ನಾರಾಯಣಿ ಸೇನಾ ಬೆಟಾಲಿಯನ್ ಸ್ಥಾಪನೆ: ಅಮಿತ್ ಶಾ ಭರವಸೆ
ಕೋಲ್ಕತಾ, ಫೆಬ್ರವರಿ 11: ದೇಶದ ಅರೆಸೇನಾ ಪಡೆಗಳಲ್ಲಿ 'ನಾರಾಯಣಿ ಸೇನಾ ಬೆಟಾಲಿಯನ್' ಎಂಬ ಹೊಸ ಬಟಾಲಿಯನ್ಅನ್ನು ಸೇರ್ಪಡೆ ಮಾಡುವುದಾಗಿ ಗೃಹ ಸಚಿವ ಅಮಿತ್ ಶಾ ಗುರುವಾರ ಘೋಷಿಸಿದರು. ಕೋಚ್ ರಾಜವಂಶದ ರಾಜ ನರ ನಾರಾಯಣನ ಕಿರಿಯ ಸಹೋದರ ವೀರ ಚಿಲ ರಾಯ್ ಹೆಸರಿನಲ್ಲಿ ತರಬೇತಿ ಕೇಂದ್ರ ಆರಂಭಿಸುವುದಾಗಿಯೂ ಅವರು ತಿಳಿಸಿದ್ದಾರೆ.
ಚುನಾವಣೆಗೆ ಸಜ್ಜುಗೊಳ್ಳುತ್ತಿರುವ ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಪ್ರಚಾರದಲ್ಲಿ ತೊಡಗಿರುವ ಅಮಿತ್ ಶಾ, ಪಶ್ಚಿಮ ಬಂಗಾಳದಲ್ಲಿ ಮುಂದಿನ ಐದು ವರ್ಷಗಳಲ್ಲಿ 'ಸೋನಾರ್ ಬಾಂಗ್ಲಾ' ಕನಸನ್ನು ಈಡೇರಿಸುವುದಾಗಿ ಮಾತು ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಬಿಜೆಪಿಗೆ ಮತ ಹಾಕುವಂತೆ ಜನರಿಗೆ ಮನವಿ ಮಾಡಿದರು.
Video: ಪಶ್ಚಿಮ ಬಂಗಾಳದಲ್ಲಿ ದೀದಿ ವಿರುದ್ಧ "ಶ್ರೀರಾಮ" ಬಾಣ ಬಿಟ್ಟ ಅಮಿತ್ ಶಾ!
ಬುಡಕಟ್ಟು ಸಮುದಾಯದ ಭಾಗಗಳನ್ನು ಗುರಿಯಾಗಿರಿಸಿ ಇತ್ತೀಚೆಗೆ ಮಾತನಾಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೋಚ್ ಬೆಹಾರ್ದಲ್ಲಿ 'ನಾರಾಯಣಿ', ಹಿಲ್ಸ್ನಲ್ಲಿ 'ಘೋರ್ಖಾ' ಮತ್ತು 'ಜಂಗಲಮಹಲ್' ಎಂಬ ಮೂರು ಪ್ರತ್ಯೇಕ ಪೊಲೀಸ್ ಬೆಟಾಲಿಯನ್ ಶುರು ಮಾಡುವುದಾಗಿ ಘೋಷಿಸಿದ್ದರು. ಉತ್ತರ ಬಂಗಾಳದಲ್ಲಿ 'ನಾರಾಯಣಿ ಸೇನಾ ಬೆಟಾಲಿಯನ್' ರಚಿಸಬೇಕು ಎನ್ನುವುದು ದೀರ್ಘಕಾಲದಿಂದ ಉಳಿದಿರುವ ರಾಜ್ಬೊನ್ಶಿ ಸಮುದಾಯದ ಬೇಡಿಕೆಯಾಗಿದೆ.
ಶೇ 30ರಷ್ಟು ಮತಹಂಚಿಕೆ ಹೊಂದಿರುವ ರಾಜ್ಬೊನ್ಶಿ ಸಮುದಾಯವು ಉತ್ತರ ಬಂಗಾಳದಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ಪ್ರಮುಖವಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಈ ಭಾಗದಲ್ಲಿಬಿಜೆಪಿಗೆ ಭಾರಿ ಬೆಂಬಲ ವ್ಯಕ್ತವಾಗಿತ್ತು.