ಧನ್ಯವಾದಗಳು. ನಾನು ಈ ಸ್ಥಾನವನ್ನು ಗೆದ್ದಿದ್ದೇನೆ. ಅದನ್ನು ಉಳಿಸಿಕೊಳ್ಳಲು ಮತ್ತೆ ಗೆಲ್ಲುತ್ತೇನೆ" ಎಂದು ಸುಪ್ರಿಯೋ ಎಂದು ಟ್ವೀಟ್ ಮಾಡಿದ್ದರು.
ಸುಪ್ರಿಯೋ ಅವರು ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸೇರಿಕೊಂಡ ಎರಡು ದಿನಗಳ ನಂತರ ಸೆಪ್ಟೆಂಬರ್ 20 ರಂದು ಬಿರ್ಲಾ ಅವರಿಗೆ ಪತ್ರ ಬರೆದು, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಅಪಾಯಿಂಟ್ಮೆಂಟ್ ನೀಡುವಂತೆ ಕೋರಿದ್ದರು.
2014 ರಿಂದ ನರೇಂದ್ರ ಮೋದಿ ಸರ್ಕಾರದಲ್ಲಿ ಎಂಒಎಸ್ ಆಗಿ ಹಲವಾರು ಖಾತೆಗಳನ್ನು ಹೊಂದಿದ್ದ ಸುಪ್ರಿಯೋ ಅವರನ್ನು ಪ್ರಮುಖ ಕ್ಯಾಬಿನೆಟ್ ಪುನರ್ರಚನೆಯ ಸಮಯದಲ್ಲಿ ಕೈ ಬಿಡಲಾಗಿತ್ತು.
ಅಸನ್ಸೋಲ್ನಿಂದ ಎರಡು ಬಾರಿ ಸಂಸದರಾಗಿದ್ದು, ಜುಲೈ 7 ರಂದು ಕೇಂದ್ರ ಸಚಿವ ಸಂಪುಟದಿಂದ ಕೈಬಿಟ್ಟ ಹಲವಾರು ಸಚಿವರಲ್ಲಿ ಒಬ್ಬರು. ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ನ ಅರೂಪ್ ಬಿಸ್ವಾಸ್ ವಿರುದ್ಧ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರು.
ಸುಪ್ರಿಯೋ ಮತ್ತು ದೇಬಶ್ರೀ ಚೌಧುರಿ ಇಬ್ಬರನ್ನು ಮಂತ್ರಿ ಸ್ಥಾನದಿಂದ ಕೈಬಿಡಲಾಗಿತ್ತು. ಪಶ್ಚಿಮ ಬಂಗಾಳದ ಇತರ ನಾಲ್ಕು ಸಂಸದರು - ನಿಶಿತ್ ಪ್ರಮಾಣಿಕ್, ಸಂತನು ಠಾಕೂರ್, ಸುಭಾಸ್ ಸರ್ಕಾರ್ ಮತ್ತು ಜಾನ್ ಬಾರ್ಲಾ ಅವರನ್ನು ಸಚಿವಾಲಯದಲ್ಲಿ ಎಂಒಎಸ್ ಆಗಿ ಸೇರಿಸಿಕೊಳ್ಳಲಾಯಿತು.
ನನ್ನನ್ನು ಟೀಕಿಸುವುದಕ್ಕೂ ಮೊದಲು ಸುವೇಂದು ಅಧಿಕಾರಿ ತಮ್ಮ ತಂದೆ ಮತ್ತು ಸಹೋದರನಿಗೆ ಟಿಎಂಸಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೇಳಲಿ. ಸುವೇಂದು ಅಧಿಕಾರಿ, ಅವರ ತಂದೆ ಮತ್ತು ಸಹೋದರ ಟಿಎಂಸಿ ತೊರೆದಿದ್ದಾರೆ. ಹೀಗಾಗಿ ಅವರೂ ಕೂಡ ಟಿಎಂಸಿಯಿಂದ ಆಯ್ಕೆಯಾದ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಾಬುಲ್ ಸುಪ್ರಿಯೋ ಒತ್ತಾಯಿಸಿದರು.
ಸುಪ್ರಿಯೋ ಮಾತನಾಡಿ, ಬಿಜೆಪಿಯೊಂದಿಗೆ ಅಧಿಕೃತವಾಗಿ ಸಂಬಂಧ ಕಡಿದುಕೊಳ್ಳುತ್ತಿರುವುದರಿಂದ ಮನಸ್ಸು ಭಾರವಾಗಿದೆ. ನನ್ನ ರಾಜಕೀಯ ಜೀವನ ಆರಂಭವಾಗಿದ್ದು ಬಿಜೆಪಿ ಪಕ್ಷದಿಂದ. ಈಗ ಆ ಪಕ್ಷವನ್ನು ತೊರೆಯುತ್ತಿರುವುದು ನನ್ನ ಪಾಲಿಗೆ ಅಷ್ಟು ಸುಲಭವಲ್ಲ ಎಂದರು.
ನನ್ನ ಮೇಲೆ ನಂಬಿಕೆಯಿಟ್ಟು ಪಕ್ಷ ಮತ್ತು ಸರ್ಕಾರದಲ್ಲಿ ಜವಾಬ್ದಾರಿ ನೀಡಿದ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಬಾಬುಲ್ ಸುಪ್ರಿಯೋ ಈ ವೇಳೆ ನುಡಿದರು. ನಾನು ಈಗ ಬಿಜೆಪಿ ಪಕ್ಷದ ಭಾಗವಲ್ಲ, ಹೀಗಾಗಿ ಪಕ್ಷದಿಂದ ಆಯ್ಕೆಯಾದ ಸಂಸದ ಸ್ಥಾನವನ್ನು ಉಳಿಸಿಕೊಳ್ಳುವುದು ನೈತಿಕವಾಗಿ ಸರಿಯಲ್ಲ. ಹೀಗಾಗಿ ರಾಜೀನಾಮೆ ನೀಡಿದ್ದೇನೆ ಎಂದು ಬಾಬುಲ್ ಸುಪ್ರಿಯೋ ಸ್ಪಷ್ಟಪಡಿಸಿದರು.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವನೆ ಬಳಿಕ ನಡೆದ ಕೇಂದ್ರ ಸಮಫುಟ ಪುನರ್ ರಚನೆಯಲ್ಲಿ, ಬಾಬುಲ್ ಸುಪ್ರಿಯೋ ಅವರನ್ನು ಕೇಂದ್ರ ಸಚಿವ ಸ್ಥಾನದಿಂದ ಕೈಬಿಡಲಾಗಿತ್ತು. ಇದರಿಂದ ನೊಂದಿದ್ದ ಬಾಬುಲ್ ಸುಪ್ರಿಯೋ, ಬಿಜೆಪಿ ತೊರೆದು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಸುಪ್ರಿಯೋ, ಇಷ್ಟು ದಿನ ಟಿಂಎಸಿ ಪಕ್ಷದ ನಾಯಕರಾಗಿದ್ದು ಅವರು ಬಿಜೆಪಿ ಸೇರಿದ ಬಳಿಕ ಬಳಿಕ ನನ್ನ ಬಗ್ಗೆ ಕಹಿ ಮಾತುಗಳನ್ನಾಡುವುದು ಸಹಜ ಎಂದು ಹೇಳಿದರು.