ದೀದಿ, ನೀವು ಸ್ಕೂಟಿಯಿಂದ ಬೀಳದಿರುವುದೇ ಒಳ್ಳೆಯ ಸಂಗತಿ: ಮಮತಾಗೆ ಮೋದಿ ಅಣಕ
ಕೋಲ್ಕತಾ, ಮಾರ್ಚ್ 7: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ದೀದಿ ಪ್ರಾಬಲ್ಯದ ನಾಡಿನಲ್ಲಿ ಪ್ರಚಾರ ಸಭೆ ನಡೆಸಿದ್ದಾರೆ. ಅವರ ಸಮಾವೇಶಕ್ಕೂ ಮುನ್ನ ಖ್ಯಾತ ನಟ ಮಿಥುನ್ ಚಕ್ರವರ್ತಿ ಅವರು ಅದೇ ವೇದಿಕೆಯಲ್ಲಿ ಬಿಜೆಪಿ ಸೇರ್ಪಡೆಯಾದರು.
ತಮ್ಮ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕಟುವಾಗಿ ಟೀಕಿಸಿದರು. ಬಂಗಾಳಕ್ಕೆ ನಿಜವಾದ ಬದಲಾವಣೆ ತರುವ ಭರವಸೆ ನೀಡಲು ತಾವು ಇಲ್ಲಿ ಬಂದಿರುವುದಾಗಿ ಹೇಳಿದರು.
ನಾನು ನಾಗರಹಾವು... ಬಿಜೆಪಿ ಸೇರುತ್ತಿದ್ದಂತೆ ಮಿಥುನ್ ಚಕ್ರವರ್ತಿ ಹೊಸ ಡೈಲಾಗ್
'ನಾನು ರಾಜಕೀಯ ಜೀವನದಲ್ಲಿ ನೂರಾರು ಸಮಾವೇಶದಲ್ಲಿ ಮಾತಾಡುವ ಅವಕಾಶ ಪಡೆದಿದ್ದೇನೆ. ಆದರೆ ಇಷ್ಟು ದೀರ್ಘಾವಧಿಯಲ್ಲಿ ಎಂದಿಗೂ ಇಂತಹ ದೊಡ್ಡ ಜನಸಮೂಹದ ಆಶೀರ್ವಾದ ಎಂದಿಗೂ ಸಿಕ್ಕಿರಲಿಲ್ಲ. ನನಗೆ ಇಂದು ಅಂತಹ ಉತ್ತೇಜನ ಸಿಕ್ಕಿದೆ' ಎಂದರು.
ಊಹಾಪೋಹಗಳಿಗೆ ತೆರೆ: ಖ್ಯಾತ ನಟ ಮಿಥುನ್ ಚಕ್ರವರ್ತಿ ಬಿಜೆಪಿ ಸೇರ್ಪಡೆ
ಈ ಬ್ರಿಗೇಡ್ ಪೆರೇಡ್ ಮೈದಾನವು ಅನೇಕ ಮಹಾನ್ ನಾಯಕರಿಗೆ ಸಾಕ್ಷಿಯಾಗಿದೆ ಮತ್ತು ಪಶ್ಚಿಮ ಬಂಗಾಳದ ಪ್ರಗತಿಯನ್ನು ಹಾಳಗೆಡವಿದ ಜನರನ್ನೂ ಕಂಡಿದೆ. ಬಂಗಾಳದ ಜನರು ತಮ್ಮ ಬದಲಾವಣೆಯ ಭರವಸೆಗಳನ್ನು ಎಂದಿಗೂ ಕೈಬಿಟ್ಟಿಲ್ಲ ಎಂದು ಹೇಳಿದರು.
ದೀದಿ ಮೇಲಿನ ನಂಬಿಕೆ ನುಚ್ಚುನೂರು
ಈ ಮೈದಾನದ ಒಂದು ಬದಿ ಸ್ವಾಮಿ ವಿವೇಕಾನಂದ ಜನ್ಮ ಸ್ಥಳವಿದೆ. ಇನ್ನೊಂದೆಡೆ ನೇತಾಜಿ ಅವರ ಜನ್ಮಭೂಮಿಯಿದೆ. ಒಂದು ಭಾಗದಲ್ಲಿ ಮಹರ್ಷಿ ಶ್ರೀ ಅರಬಿಂದೋ ಅವರ ಹುಟ್ಟಿನ ಜಾಗವಿದೆ. ಮತ್ತೊಂದು ಕಡೆ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜನ್ಮಸ್ಥಳವಿದೆ.
