ಪಶ್ಚಿಮ ಬಂಗಾಳದಲ್ಲಿ ವಲಸೆ ನಾಯಕರಿಗೆ ಮಣೆ ಹಾಕಿದ ಬಿಜೆಪಿ!?
ಕೋಲ್ಕತ್ತಾ, ಮಾರ್ಚ್ 21: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾಡಿರುವುದೇ ತಲೆನೋವು ತಂದಿದೆ. ಬೇರೆ ಪಕ್ಷದಿಂದ ಬಂದ ನಾಯಕರಿಗೆ ಮಣೆ ಹಾಕುತ್ತಿರುವುದು ಮೂಲ ಬಿಜೆಪಿಗರನ್ನು ಕೆರಳಿಸಿದೆ. ಕಳೆದ 2 ವರ್ಷಗಳಲ್ಲಿ ನಡೆದ ಪಕ್ಷಾಂತರ ಅಂಕಿ-ಅಂಶಗಳು ಅಚ್ಚರಿ ಮೂಡಿಸುವಂತಿದೆ.
ಕಳೆದ 2019ರ ಲೋಕಸಭಾ ಚುನಾವಣೆಯ ನಂತರ ಪಶ್ಚಿಮ ಬಂಗಾಳದಲ್ಲಿ ಬಹುಪಾಲು ನಾಯಕರು ಬಿಜೆಪಿ ಕಡೆ ಮುಖ ಮಾಡಿದ್ದಾರೆ. ಎರಡು ವರ್ಷಕ್ಕಿಂತ ಕಡಿಮೆ ಅವಧಿಯಲ್ಲೇ 46ಕ್ಕೂ ಹೆಚ್ಚು ನಾಯಕರು ಕೇಸರಿ ಪಡೆಗೆ ಸೇರ್ಪಡೆ ಆಗಿದ್ದಾರೆ.
'ಅವರಿಗೇನು ತಲೆ ಸರಿಯಿಲ್ಲವಾ?': ಬಿಜೆಪಿ ಟಿಕೆಟ್ ನಿರಾಕರಿಸಿದ ಅಭ್ಯರ್ಥಿ!
ಬಿಜೆಪಿಯಿಂದ ಈ 46 ನಾಯಕರಿಗೂ ವಿಧಾನಸಭಾ ಚುನಾವಣೆಗೆ ಟಿಕೆಟ್ ಘೋಷಿಸಲಾಗಿದೆ. ಈ ಪೈಕಿ 34 ಅಭ್ಯರ್ಥಿಗಳು ತೃಣಮೂಲ ಕಾಂಗ್ರೆಸ್ ಪಕ್ಷ, ಸಿಪಿಎಂನಿಂದ 6 ಅಭ್ಯರ್ಥಿಗಳು, ಕಾಂಗ್ರೆಸ್ ನಿಂದ 4 ಅಭ್ಯರ್ಥಿಗಳು, ಗೋರ್ಖಾ ಜನಮುಕ್ತಿ ಮೋರ್ಚಾದಿಂದ ಪಕ್ಷಾಂತರಗೊಂಡ ಒಬ್ಬ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಬಿಜೆಪಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಂತರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ಅಭ್ಯರ್ಥಿ ಪಟ್ಟಿಯಿಂದ ಬಿಜೆಪಿಯಲ್ಲಿ ಬಂಡಾಯದ ಕಿಡಿ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ಬಿಡುಗಡೆಗೊಳಿಸಿರುವ 282 ಅಭ್ಯರ್ಥಿಗಳ ಪಟ್ಟಿಯು ಪಕ್ಷದಲ್ಲಿ ಬಂಡಾಯ ಕಿಡಿ ಹೊತ್ತಿಸಿದೆ. ವಲಸೆ ಬಂದ ನಾಯಕರಿಗೆ ಟಿಕೆಟ್ ಘೋಷಿಸಿರುವುದಕ್ಕೆ ರಾಜ್ಯದ ಪ್ರತಿ ಜಿಲ್ಲಾ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಪಕ್ಷಕ್ಕೆ ಸೇರ್ಪಡೆಯಾದ 46 ಅಭ್ಯರ್ಥಿಗಳಲ್ಲಿ 36 ಮಂದಿ ಕಳೆದ ಆರು ತಿಂಗಳಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇಂಥ ನಾಯಕರಿಗೆ ಟಿಕೆಟ್ ನೀಡಿರುವುದು ಪಕ್ಷದ ಕಾರ್ಯಕರ್ತರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ.
ಬಂಗಾಳದ 45 ಕ್ಷೇತ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ಕೆಂಡ
ಪಶ್ಚಿಮ ಬಂಗಾಳದ 20 ವಿಧಾನಸಭಾ ಕ್ಷೇತ್ರಗಳಲ್ಲಿ ವಲಸೆ ನಾಯಕರಿಗೆ ಟಿಕೆಟ್ ನೀಡಿದ್ದಕ್ಕೆ ಮೂಲ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು 25 ಕ್ಷೇತ್ರಗಳಲ್ಲಿ ಸ್ವಪಕ್ಷೀಯರಿಗೆ ನೀಡಿರುವ ಟಿಕೆಟ್ ಕುರಿತು ಅಸಮಾಧಾನ ವ್ಯಕ್ತವಾಗಿದೆ. ಒಟ್ಟು 45 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಸ್ವಪಕ್ಷೀಯರನ್ನು ಸಂತೈಸುವುದು ಸವಾಲಿನ ಕೆಲಸವಾಗಿದೆ.
