ಟಿಎಂಸಿ, ಬಿಜೆಪಿ ಅಬ್ಬರ: ಹೇಳ ಹೆಸರಿಲ್ಲದಂತೆ ಕಮೂನಿಸ್ಟ್, ಕಾಂಗ್ರೆಸ್ ನಿರ್ನಾಮ
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಜಿದ್ದಾಜಿದ್ದಿನ ಕದನ ಅಂತೂ ಮುಕ್ತಾಯಗೊಂಡಿದೆ. ಕಳೆದ ಬಾರಿಯ ಅಸೆಂಬ್ಲಿ ಚುನಾವಣೆಗಿಂತಲೂ ಹೆಚ್ಚಿನ ಸ್ಥಾನ ಗೆದ್ದು ಟಿಎಂಸಿ ಬೀಗಿದೆ. ಆದರೆ, ಸಿಎಂ ಮಮತಾ ಬ್ಯಾನರ್ಜಿ ನಂದಿಗ್ರಾಮ ಕ್ಷೇತ್ರದಿಂದ ಪರಾಭವಗೊಂಡಿದ್ದಾರೆ.
ಮತ ಎಣಿಕೆಯ ಆರಂಭದ ಹಂತದಲ್ಲಿ ಸಮಬಲವಾಗಿ ಸಾಗುತ್ತಿದ್ದ ಟಿಎಂಸಿ ಮತ್ತು ಬಿಜೆಪಿ ನಡುವಿನ ಅಂತರ, ಮುಂದುವರಿಯುತ್ತಾ ಟಿಎಂಸಿ ಪಕ್ಷ ಬಿಜೆಪಿ ವಿರುದ್ದ ಉತ್ತಮ ಲೀಡ್ ಅನ್ನು ಪಡೆದುಕೊಂಡು ಮುನ್ನಡೆಯುತ್ತಾ ಸಾಗಿತು.
ಪಶ್ಚಿಮ ಬಂಗಾಳ: ಬಿಜೆಪಿ ಕಚೇರಿಗೆ ಬೆಂಕಿ
ಕಳೆದ ಬಾರಿ ಕೇವಲ ಮೂರು ಸ್ಥಾನದಲ್ಲಿ ಗೆದ್ದಿದ್ದ ಬಿಜೆಪಿ, ಐದೇ ವರ್ಷದ ಅವಧಿಯಲ್ಲಿ ಸತತವಾಗಿ ಎರಡು ಅವಧಿಯಲ್ಲಿ ಸರಕಾರ ನಡೆಸುತ್ತಿರುವ ಟಿಎಂಸಿಗೆ ಊಹಿಸಲೂ ಅಸಾಧ್ಯವಾದ ಸ್ಪರ್ಧೆಯನ್ನಂತೂ ನೀಡಿತು.
ಬಂಗಾಳ ಇಂದು ದೇಶವನ್ನು ರಕ್ಷಿಸಿದೆ: ಮಮತಾ ಬ್ಯಾನರ್ಜಿ
ಆದರೆ, ನಮ್ಮದೇ ಸರಕಾರ ಎಂದು ಬೀಗುತ್ತಿದ್ದ ಬಿಜೆಪಿ ಮುಖಂಡರಿಗೆ ಪಶ್ಚಿಮ ಬಂಗಾಳದ ಮತದಾರ ಮೂಗುದಾರ ಹಾಕಿದ್ದಾನೆ. ಇನ್ನೊಂದು ಕಡೆ, ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಈ ಮಟ್ಟಿಗೆ ಬಂಗಾಳದ ನೆಲದಲ್ಲಿ ನಿರ್ನಾಮವಾಗುತ್ತದೆ ಎನ್ನುವುದನ್ನು ಯಾರೂ ನಿರೀಕ್ಷಿಸಿರಲಿಕ್ಕಿಲ್ಲ.
2016ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು
ಕಳೆದ ಅಂದರೆ 2016ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಕಾಂಗ್ರೆಸ್ 44, ಕಮ್ಯೂನಿಸ್ಟ್ ಪಕ್ಷ 26 ಸ್ಥಾನವನ್ನು ಗೆದ್ದಿದ್ದವು. ಈ ಬಾರಿ, ಬಿಜೆಪಿಯ ಅಬ್ಬರ ಜೋರಾಗಿದ್ದರಿಂದ, ಇವೆರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಚುನಾವಣೆಗೆ ಇಳಿದ್ದಿದ್ದವು. ಕಳೆದ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಟ್ಟು ಗಳಿಸಿದ ಸ್ಥಾನ 70.
