ಚುನಾವಣೆ ಹಿಂದಿನ ದಿನವೇ ಪಶ್ಚಿಮ ಬಂಗಾಳದಲ್ಲಿ ಗಲಭೆ
ಕೋಲ್ಕತ್ತಾ, ಮಾರ್ಚ್ 26: ಚುನಾವಣೆಗೆ ಇನ್ನು ಒಂದು ದಿನ ಇರುವಾಗಲೇ ಪಶ್ಚಿಮ ಬಂಗಾಳದಲ್ಲಿ ಜಿದ್ದಾಜಿದ್ದಿಯಲ್ಲಿರುವ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗುರುವಾರ ಗದ್ದಲ ಉಂಟಾಗಿದೆ.
ಪಶ್ಚಿಮ ಬಂಗಾಳದ ಅಸನಾಲ್ ಜಿಲ್ಲೆಯಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಜಗಳ ಆರಂಭವಾಗಿದ್ದು, ಗುಂಪುಗುಂಪಾಗಿ ಸೇರಿ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಈ ಘಟನೆಗೆ ಟಿಎಂಸಿಯನ್ನು ಹೊಣೆ ಮಾಡಿದ್ದಾರೆ. ಬಿಜೆಪಿ ಚುನಾವಣಾ ಸಮಾವೇಶದ ಮೇಲೆ ದಾಳಿ ನಡೆಸಲಾಗಿದೆ ಎಂದು ದೂರಿದ್ದಾರೆ.
ಅಲ್ಪಸಂಖ್ಯಾತರ ಮತ ಕಬಳಿಸಲು ಬೇರೆ ಪಕ್ಷಕ್ಕೆ ಬಿಜೆಪಿ ಬೆಂಬಲ; ಮಮತಾ
ಜನವರಿಯಲ್ಲಿ ಅಸನಾಲ್ನಲ್ಲಿ ಬಿಜೆಪಿ ಕಾರ್ಯಕಾರಿ ಸಮಿತಿ ಅಧ್ಯಕ್ಷ ಕೃಷ್ಣೇಂದು ಮುಖರ್ಜಿ ಮೇಲೆ ಗುಂಡು ಹಾರಿಸಲಾಗಿತ್ತು. ತಮ್ಮ ಮನೆಗೆ ಹಿಂದಿರುಗುವಾಗ ಅವರ ಮೇಲೆ ದಾಳಿ ನಡೆಸಲಾಗಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಈ ಮುನ್ನವೂ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಹಲವು ಬಾರಿ ಗಲಭೆ ನಡೆದಿವೆ.
ಈ ತಿಂಗಳ ಮೊದಲಲ್ಲೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಮೇಲೆ ದಾಳಿ ಮಾಡಿದ ಆರೋಪ ಕೇಳಿಬಂದಿತ್ತು. ಆಗ ಟಿಎಂಸಿ ಬಿಜೆಪಿ ಮೇಲೆ ಆರೋಪ ಹೊರಿಸಿತ್ತು. ಇದೀಗ ಮತ್ತೆ ಮತ್ತೆ ಅಂಥ ಸಂಗತಿಗಳು ನಡೆಯುತ್ತಿವೆ.
ಮಾರ್ಚ್ 27ರಂದು ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಆರಂಭವಾಗಲಿದ್ದು, ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.