ಬಿಜೆಪಿಗೆ ದಿಟ್ಟ ಸವಾಲು ಹಾಕಿದ ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಫೆಬ್ರುವರಿ 08: ಪಶ್ಚಿಮ ಬಂಗಾಳದಲ್ಲಿ ರಾಜ್ಯ ಬಜೆಟ್ ಮಂಡನೆಯಾಗಿದ್ದು, ಸಿಎಂ ಮಮತಾ ಬ್ಯಾನರ್ಜಿ ವಿಧಾನಸಭೆಯಲ್ಲಿ ಫೆಬ್ರುವರಿ 5ರಂದು ಬಜೆಟ್ ಮಂಡಿಸಿ, ರಾಜ್ಯ ಬಜೆಟ್ ಮಂಡನೆ ಮಾಡಿದ ಮೊದಲ ಮಹಿಳೆ ಎಂದು ಕರೆಸಿಕೊಂಡಿದ್ದಾರೆ. ಬಜೆಟ್ ನಲ್ಲಿ ಪಶ್ಚಿಮ ಬಂಗಾಳ ಜನರಿಗೆ ಹಲವು ಕೊಡುಗೆಗಳನ್ನೂ ನೀಡಿದ್ದಾರೆ.
ಆದರೆ ರಾಜ್ಯ ಬಜೆಟ್ ಕುರಿತು ಟೀಕೆ ಮಾಡಿರುವ ಬಿಜೆಪಿ, "ಮಮತಾ ಬ್ಯಾನರ್ಜಿ ಮಂಡಿಸಿರುವ ಈ ರಾಜ್ಯ ಬಜೆಟ್ ವಾಸ್ತವಕ್ಕೆ ದೂರವಾದವು. ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬಜೆಟ್ ಘೋಷಿಸಲಾಗಿದೆಯೇ ಹೊರತು ಜನರ ಅಭಿವೃದ್ಧಿಯ ಹಿನ್ನೆಲೆಯಲ್ಲಲ್ಲ. ಈ ಬಜೆಟ್ ಬರೀ ಘೋಷಣೆಗಳಾಗಿ ಉಳಿಯಲಿವೆ. ಅವ್ಯಾವೂ ಕಾರ್ಯರೂಪಕ್ಕೆ ಬರಲು ಸಾಧ್ಯವಿಲ್ಲ" ಎಂದು ಆರೋಪಿಸಿದ್ದವು.
ಚುನಾವಣೆ ಹೊಸ್ತಿಲಲ್ಲಿ ದೀದಿ ಸರ್ಕಾರದಿಂದ ಭರ್ಜರಿ ಬಜೆಟ್ ಘೋಷಣೆ
ಈ ಟೀಕೆಗಳಿಗೆ ಸಿಎಂ ಮಮತಾ ಬ್ಯಾನರ್ಜಿ ಇಂದು ವಿಧಾನಸಭೆ ಅಧಿವೇಶನದಲ್ಲಿ ಉತ್ತರ ನೀಡಿದ್ದಾರೆ.
"ಕೆಲವರು ಈ ರಾಜ್ಯ ಬಜೆಟ್ ಅನ್ನು ಚುನಾವಣೆಯ ಪ್ರಚಾರ ಕಾರ್ಯ, ರಾಜ್ಯದ ವಿಧಾನಸಭೆ ಚುನಾವಣೆಯ ಜಾಹೀರಾತು ಎನ್ನುತ್ತಿದ್ದಾರೆ. ಅದು ಜಾಹೀರಾತು ಹೌದು ಎಂದರೂ ಅದರಲ್ಲಿ ಸಮಸ್ಯೆಯೇನಿದೆ?" ಎಂದು ಪ್ರಶ್ನಿಸಿದ್ದಾರೆ.
"ಕೆಲವು ದಿನಗಳಿಂದೀಚೆಗೆ ಕೆಲವರು ನೀವು ಇನ್ನು ಪಶ್ಚಿಮ ಬಂಗಾಳದಲ್ಲಿ ಉಳಿಯುವುದು ಕೆಲವೇ ದಿನ ಎಂದು ನಮಗೆ ಹೇಳುತ್ತಿದ್ದಾರೆ. ಆದರೆ ನಾನು ಮತ್ತೊಮ್ಮೆ ಸಾರಿ ಹೇಳುತ್ತೇನೆ, ಪಶ್ಚಿಮ ಬಂಗಾಳದಲ್ಲಿ ನಾವು ಮತ್ತೆ ಗೆದ್ದೇ ಗೆಲ್ಲುತ್ತೇವೆ. ಭಾರೀ ಜನಾದೇಶದೊಂದಿಗೆ ನಿಮ್ಮ ಮುಂದೆ ಗೆದ್ದು ನಿಲ್ಲಲಿದ್ದೇವೆ" ಎಂದು ಸವಾಲು ಹಾಕಿದ್ದಾರೆ.