ಪಶ್ಚಿಮ ಬಂಗಾಳ; 25 ಕೋಟಿ ರೂ.ಗೆ ಪೆಗಾಸಸ್ ತಂತ್ರಾಂಶ ಮಾರಾಟ ಆಫರ್!
ಕೋಲ್ಕತ್ತಾ, ಮಾರ್ಚ್ 17: ಇಸ್ರೇಲ್ ಮೂಲದ ಬೇಹುಗಾರಿಕೆ ತಂತ್ರಾಂಶ ಪೆಗಾಸಸ್ ಅನ್ನು ಅಭಿವೃದ್ಧಿಪಡಿಸುವ ಸೈಬರ್-ಸೆಕ್ಯುರಿಟಿ ಕಂಪನಿಯು ಕೇವಲ 25 ಕೋಟಿ ರೂಪಾಯಿಗೆ ತನ್ನ ತಂತ್ರಾಂಶವನ್ನು ಮಾರಾಟ ಮಾಡುವ ಬಗ್ಗೆ ಆಫರ್ ಕೊಟ್ಟಿತ್ತು. ಕಳೆದ ನಾಲ್ಕೈದು ವರ್ಷಗಳ ಹಿಂದೆಯೇ ಈ ಸಂಬಂಧ ರಾಜ್ಯ ಪೊಲೀಸರನ್ನು ಸಂಪರ್ಕಿಸಲಾಗಿತ್ತು. ಆದರೆ ಅದರ ಬಗ್ಗೆ ತಿಳಿಯುತ್ತಿದ್ದಂತೆ ನಾನು ಅದನ್ನು ತಿರಸ್ಕರಿಸಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ದೇಶದ ಭದ್ರತೆಗಾಗಿ ಬೇಹುಗಾರಿಕೆಯನ್ನು ಬಳಸುವ ಬದಲು, ನ್ಯಾಯಾಧೀಶರು ಮತ್ತು ಅಧಿಕಾರಿಗಳ ವಿರುದ್ಧ "ರಾಜಕೀಯ" ಕಾರಣಗಳಿಗಾಗಿ ಕೇಂದ್ರ ಸರ್ಕಾರವು ಅದನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ. ಆದರೆ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಮ್ಮ ಅಧಿಕಾರಾವಧಿಯಲ್ಲಿ ಬೇಹುಗಾರಿಕೆ ತಂತ್ರಾಂಶವನ್ನು ಖರೀದಿಸಿದ್ದರು ಎಂಬ ದೀದಿ ಆರೋಪವನ್ನು ತೆಲುಗು ದೇಶಂ ಪಕ್ಷವು ತಳ್ಳಿಹಾಕಿದೆ.
ಪೆಗಾಸಸ್ ಬೇಹುಗಾರಿಕೆ ತಂತ್ರಾಂಶವನ್ನು ಕಪ್ಪುಪಟ್ಟಿಗೆ ಸೇರಿಸಿದ ಯುಎಸ್!
25 ಕೋಟಿಗೆ ಮಾರಾಟಕ್ಕೆ ಮುಂದಾಗಿದ್ದ ಕಂಪನಿ:
"ಪೆಗಾಸಸ್ ತಂತ್ರಾಂಶವನ್ನು ಅಭಿವೃದ್ಧಿಪಡಿಸುವ ಎನ್ಎಸ್ಒ ಕಂಪನಿಯು ತನ್ನ ಸರಕನ್ನು ಮಾರಾಟ ಮಾಡುವುದಕ್ಕಾಗಿ ಪ್ರತಿಯೊಬ್ಬರನ್ನೂ ಸಂಪರ್ಕಿಸಿದೆ. ಅದೇ ರೀತಿ ನಾಲ್ಕೈದು ವರ್ಷಗಳ ಹಿಂದೆಯೇ ನಮ್ಮ ಪೊಲೀಸರನ್ನೂ ಸಂಪರ್ಕಿಸಿದ್ದರು. ಅದನ್ನು 25 ಕೋಟಿಗೆ ಮಾರಾಟ ಮಾಡಲು ಕಂಪನಿಯು ಮುಂದಾಗಿತ್ತು. ನನಗೆ ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಅದರ ಅಗತ್ಯವಿಲ್ಲ ಎಂದು ಹೇಳಿದೆ ಎಂದು ಬ್ಯಾನರ್ಜಿ ಹೇಳಿಕೊಂಡಿದ್ದಾರೆ.