ಬದಲಾವಣೆಗಾಗಿ ಮಮತಾ ದೀದಿ ಅವರನ್ನು ಜನರು ನಂಬಿದ್ದರು. ಆದರೆ ದೀದಿ ಮತ್ತು ಅವರ ತಂಡ ಈ ನಂಬಿಕೆಯನ್ನು ನುಚ್ಚುನೂರು ಮಾಡಿತು. ಈ ಜನರು ಬಂಗಾಳದ ಜನರ ನಂಬಿಕೆಯನ್ನು ಒಡೆದುಹಾಕಿದರು. ಈ ಜನರು ಬಂಗಾಳವನ್ನು ಕೆಡಿಸಿದರು. ಇಲ್ಲಿನ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಚಿತ್ರಹಿಂಸೆ ನೀಡಲಾಯಿತು. ಈ ಬಾರಿಯ ಚುನಾವಣೆಯಲ್ಲಿ ಒಂದು ಕಡೆ ಟಿಎಂಸಿ ಹಾಗೂ ಇನ್ನೊಂದು ಕಡೆ ಎಡ-ಕಾಂಗ್ರೆಸ್ ಪಕ್ಷಗಳಿವೆ. ಅವರದು ಬಂಗಾಳ ವಿರೋಧಿ ನಡೆ. ಬಂಗಾಳದ ಜನರು ಅವರ ವಿರುದ್ಧ ಎದ್ದು ನಿಂತಿದ್ದಾರೆ ಎಂದರು.
ನೈಜ ಬದಲಾವಣೆ ನೀಡುತ್ತೇವೆ
ಈ ಜಾಗದ ಯುವಜನರಿಗಾಗಿ, ರೈತರು, ಉದ್ಯಮಶೀಲರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಅಭಿವೃದ್ಧಿಗಾಗಿ ದಿನದ 24 ಗಂಟೆಯೂ ನಾವು ಕೆಲಸ ಮಾಡುತ್ತೇವೆ ಎಂದು ನಾನು ಭರವಸೆ ನೀಡುತ್ತೇನೆ. ಬಂಗಾಳದಲ್ಲಿ 'ಅಸೋಲ್ ಪೊರಿಬರ್ತನ್' (ನೈಜ ಬದಲಾವಣೆ) ಭರವಸೆ ನೀಡಲು ನಾವು ಇಲ್ಲಿಗೆ ಬಂದಿದ್ದೇವೆ. ಬಂಗಾಳದ ಅಭಿವೃದ್ಧಿಗೆ ಮುಂದಿನ 25 ವರ್ಷಗಳು ಬಹಳ ಮುಖ್ಯವಾಗಿವೆ. 2047ರಲ್ಲಿ ಭಾರತವು ತನ್ನ ಸ್ವಾತಂತ್ರ್ಯದ 100ನೇ ವರ್ಷ ಆಚರಿಸುತ್ತದೆ. ಬಂಗಾಳವು ಈ ದೇಶವನ್ನು ಮತ್ತೊಮ್ಮೆ ಮುನ್ನೆಡೆಸಲಿದೆ ಎಂದು ಹೇಳಿದರು.
ಪಶ್ಚಿಮ ಬಂಗಾಳ ಕಾಶ್ಮೀರವಾದರೆ ತಪ್ಪೇನು ಹೇಳಿ; ಸುವೇಂದುಗೆ ಒಮರ್ ತಿರುಗೇಟು
ಅಭಿವೃದ್ಧಿ, ನಂಬಿಕೆ ಆಡಳಿತ ಮಂತ್ರ
ಪ್ರತಿಯೊಬ್ಬರ ಬೆಂಬಲ, ಪ್ರತಿಯೊಬ್ಬರ ಅಭಿವೃದ್ಧಿ ಮತ್ತು ಪ್ರತಿಯೊಬ್ಬರ ನಂಬಿಕೆ ಆಡಳಿತದ ಮಂತ್ರವಾಗಿರುವ ಸರ್ಕಾರದ ಭರವಸೆ ನೀಡುತ್ತೇವೆ. ಇಲ್ಲಿ ಪ್ರತಿಯೊಬ್ಬರೂ ಮೇಲ್ದರ್ಜೆಗೇರುತ್ತಾರೆ. ಯಾರ ಓಲೈಕೆಯೂ ಇರುವುದಿಲ್ಲ. ಹಸ್ತಕ್ಷೇಪ ಮಾಡುವವರು ಮತ್ತು ಒಳನುಸುಳುವವರನ್ನು ತಡೆಯಲಾಗುತ್ತದೆ. ಕೋಲ್ಕತಾ ಸಂಭ್ರಮದ ನಗರ. ಕೋಲ್ಕತಾಕ್ಕೆ ಶ್ರೀಮಂತ ಇತಿಹಾಸ ಹಾಗೂ ಉಜ್ವಲ ಭವಿಷ್ಯವಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ
ಅವರ ಕಮಿಷನ್ ಕಾರಣದಿಂದಾಗಿ ಕೋಲ್ಕತಾ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಕೆಲಸ ನಿಂತುಹೋಗಿದೆ. ಅಂತಹ ಎಲ್ಲ ಕೆಲಸಗಳನ್ನೂ ಬಿಜೆಪಿ ಸರ್ಕಾರ ವೇಗವಾಗಿ ಮಾಡಲಿದೆ. ಸ್ಮಾರ್ಟ್ ಸಿಟಿ ಯೋಜನೆಯು ಬಿಜೆಪಿ ಸರ್ಕಾರಕ್ಕೆ ಹೊಸ ಶಕ್ತಿ ನೀಡಲಿದೆ. ಬಂಗಾಳದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಗಿ ಜಾರಿ ಮಾಡುತ್ತೇವೆ. ಎಂಜಿನಿಯರಿಂಗ್, ವೈದ್ಯಕೀಯ, ತಂತ್ರಜ್ಞಾನ ಮುಂತಾದವುಗಳನ್ನು ಬಾಂಗ್ಲಾ ಭಾಷೆಯಲ್ಲಿಯೇ ಕಲಿಯಬಹುದು ಎಂದು ತಿಳಿಸಿದರು.
