ಮಮತಾ ಬ್ಯಾನರ್ಜಿ ಬಳಿಕ ಬಂಗಾಳದಲ್ಲಿ ಸ್ಕೂಟರ್ ಓಡಿಸಿದ ಸ್ಮೃತಿ ಇರಾನಿ
ಕೋಲ್ಕತಾ, ಫೆಬ್ರವರಿ 26: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರದ ತೈಲ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಇಲೆಕ್ಟ್ರಿಕ್ ಸ್ಕೂಟರ್ನಲ್ಲಿ ಸವಾರಿ ಮಾಡಿದ ಮರುದಿನ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಕೋಲ್ಕತಾದಲ್ಲಿ ದ್ವಿಚಕ್ರವಾಹನ ಚಲಾಯಿಸಿದ್ದಾರೆ.
ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ: ಎಲೆಕ್ಟ್ರಿಕ್ ಸ್ಕೂಟರ್ ಸವಾರಿ ಮಾಡಿದ ಮಮತಾ ಬ್ಯಾನರ್ಜಿ
ಬಿಜೆಪಿಯ ಮೋಟಾರ್ ಸೈಕಲ್ ಯಾತ್ರೆಯಲ್ಲಿ ಶುಕ್ರವಾರ ಪಾಲ್ಗೊಂಡ ಸ್ಮೃತಿ ಇರಾನಿ ಅವರು ಕೋಲ್ಕತಾ ಉಪನಗರದ ಸಣ್ಣ ರಸ್ತೆಗಳಲ್ಲಿ ಸ್ಕೂಟರ್ ಓಡಿಸಿದರು. ಏಪ್ರಿಲ್-ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಚುನಾವಣೆ ದಿನಾಂಕ ಶುಕ್ರವಾರ ಪ್ರಕಟಗೊಳ್ಳುವ ಮುನ್ನ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಸ್ಮೃತಿ ಇರಾನಿ ವ್ಯಾಪಕ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ.
ಬಲೂರ್ಘಾಟ್ ಪ್ರದೇಶದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರೊಂದಿಗೆ ರಾಜನಾಥ್ ಸಿಂಗ್ ಪ್ರಚಾರ ಕಾರ್ಯ ನಡೆಸಿದ್ದರೆ, ದಕ್ಷಿಣ 24 ಪರಗಣ ಜಿಲ್ಲೆಯ ಬರೂಯಿಪುರ್-ಸೋನಾಪುರ ಪ್ರದೇಶದಲ್ಲಿ ನಡೆದ ಬೈಕ್ ಜಾಥಾದಲ್ಲಿ ಸ್ಮೃತಿ ಇರಾನಿ ಭಾಗವಹಿಸಿದರು.
#WATCH West Bengal: Union Minister Smriti Irani rides a scooty during a roadshow of BJP, in Panchpota. pic.twitter.com/KV1XGH5QnE
— ANI (@ANI) February 26, 2021
ಗುರುವಾರ ಬೆಳಿಗ್ಗೆ ಗ್ರಾಮೀಣ ಅಭಿವೃದ್ಧಿ ಮತ್ತು ಮುನಿಸಿಪಲ್ ವ್ಯವಹಾರ ಸಚಿವ ಫಿರ್ಹಾದ್ ಹಕೀಮ್ ಅವರೊಂದಿಗೆ ಹಿಂಬದಿ ಸವಾರರಾಗಿ ಸುಮಾರು ಐದು ಕಿಮೀ ದೂರದ ರಾಜ್ಯ ಕಾರ್ಯಾಲಯಕ್ಕೆ ಇಲೆಕ್ಟ್ರಿಕ್ ಸ್ಕೂಟರ್ನಲ್ಲಿ ಮಮತಾ ಬ್ಯಾನರ್ಜಿ ತೆರಳಿದ್ದರು. ತಮ್ಮ ಕತ್ತಿಗೆ ಬೆಲೆ ಏರಿಕೆ ವಿರುದ್ಧದ ಫಲಕವನ್ನು ಅವರು ನೇತುಹಾಕಿಕೊಂಡಿದ್ದರು.