ಬಿಜೆಪಿಗೆ ಸುಲಿಗೆಕೋರ ಪಕ್ಷ ಎಂದು ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ
ಬಿಜೆಪಿಯಲ್ಲೂ ನಾಯಕರ ಪಕ್ಷಾಂತರದ ಪರ್ವ
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆದಾಗಿನಿಂದ ಈವರೆಗೂ ಟಿಕೆಟ್ ವಂಚಿತ ಐವರು ನಾಯಕರು ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ. ಟಿಕೆಟ್ ನೀಡದಿದ್ದರೆ ತಾವು ಪಕ್ಷ ತೊರೆಯುವುದಾಗಿ ಹಲವು ನಾಯಕರು ಬಂಡಾಯದ ಬಾವುಟ ಹಾರಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಮುಖಂಡರ ಒತ್ತಾಯಕ್ಕೆ ಮಣಿದು ಅಲಿಪುರ್ದುರ್ ಕ್ಷೇತ್ರದಲ್ಲಿ ಸುಮನ್ ಕಾಂಜಿಲಾಲ್ ಬದಲಿಗೆ ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅಶೋಕ್ ಲಾಹಿರಿ ಅವರಿಗೆ ಟಿಕೆಟ್ ನೀಡಲಾಗಿದೆ.
"ನಿರೀಕ್ಷಿಸಿದವರಿಗೆಲ್ಲ ಟಿಕೆಟ್ ನೀಡಲು ಸಾಧ್ಯವೇ"
ಪಶ್ಚಿಮ ಬಂಗಾಳದಲ್ಲಿ ಕೇವಲ 294 ವಿಧಾನಸಭಾ ಕ್ಷೇತ್ರಗಳಿವೆ. ಹೀಗಿರುವುದಾಗ ಕೇಳಿದವರಿಗೆಲ್ಲ ಟಿಕೆಟ್ ನೀಡುವುದಕ್ಕೆ ಸಾಧ್ಯವಿಲ್ಲ. ಕೆಲವರಿಗೆ ಅವಕಾಶ ಸಿಗುತ್ತದೆ. ಇನ್ನು ಕೆಲವರಿಗೆ ಸಿಗುವುದಿಲ್ಲ. ಅದನ್ನು ನಾವು ಸ್ವೀಕರಿಸಬೇಕು. ಪಕ್ಷದ ಕಚೇರಿಗಳನ್ನು ಧ್ವಂಸಗೊಳಿಸುವುದು ಪಕ್ಷದ ಪೋಸ್ಟರ್ ಗಳನ್ನು ಸುಟ್ಟು ಹಾಕುವುದು ಉತ್ತಮ ನಡುವಳಿಕೆಯಲ್ಲ. ಇಂಥ ನಡೆಯನ್ನು ಪಕ್ಷ ಎಂದಿಗೂ ಕ್ಷಮಿಸುವುದಿಲ್ಲ ಎಂದು ಬಿಜೆಪಿ ವಕ್ತಾರ ಸಮಿಕ್ ಭಟ್ಟಾಚಾರ್ಯ ತಿಳಿಸಿದ್ದಾರೆ.
"ಐದು ವರ್ಷ ನೀಡಿ ಸಾಕು, ಬದಲಾವಣೆ ಎಂದರೇನು ತೋರುತ್ತೇವೆ"
ಅಭ್ಯರ್ಥಿಗಳ 2ನೇ ಪಟ್ಟಿ ತಿದ್ದುಪಡಿಗೆ ಬಿಜೆಪಿ ಪ್ರತಿಭಟನೆ
ಪಶ್ಚಿಮ ಬಂಗಾಳದ ಎರಡು ಹಂತಗಳ ಚುನಾವಣೆಗೆ ಮೊದಲ ಬಿಜೆಪಿ ಬಿಡುಗಡೆಗೊಳಿಸಿದ ಅಭ್ಯರ್ಥಿಗಳ ಪಟ್ಟಿಗೆ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಪುರಿಲಿಯಾ, ಬಂಕೂರಾ, ಪೂರ್ವ ಮತ್ತು ಪಶ್ಟಿಮ ಮಿದ್ನಾಪೊರ್ ಜಿಲ್ಲೆಗಳಲ್ಲಿ ಯಾವುದೇ ಪ್ರತಿಭಟನೆಗಳು ನಡೆದಿರಲಿಲ್ಲ. ಮಾರ್ಚ್ 14ರಂದು ಬಿಜೆಪಿ ಬಿಡುಗಡೆಗೊಳಿಸಿದ ಅಭ್ಯರ್ಥಿಗಳ 2ನೇ ಪಟ್ಟಿಗೆ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೂಗ್ಲಿ, ದಕ್ಷಿಣದ 24 ಪರಗಣ ಮತ್ತು ಹೌರಾ ಜಿಲ್ಲೆಗಳಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸುವಂತೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಟಿಎಂಸಿ ತೊರೆದು ಬಿಜೆಪಿ ಸೇರಿದ ನಾಯಕನಿಗೆ ಟಿಕೆಟ್ ಇಲ್ಲ
ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಸೇರ್ಪಡೆಯಾದ ಸೋವನ್ ಚಟರ್ಜಿ ಅವರಿಗೆ ಟಿಕೆಟ್ ನೀಡಲು ಬಿಜೆಪಿ ನಿರಾಕರಿಸಿದೆ. ಬೆಹಲಾ ಪುರ್ಬಾ ಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿದ ಸೋವನ್ ಚಟರ್ಜಿ ಟಿಕೆಟ್ ಸಿಗದ ಹಿನ್ನೆಲೆ ತನ್ನ ಸಹಾಯಕ ಬೈಶಕ್ತಿ ಬ್ಯಾನರ್ಜಿ ಜೊತೆಗೆ ಬಿಜೆಪಿ ತೊರೆದಿದ್ದಾರೆ. ಕಳೆದ 2011, 2016ರ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ದಿಲಿಪ್ ಘೋಷ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅಲ್ಲದೇ ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿಶ್ವಾಸಘಾತುಕತನ ಮತ್ತು ಪಿತೂರಿಯು ಬಹಳ ದಿನಗಳವರೆಗೂ ನಡೆಯುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಪ್ರಕಟಿಸಿದ ಅಭ್ಯರ್ಥಿಗಳ ಪಟ್ಟಿ ವಿರುದ್ಧ ಆಕ್ರೋಶ
ಮಾರ್ಚ್ 18ರಂದು ಭಾರತೀಯ ಜನತಾ ಪಕ್ಷ ಬಿಡುಗಡೆಗೊಳಿಸಿದ 157 ಅಭ್ಯರ್ಥಿಗಳ ಪಟ್ಟಿ ವಿರುದ್ಧ ರಾಜ್ಯಾದ್ಯಂತ ಕಾರ್ಯಕರ್ತರು ಪ್ರತಿಭಟನೆಗೆ ಇಳಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಒತ್ತಾಯಿಸಲಾಯಿತು. ಅಂತಿಮವಾಗಿ ಪಟ್ಟಿ ಪರಿಷ್ಕರಿಸುವಂತೆ ಆಗ್ರಹಿಸಿ ಪಕ್ಷದ ಕಚೇರಿಗೆ ನುಗ್ಗಿ ಧ್ವಂಸಗೊಳಿಸಲು ಪ್ರಯತ್ನಿಸಿದರು. ಈ ವೇಳೆ ಆಕ್ರೋಶಗೊಂಡ ಕಾರ್ಯಕರ್ತರನ್ನು ಪೊಲೀಸರು ತಡೆದರು.
ಬಿಜೆಪಿ ಪಟ್ಟಿಯಲ್ಲಿ ಅನಿರೀಕ್ಷಿತರಿಗೆ ಅವಕಾಶ
ಬಿಜೆಪಿ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಹಲವು ನಾಯಕರಿಗೆ ಅನಿರೀಕ್ಷಿತ ಅವಕಾಶಗಳು ಒದಗಿ ಬಂದಿವೆ. ಬಿಜೆಪಿ ಪಟ್ಟಿಯಲ್ಲಿ ಪಶ್ಚಿಮ ಬಂಗಾಳ ಕಾಂಗ್ರೆಸ್ಸಿನ ಮಾಜಿ ರಾಜ್ಯಾಧ್ಯಕ್ಷ ಸೊಮೆನ್ ಮಿತ್ರಾ ಅವರ ಪತ್ನಿ ಸಿಖಾ ಮಿತ್ರಾ ಅವರ ಹೆಸರು ಕೂಡಾ ಇದೆ. ಚೌರಿಂಘಿ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ಬಿಜೆಪಿ ಟಿಕೆಟ್ ಘೋಷಿಸಿರುವ ಬಗ್ಗೆ ಸ್ವತಃ ಸಿಖಾ ಮಿತ್ರಾ ಅವರೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಟಿಎಂಸಿಯಿಂದ ಹೊರ ಹೋಗಿರುವ ಕಾಶಿಪುರ-ಬೆಲ್ಗಾಚಿಯಾ ಕ್ಷೇತ್ರದ ಶಾಸಕ ತರುಣ್ ಸಹಾ ಅವರ ಪತ್ನಿ ಮಾಲಾ ಸಹಾ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವ ಬಗ್ಗೆ ತರುಣ್ ಸಹಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ 8 ಹಂತಗಳಲ್ಲಿ ವಿಧಾನಸಭಾ ಚುನಾವಣೆ
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಚುನಾವಣೆಯ ಅಂತಿಮ ಫಲಿತಾಂಶ ಮೇ 2ರಂದು ಹೊರ ಬೀಳಲಿದೆ.
Recommended Video