ಬಂಗಾಳ ಇಂದು ದೇಶವನ್ನು ರಕ್ಷಿಸಿದೆ: ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷವು ಭಾರಿ ಜಯಭೇರಿ ಬಾರಿಸಿದ ಬೆನ್ನಲ್ಲೆ ಮಾಧ್ಯಮದೊಟ್ಟಿಗೆ ಮಾತನಾಡಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ 'ಬಂಗಾಳ ಇಂದು ದೇಶವನ್ನು ರಕ್ಷಿಸಿದೆ' ಎಂದಿದ್ದಾರೆ.
Recommended Video
'ಅಮಿತ್ ಶಾ ಡಬಲ್ ಎಂಜಿನ್ ಸರ್ಕಾರದ ಬಗ್ಗೆ ಮಾತನಾಡಿದ್ದರು, ಆಗ ನಾನು ಹೇಳಿದ್ದೆ ನಾವು ಡಬಲ್ ಸೆಂಚೂರಿ ಹೊಡೆಯುತ್ತೇವೆಂದು ಹಾಗೆಯೇ ಇನ್ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೇವೆ' ಎಂದರು ದೀದಿ.
'ಇದು ಬಂಗಾಳದ ಗೆಲುವು, ಬಂಗಾಳದ ಜನರ ಗೆಲುವು, ಬಂಗಾಳದ ಜನರು ಪ್ರಜಾಪ್ರಭುತ್ವದ ಮೇಲೆ ವಿಶ್ವಾಸವಿಟ್ಟಿದ್ದಾರೆ ಎಂಬುದಕ್ಕೆ ಈ ಗೆಲುವು ಉದಾಹರಣೆ. ಗೆಲುವಿಗೆ ಶ್ರಮಿಸಿದ ಬಂಗಾಳದ ನನ್ನ ಸಹೋದರ, ಸಹೋದರಿಯರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ' ಎಂದಿದ್ದಾರೆ ಮಮತಾ.
'ನಾವು ಈ ಚುನಾವಣೆಯಲ್ಲಿ ಕೇಂದ್ರ ಸರ್ಕಾರ, ಚುನಾವಣಾ ಆಯೋಗ, ಜಾರಿ ನಿರ್ದೇಶನಲಾಯ (ಇಡಿ), ಸಿಬಿಐ , ಆದಾಯ ತೆರಿಗೆ ಇಲಾಖೆ ಹಾಗೂ ಬಿಜೆಪಿ ವಿರುದ್ಧ ಹೋರಾಟ ಮಾಡಿ ಗೆದ್ದಿದ್ದೇವೆ. ಚುನಾವಣಾ ಆಯೋಗವಂತೂ ಬಿಜೆಪಿಯ ವಕ್ತಾರರಂತೆ ವರ್ತಿಸಿತು' ಎಂದು ಆಯೋಗದ ಮೇಲೆ ಹರಿಹಾಯ್ದಿದ್ದಾರೆ ದೀದಿ.
'ಕೋವಿಡ್ ನಿರ್ವಹಣೆ ನನ್ನ ಮೊದಲ ಆದ್ಯತೆ ಆಗಲಿದೆ. ಬಂಗಾಳದ ಜನರ ಜೀವ ಉಳಿಸುವ ಕಾರ್ಯವನ್ನು ಮುಂದುವರೆಸಲಿದ್ದೇನೆ. ಬಂಗಾಳದ ಎಲ್ಲ ಜನರಿಗೂ ಲಸಿಕೆ ವ್ಯವಸ್ಥೆ ಮಾಡಬೇಕಿದೆ. ನಾನು ಕೊಟ್ಟ ಭರವಸೆಗಳನ್ನೆಲ್ಲಾ ಈಡೇರಿಸುತ್ತೇನೆ. ಬಂಗಾಳದ ಜನರಿಗೆ ಉಚಿತವಾಗಿ ಲಸಿಕೆ ನೀಡಬೇಕು ಎಂದು ಕೇಂದ್ರದಲ್ಲಿ ನಾನು ಮನವಿ ಮಾಡುತ್ತೇನೆ' ಎಂದಿದ್ದಾರೆ ಮಮತಾ ಬ್ಯಾನರ್ಜಿ.
'ಯಾರೂ ಸಹ ಗೆಲುವಿನ ಸಂಭ್ರಮಾಚರಣೆ ಮಾಡಬೇಡಿ. ಯಾವುದೇ ಮೆರವಣಿಗೆಗಳನ್ನು ಮಾಡುವುದು ಬೇಡ. ಮನೆಗಳಲ್ಲಿಯೇ ಸಂಭ್ರಮಾಚರಣೆ ಮಾಡಿ. ಕೋವಿಡ್ ಪರಿಸ್ಥಿತಿ ಮುಗಿದ ಬಳಿಕ ನಾವು ರ್ಯಾಲಿ ಮಾಡೋಣ' ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು ಮಮತಾ ಬ್ಯಾನರ್ಜಿ.
'ನಂದಿಗ್ರಾಮದ ಫಲಿತಾಂಶವನ್ನು ಒಪ್ಪಿಕೊಳ್ಳುತ್ತೇನೆ. ಮತ ಎಣಿಕೆ ಮುಗಿದು ಮೂರು ಗಂಟೆ ನಂತರ ನೀವು ಸೋತಿದ್ದೀರ ಎಂದು ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ. ಇಲ್ಲಿ ಏನೋ ವಂಚನೆ ಆಗಿದೆ. ನಾವು ಚುನಾವಣಾ ಆಯೋಗದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುತ್ತೇವೆ' ಎಂದರು. ಮಮತಾ ಬ್ಯಾನರ್ಜಿ ಗೆದ್ದಿದ್ದಾರೆ ಎಂದು ಘೋಷಣೆಯಾದ ಬಳಿಕ ಕೆಲವು ಗಂಟೆಗಳ ನಂತರ ಮಮತಾ ಸೋತಿದ್ದಾರೆ ಎಂದು ಚುನಾವಣಾ ಅಧಿಕಾರಿ ಘೋಷಿಸಿದರು. ಇದು ಗೊಂದಲಕ್ಕೆ ಕಾರಣವಾಗಿದೆ.
'ನಾನು ನನ್ನ ಉಸಿರು ಇರುವವರೆಗೂ ಬಂಗಾಳದ ಜನರ ಸೇವೆ ಮಾಡುವುದನ್ನು, ಬಂಗಾಳದ ಜನರಿಗಾಗಿ ಹೋರಾಡುವುದನ್ನು ಬಿಡುವುದಿಲ್ಲ. ಬಂಗಾಳವು ಇಂದು ರಾಷ್ಟ್ರವನ್ನು ರಕ್ಷಿಸಿದೆ ಅದಕ್ಕಾಗಿ ನನಗೆ ಬಂಗಾಳದ ಜನರ ಬಗ್ಗೆ ಹೆಮ್ಮೆ ಇದೆ' ಎಂದಿದ್ದಾರೆ ಮಮತಾ.