ಈ ಬಾರಿಯ ಕಾಂಗ್ರೆಸ್ 91 ಕ್ಷೇತ್ರ, ಸಿಪಿಐ(ಎಂ) 137 ಕ್ಷೇತ್ರದಲ್ಲಿ ಸ್ಪರ್ಧೆ
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 91 ಕ್ಷೇತ್ರ, ಸಿಪಿಐ(ಎಂ) 137 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದವು. ಉಳಿದ ಸೀಟನ್ನು ಸಿಪಿಐ, ಫಾರ್ವರ್ಡ್ ಬ್ಲಾಕ್ ಮುಂತಾದ ಎಡಪಕ್ಷಗಳು ಹಂಚಿಕೊಂಡು ಕಣಕ್ಕೆ ಇಳಿದಿದ್ದವು. ಐದನೇ ಹಂತದವರೆಗೂ ಚುನಾವಣಾ ಪ್ರಚಾರವನ್ನು ನಡೆಸಿದ್ದ ರಾಹುಲ್ ಗಾಂಧಿ ನಂತರ ಕೊರೊನಾ ಕಾರಣದಿಂದ ಬಹಿರಂಗ ಪ್ರಚಾರ ನಡೆಸಿರಲಿಲ್ಲ. ಆದರೆ, ಬಂಗಾಳದ ಮತದಾರ ಕಾಂಗ್ರೆಸ್ ಮತ್ತು ಎಡಪಕ್ಷಗಳಿಗೆ ತೋರಿಸಿದ ಸೋಲಿನ ರುಚಿ ನೆನಪಿನಲ್ಲಿ ಇಟ್ಟುಕೊಳ್ಳುವಂತದ್ದು.
ಬಿಜೆಪಿ ಮತ್ತು ಟಿಎಂಸಿ ಅಬ್ಬರದ ನಡುವೆ, ಮೂರನೇ, ನಾಲ್ಕನೇ ಸ್ಥಾನಕ್ಕೆ ತೃಪ್ತಿ
ಎಡಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಕಣಕ್ಕೆ ಇಳಿದಿದ್ದರೂ ಕಾಂಗ್ರೆಸ್ ಮತ್ತು ಇತರ ಪಾರ್ಟಿಗಳು ಗೆಲ್ಲಲು ಶಕ್ತವಾಗಿದ್ದು ಬರೀ ಶೂನ್ಯ..ಶೂನ್ಯ.. ಅತ್ಯಂತ ಹೀನಾಯವಾಗಿ ಪರಾಭವಗೊಂಡಿರುವ ಈ ಪಕ್ಷಗಳು ಬಿಜೆಪಿ ಮತ್ತು ಟಿಎಂಸಿ ಅಬ್ಬರದ ನಡುವೆ, ಮೂರನೇ, ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.
ದಶಕಗಳ ಕಾಲ ಆಳಿದ ಕಮ್ಯೂನಿಸ್ಟರಿಗೆ ಇದೆಂತಹಾ ಅವಮಾನ
ಜ್ಯೋತಿಬಸು ಇದಾದ ನಂತರ ಬುದ್ದದೇವ ಭಟ್ಟಾಚಾರ್ಯ ನೇತೃತ್ವದ ಸಿಪಿಐ(ಎಂ) ಸುಮಾರು ಮೂರು ದಶಕಕ್ಕೂ ಹೆಚ್ಚು ಕಾಲ ಪಶ್ಚಿಮ ಬಂಗಾಳದಲ್ಲಿ ರಾಜ್ಯಭಾರ ನಡೆಸಿದ್ದವು. ಆದರೆ, ಈ ಬಾರಿಯ ಜನಾದೇಶ ಎಡಪಕ್ಷಗಳು ಮತ್ತು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಸಿಗೆ ಕಾಡುವುದಂತೂ ಹೌದು. ಇತ್ತ, ಬಿಜೆಪಿ ಕಳೆದ ಬಾರಿಯ ಮೂರು ಸ್ಥಾನದಿಂದ 71 ಸ್ಥಾನವನ್ನು ಗೆಲ್ಲಲು ಶಕ್ತವಾಗಿದೆ.
Recommended Video