ಸೋದರಳಿಯನಿಗೆ ಅತ್ತೆಯಷ್ಟೇ ಆದಿರಿ
ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ, 'ಬಂಗಾಳದ ಜನರು ನಿಮ್ಮನ್ನು 'ದೀದಿ' ಎಂದು ಆಯ್ಕೆ ಮಾಡಿದ್ದರು. ಆದರೆ ನೀವು ಏಕೆ ನಿಮ್ಮ ಸೋದರಳಿಯನ ಅತ್ತೆಯಾಗಿ ಮಾತ್ರವೇ ಉಳಿದಿರಿ? ಬಂಗಾಳದ ಜನರು ನಿಮಗೆ ಈ ಪ್ರಶ್ನೆಯನ್ನು ಮಾತ್ರ ಕೇಳುತ್ತಿದ್ದಾರೆ. ನಿಮಗೆ ಮಾ, ಮಾನುಷ್, ಮಾತಿ ಸ್ಥಿತಿಗಳು ಅರಿವಿರಬೇಕು. ಬೀದಿಗಳಲ್ಲಿ ಮತ್ತು ಮನೆಗಳಲ್ಲಿ ತಾಯಂದಿರ ಮೇಲೆ ಹಲ್ಲೆ ನಡೆಯುತ್ತಿದೆ. ಇತ್ತೀಚೆಗೆ 80 ವರ್ಷದ ತಾಯಿಯ ಮೇಲಿನ ಕ್ರೌರ್ಯದ ದಾಳಿಯು ಇಡೀ ದೇಶಕ್ಕೆ ಅವರ ಕ್ರೂರ ಮುಖವನ್ನು ಪರಿಚಯಿಸಿದೆ' ಎಂದು ಆರೋಪಿಸಿದರು.
ಬೀಳದೆ ಇರುವುದು ಒಳ್ಳೆ ಸಂಗತಿ
'ನೀವು ಕೆಲವು ದಿನಗಳ ಹಿಂದೆ ಸ್ಕೂಟಿಯಲ್ಲಿ ಸಾಗುವಾಗ ಪ್ರತಿಯೊಬ್ಬರೂ ನೀವು ಸುರಕ್ಷಿತವಾಗಿರುವಂತೆ ಬೇಡಿಕೊಳ್ಳುತ್ತಿದ್ದರು. ನೀವು ಬೀಳದೆ ಇರುವುದು ಒಳ್ಳೆಯ ಸಂಗತಿ. ಇಲ್ಲದಿದ್ದರೆ ಇಡೀ ರಾಜ್ಯವನ್ನು ಸ್ಕೂಟಿ ನಿಮ್ಮ ಶತ್ರು ಎಂದು ನೋಡುವಂತೆ ಮಾಡುತ್ತಿದ್ದಿರಿ. ನೀವು ನಿಮ್ಮ ಸ್ಕೂಟಿಯನ್ನು ಭವಾನಿಪುರದ ಬದಲು ನಂದಿಗ್ರಾಮದತ್ತ ತಿರುಗಿಸಿದ್ದೀರಿ. ದೀದಿ, ನಾವು ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತೇವೆ. ಯಾರಿಗೂ ನೋವಾಗುವುದನ್ನು ನಾವು ಬಯಸುವುದಿಲ್ಲ. ಆದರೆ ನೀವು ನಿಮ್ಮ ಸ್ಕೂಟಿಯನ್ನು ನಂದಿಗ್ರಾಮದಲ್ಲಿಯೇ ಪುಡಿಮಾಡಲು ಬಯಸಿದರೆ ನಾವೇನು ಮಾಡುವುದು?' ಎಂದು ಲೇವಡಿ ಮಾಡಿದರು.