"ದೇಶದ ಪ್ರಯೋಜನ ಆಗುವಂತಿದ್ದರೆ ಅಥವಾ ಭದ್ರತಾ ಕಾರಣಗಳಿಗಾಗಿ ಇದನ್ನು ಬಳಸಿದ್ದರೆ ಅದು ಬೇರೆ ಮಾತಾಗುತ್ತಿತ್ತು. ಆದರೆ ಅದನ್ನು ರಾಜಕೀಯ ಉದ್ದೇಶಗಳಿಗಾಗಿ, ನ್ಯಾಯಾಧೀಶರು, ಅಧಿಕಾರಿಗಳ ವಿರುದ್ಧ ಬಳಸಲಾಗಿದೆ, ಇದು ಸ್ವಾಗತಾರ್ಹವಲ್ಲ," ಎಂದಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ಮಾತನಾಡಿದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತನ್ನ ಸರ್ಕಾರಕ್ಕೆ ಪೆಗಾಸಸ್ ಸ್ಪೈವೇರ್ ನೀಡಲಾಯಿತು ಎಂದ ವಿಷಯವನ್ನು ಬಹಿರಂಗಪಡಿಸಿದರು. ಅದು ಜನರ ಖಾಸಗಿತನವನ್ನು ಅತಿಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಕಾರಣಕ್ಕೆ ತಾವು ಅದನ್ನು ನಿರಾಕರಿಸಿರುವುದಾಗಿ ಹೇಳಿದರು. ಇದೇ ವೇಳೆ ಆಂಧ್ರ ಪ್ರದೇಶದಲ್ಲಿ "ಚಂದ್ರಬಾಬು ನಾಯ್ಡು ಕಾಲದಲ್ಲಿ ಈ ತಂತ್ರಾಂಶವನ್ನು ಬಳಕೆ ಮಾಡಲಾಗಿತ್ತು ಎಂದು ದೂಷಿಸಿದರು.
ಮಮತಾ ಬ್ಯಾನರ್ಜಿ ಆರೋಪ ತಳ್ಳಿ ಹಾಕಿದ ಟಿಡಿಪಿ:
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಡಿರುವ ಆರೋಪವನ್ನು ತೆಲುಗು ದೇಶಂ ಪಕ್ಷವು ಈ ನಿರಾಕರಿಸಿದೆ. ಚಂದ್ರಬಾಬು ನಾಯ್ಡು ಸರ್ಕಾರವು ಅಂತಹ ಯಾವುದೇ ಖರೀದಿಯನ್ನು ಮಾಡಿಲ್ಲ ಎಂದು ಹೇಳಿದೆ. "ನಾವು ಯಾವುದೇ ಸ್ಪೈವೇರ್ ಖರೀದಿಸಿಲ್ಲ. ನಾವು ಯಾವುದೇ ಅಕ್ರಮ ಫೋನ್ ಕದ್ದಾಲಿಕೆಯಲ್ಲಿ ತೊಡಗಿಲ್ಲ" ಎಂದು ತೆಲುಗು ದೇಶಂ ಪಕ್ಷದ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಹೇಳಿದ್ದಾರೆ.
