ಪಶ್ಚಿಮ ಬಂಗಾಳದ ರಾಜಕೀಯ ಲೆಕ್ಕಾಚಾರ: ಟಿಎಂಸಿ ತೊರೆದ ಸಚಿವ ರಾಜಿಬ್ ಬ್ಯಾನರ್ಜಿ
ಕೋಲ್ಕತ್ತಾ, ಜನವರಿ.22: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಮೇಲಿಂದ ಮೇಲೆ ಆಘಾತವಾಗುತ್ತಿದೆ. ಶುಕ್ರವಾರ ಟಿಎಂಸಿಯ ಮತ್ತೊಬ್ಬ ಸಚಿವ ರಾಜಿಬ್ ಬ್ಯಾನರ್ಜಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣಾ ಹೊಸ್ತಿಲಿನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷದ ಒಬ್ಬಬ್ಬ ಶಾಸಕರು ಮತ್ತು ಸಚಿವರು ಹೊರ ನಡೆಯುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪಶ್ಚಿಮ ಬಂಗಾಳ ಭೇಟಿ ಸಂದರ್ಭದಲ್ಲಿ ರಾಜಿಬ್ ಬ್ಯಾನರ್ಜಿಯವರು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಹೆಚ್ಚಿವೆ.
ಪಶ್ಚಿಮ ಬಂಗಾಳ; "ಗೋಲಿಮಾರೋ" ಘೋಷಣೆ ಕೂಗಿದ ಮೂವರು ಬಿಜೆಪಿ ಕಾರ್ಯಕರ್ತರ ಬಂಧನ
ಪಶ್ಚಿಮ ಬಂಗಾಳದಲ್ಲಿ ಇದೇ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಟಿಎಂಸಿಗೆ ನುಂಗಲಾಗದ ತುತ್ತಾಗಿದೆ. ಕಳೆದ ಮಂಗಳವಾರವಷ್ಟೇ ಬಿಜೆಪಿಗೆ ಹೋಗವವರ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದರು. "ಯಾರು ಬಿಜೆಪಿಗೆ ಹೋಗಲು ಬಯಸುತ್ತೀರೋ ಎಲ್ಲರೂ ಹೋಗಬಹುದು. ಆದರೆ, ನಾನು ಮಾತ್ರ ಯಾವುದೇ ಕಾರಣಕ್ಕೂ ಕೇಸರಿ ಪಕ್ಷದ ಎದುರಿಗೆ ತಲೆ ತಗ್ಗಿಸಿ ನಿಲ್ಲುವುದಿಲ್ಲ" ಎಂದು ಕಿಡಿ ಕಾರಿದ್ದಾರೆ.
"ಟಿಎಂಸಿಯ 41 ಶಾಸಕರು ಬಿಜೆಪಿಗೆ":
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಆಘಾತ ನೀಡುವಂತಾ ಸುದ್ದಿಯೊಂದನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ಹೇಳಿದ್ದರು. "ಮಮತಾ ಬ್ಯಾನರ್ಜಿ ಸರ್ಕಾರವನ್ನು ಬೆಂಬಲಿಸುತ್ತಿರುವ 41 ಟಿಎಂಸಿ ಶಾಸಕರು ಇದೀಗ ಬಿಜೆಪಿ ಸೇರುವುದಕ್ಕೆ ಇಚ್ಛಿಸುತ್ತಿದ್ದಾರೆ ಎಂದು ಹೇಳಿದ್ದರು. ಅಲ್ಲದೇ ಈ 41 ಶಾಸಕರ ಪಟ್ಟಿಯಲ್ಲಿ ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು, ಯಾರನ್ನು ಸೇರಿಸಿಕೊಳ್ಳಬಾರದು ಎನ್ನುವ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ. ತದನಂತರದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ" ಎಂದು ಹೇಳಿದ್ದರು.