ಸ್ನೇಹಿತರಿಗಾಗಿ ಮಾತ್ರ ಕೆಲಸ
'ನಾನು ಸ್ನೇಹಿತರಿಗಾಗಿ ಕೆಲಸ ಮಾಡುತ್ತೇನೆ ಎಂದು ನನ್ನ ಎದುರಾಳಿಗಳೂ ಈ ದಿನಗಳಲ್ಲಿ ಹೇಳುತ್ತಿದ್ದಾರೆ. ಬಾಲ್ಯದಲ್ಲಿ ನಾವು ಎಲ್ಲಿ ಬೆಳೆದಿದ್ದೆವು, ಎಲ್ಲಿ ಆಡಿದ್ದೆವು, ನಮ್ಮ ಜತೆ ಓದಿದ ಜನರು, ಎನ್ನುವುದು ನಮಗೆಲ್ಲ ಗೊತ್ತು. ಅವರೇ ಜೀವನದ ಸ್ನೇಹಿತರು. ನಾನೂ ಬಡತನದಲ್ಲಿಯೆ ಬೆಳೆದವನು. ದೇಶದ ಯಾವುದೇ ಮೂಲೆಯಲ್ಲಿ ಇದ್ದರೂ ನನ್ನ ಸ್ನೇಹಿತರ ದುಃಖ ಮತ್ತು ನೋವು ನನಗೆ ತಿಳಿದಿದೆ. ಹೀಗಾಗಿ ನಾನು ಸ್ನೇಹಿತರಿಗಾಗಿ ಕೆಲಸ ಮಾಡುತ್ತೇನೆ ಮತ್ತು ಸ್ನೇಹಿತರಿಗಾಗಿ ಮಾತ್ರವೇ ಕೆಲಸ ಮಾಡುತ್ತೇನೆ' ಎಂದು ಅಂಬಾನಿ ಮತ್ತು ಅದಾನಿಗಳ ಪರ ಸರ್ಕಾರವಿದೆ ಎಂಬುದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
'ಭ್ರಷ್ಟಾಚಾರ ಒಲಿಂಪಿಕ್ಸ್' ಕ್ರೀಡೆ
'ನೀವು ಜನರ ಜೀವನದೊಂದಿಗೆ, ಅವರ ಕಠಿಣ ಶ್ರಮದ ದುಡಿಮೆಯೊಂದಿಗೆ ಆಟವಾಡಿದ್ದೀರಿ. ನಿಮ್ಮ ಟೀ ಗಾರ್ಡನ್ಗಳನ್ನು ಮುಚ್ಚಿಸಿದ್ದೀರಿ, ರಾಜ್ಯವನ್ನು ಸಾಲದಲ್ಲಿ ಮುಳುಗಿಸಿದ್ದೀರಿ. ಯುವಜನರ ಉದ್ಯೊಗ, ಸಂಬಳ ಕಿತ್ತುಕೊಂಡಿರಿ. ಈಗ ಇದು ಇನ್ನು ಕೆಲಸ ಮಾಡಲಾರದು. ಈ ಆಟ ಇನ್ನು ನಡೆಯುವುದಿಲ್ಲ. ನೀವು ಅನೇಕ ಹಗರಣಗಳನ್ನು ಮಾಡಿದ್ದಿರಿ. ಅದರಲ್ಲಿ 'ಭ್ರಷ್ಟಾಚಾರ ಒಲಿಂಪಿಕ್ಸ್' ಕ್ರೀಡೆ ಆಯೋಜಿಸಬಹುದು' ಎಂದರು.
ಆ ದೀದಿ ಇವರಲ್ಲ
'ನಾನು ಬಹಳ ವರ್ಷಗಳಿಂದ ದೀದಿಯನ್ನು ನೋಡಿದ್ದೇನೆ. ಎಡಪಕ್ಷಗಳ ವಿರುದ್ಧ ಧ್ವನಿ ಎತ್ತಿದ ಅದೇ ವ್ಯಕ್ತಿ ಇವರಲ್ಲ. ಅವರು ಈಗ ಬೇರೆ ಯಾರದ್ದೋ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಮತ್ತು ನಿಯಂತ್ರಿಸಲ್ಪಡುತ್ತಿದ್ದಾರೆ. ನೀವು ಅಭಿವೃದ್ಧಿಯ ಬದಲು ಬಂಗಾಳವನ್ನು ಪ್ರತ್ಯೇಕತೆಯತ್ತ ತಳ್ಳಿದ್ದೀರಿ. ಹೀಗಾಗಿ ಇಲ್ಲಿ ಕಮಲ ಅರಳುತ್ತಿದೆ. ನೀವು ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸಿದ್ದೀರಿ. ಹೀಗಾಗಿಯೇ ಕಮಲ ಅರಳುತ್ತಿದೆ' ಎಂದರು ಹೇಳಿದರು.