ಹಿಂದಿನ ಚಂದ್ರಬಾಬು ನಾಯ್ಡು ಸರ್ಕಾರವು ಪೆಗಾಸಸ್ ಸ್ಪೈವೇರ್ ಅನ್ನು ಖರೀದಿಸಿದೆ ಎಂಬ ಬ್ಯಾನರ್ಜಿ ಹೇಳಿಕೆಗೆ ಲೋಕೇಶ್ ಪ್ರತಿಕ್ರಿಯಿಸಿದರು. ಅವರ ತಂದೆ ಚಂದ್ರಬಾಬು ಸಂಪುಟದಲ್ಲಿ ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದ ಲೋಕೇಶ್, "ಮಮತಾ ಬ್ಯಾನರ್ಜಿಯವರು ನಿಜವಾಗಿಯೂ ಹಾಗೆ ಹೇಳಿದ್ದಾರೋ ಅಥವಾ ಯಾವ ಉದ್ದೇಶದಿಂದ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಒಂದು ವೇಳೆ ಅವರು ಹಾಗೆ ಹೇಳಿಕೆ ನೀಡಿದ್ದರೆ ಅದು ಸಂಪೂರ್ಣ ತಪ್ಪು ಮಾಹಿತಿ ಆಗಿದೆ," ಎಂದರು.
ಆದರೆ, ರಾಜ್ಯ ಸರ್ಕಾರಕ್ಕೆ ಸಾಫ್ಟ್ ವೇರ್ ನೀಡುವುದಾಗಿ ಸಂಪರ್ಕಿಸಿತ್ತೇ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು. "ಹೌದು, ಪೆಗಾಸಸ್ ತನ್ನ ಸ್ಪೈವೇರ್ ಅನ್ನು ಆಂಧ್ರ ಪ್ರದೇಶ ಸರ್ಕಾರಕ್ಕೆ ಮಾರಾಟ ಮಾಡಲು ಪ್ರಸ್ತಾಪಿಸಿತ್ತು, ಆದರೆ ನಾವು ಅದನ್ನು ತಿರಸ್ಕರಿಸಿದ್ದೇವೆ," ಎಂದು ಲೋಕೇಶ್ ಹೇಳಿದರು.
ಪೆಗಾಸಸ್ ಬೇಹುಗಾರಿಕೆ ತಂತ್ರಾಂಶದ ಹಿನ್ನೆಲೆ:
ಜಾಗತಿಕ ತನಿಖಾ ಸಂಸ್ಥೆಗಳು ಮಾಡಿರುವ ವರದಿಯ ಪ್ರಕಾರ, ಕೇಂದ್ರ ಸರ್ಕಾರಕ್ಕೆ ಮಾರಾಟವಾಗಿರುವ ಇಸ್ರೇಲಿನ ಬೇಹುಗಾರಿಕೆ ತಂತ್ರಾಂಶವನ್ನು ಬಳಸಿಕೊಂಡು ವಿರೋಧ ಪಕ್ಷದ ಹಲವು ನಾಯಕರ ಮೇಲೆ ಕಣ್ಗಾವಲು ಇಡಲಾಗಿದೆ. ದೇಶದ ಪ್ರಮುಖ 142ಕ್ಕೂ ಹೆಚ್ಚು ರಾಜಕೀಯ ವ್ಯಕ್ತಿಗಳ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ಆರೋಪವಿದೆ. ಭಾರತದಲ್ಲಿ 300ಕ್ಕೂ ಹೆಚ್ಚು ಪ್ರಮುಖ ರಾಜಕಾರಣಿಗಳು, ಕೇಂದ್ರ ಸಚಿವರು, ನ್ಯಾಯಾಧೀಶರು ಹಾಗೂ ಪತ್ರಕರ್ತರ ಮೊಬೈಲ್ ಸಂಖ್ಯೆ ಹ್ಯಾಕ್ ಮಾಡಲಾಗಿದೆ. ಈ ಬೇಹಾಗಾರಿಕೆಗೆ ಒಳಗಾದವರ ಪಟ್ಟಿಯಲ್ಲಿ ಸ್ವತಃ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ, ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್, ಕೇಂದ್ರ ಸಚಿವರಾದ ಪ್ರಹ್ಲಾದ್ ಪಟೇಲ್ ಮತ್ತು ಅಶ್ವಿನಿ ವೈಷ್ಣವ್ ಜೊತೆಗೆ 40 ಮಂದಿ ಪತ್ರಕರ್ತರ ಹೆಸರು ಕೂಡ ಸೇರಿದೆ ಎಂದು ದೂಷಿಸಲಾಗುತ್ತಿದೆ.