ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ಸುಪ್ರಿಯೋ ಮೇಲೆ ಹಲ್ಲೆ
ಕೋಲ್ಕತಾ, ಸೆಪ್ಟೆಂಬರ್ 20: ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ರಾಜ್ಯ ಸಚಿವ ಬಾಬುಲ್ ಸುಪ್ರಿಯೋ ಅವರ ಮೇಲೆ ಪಶ್ಚಿಮ ಬಂಗಾಳದ ಜಾದವ್ಪುರ ವಿಶ್ವವಿದ್ಯಾಲಯದಲ್ಲಿ ಹಲ್ಲೆ ನಡೆದಿದೆ.
ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಗುರುವಾರ ಆಗಮಿಸಿದ್ದ ಅವರನ್ನು ಗುಂಪೊಂದು ತಳ್ಳಾಡಿದೆ, ಅವರ ಅಂಗಿಯನ್ನು ಹರಿದು ಹಾಕಿದೆ. 'ನನ್ನ ತಲೆಗೂದಲನ್ನು ಎಳೆದರು ಮತ್ತು ತಳ್ಳಿದರು' ಎಂದು ಸುಪ್ರಿಯೋ ಆರೋಪಿಸಿದ್ದಾರೆ.
ಪ.ಬಂಗಾಳದ ಬಿಜೆಪಿ ಸಂಸದನ ಪ್ರಮಾಣವಚನದ ವೇಳೆ ಮೊಳಗಿದ ಜೈಶ್ರೀರಾಂ ಘೋಷಣೆ
ಸುಪ್ರಿಯೋ ಅವರ ಮೇಲೆ ನಡೆದ ಹಲ್ಲೆಯ ವಿಡಿಯೋ ವೈರಲ್ ಆಗಿದೆ. ಅವರನ್ನು ವಿವಿಯ ಆವರಣದೊಳಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಭಾರಿ ದೊಡ್ಡ ಗುಂಪೊಂದು ಸುತ್ತುವರಿದಿರುವುದು ಸೆರೆಯಾಗಿದೆ. ಸುಪ್ರಿಯೋ ಅವರ ಕೂದಲು ಎಳೆದು ತಳ್ಳುವ ವಿಡಿಯೋಗಳನ್ನು ಹಂಚಿಕೊಂಡು ಬಿಜೆಪಿ ನಾಯಕರು ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಬಗ್ಗೆ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್ ಅವರು ಸುಪ್ರಿಯೋ ಅವರನ್ನು ಕ್ಯಾಂಪಸ್ನ ಹೊರಗೆ ಕರೆದುಕೊಂಡು ಹೋದರು. ಈ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಮಮತಾ ಸರ್ಕಾರದ ವಿರುದ್ಧ ಆಕ್ರೋಶ
ಘಟನೆ ನಡೆದು ಹಲವು ಗಂಟೆ ಉರುಳಿದರೂ ಯಾವುದೇ ಕ್ರಮ ತೆಗೆದುಕೊಳ್ಳದ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಸುಪ್ರಿಯೋ ಹರಿಹಾಯ್ದಿದ್ದಾರೆ.
'ಆರು ಗಂಟೆ ಉರುಳಿದರೂ ಮಮತಾ ಸರ್ಕಾರದಿಂದ ಯಾವುದೇ ಹೇಳಿಕೆ ಅಥವಾ ಕ್ರಮ ಕಂಡುಬಂದಿಲ್ಲ. ನಿಮ್ಮ ತರ್ಕವನ್ನು ನಿಮ್ಮ ಕೊಳಕು ರಾಜಕೀಯ ಆವರಿಸಿದೆ. ಉಪ ಕುಲಪತಿ ಬಯಸಿದ್ದರೆ ನಿಮ್ಮ ಎಸ್ಎಫ್ಐ ಗೂಂಡಾಗಳು 3 ಗಂಟೆಗೆ ದಾಂದಲೆ ಎಬ್ಬಿಸುವ ಮೊದಲೇ ಅದನ್ನು ನಿಯಂತ್ರಿಸಬಹುದಾಗಿತ್ತು. ಎಬಿವಿಪಿಯು ಈ ಕಾರ್ಯಕ್ರಮ ನಡೆಸಲು ವಿವಿಯ ಕುಲಸಚಿವರ ಅನುಮತಿ ಪಡೆದಿತ್ತು' ಎಂದು ಸುಪ್ರಿಯೋ ಅವರು ಟ್ವೀಟ್ ಮಾಡಿದ್ದಾರೆ.
ಘಟನೆ ಖಂಡಿಸಿ ಪ್ರತಿಭಟನೆ
'ನಾನಿಲ್ಲಿ ರಾಜಕೀಯ ಮಾಡಲು ಬಂದಿರಲಿಲ್ಲ. ಆದರೆ ನನ್ನನ್ನು ಎಳೆದಾಡಿದ ವಿವಿಯ ಕೆಲವು ವಿದ್ಯಾರ್ಥಿಗಳ ವರ್ತನೆಯಿಂದ ಬೇಸರವಾಗಿದೆ. ಅವರು ನನ್ನ ತಲೆಗೂದಲನ್ನು ಎಳೆದರು ಮತ್ತು ತಳ್ಳಿದರು' ಎಂದು ಅವರು ಗುರುವಾರ ರಾತ್ರಿ ಹೇಳಿದ್ದರು.
ಈ ಘಟನೆಯನ್ನು ಖಂಡಿಸಿ ಬಿಜೆಪಿ ಕೋಲ್ಕತಾದಲ್ಲಿ ಪ್ರತಿಭಟನೆ ನಡೆಸಿದೆ. ಪಕ್ಷದ ಕೇಂದ್ರ ಕಚೇರಿಯಿಂದ ಪ್ರತಿಭಟನಾ ರಾಲಿ ಆರಂಭಿಸಲಾಯಿತು. ಎಸ್ಎಫ್ಐ ಮತ್ತು ನಕ್ಸಲರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಯತು.
ಜೆಎನ್ಯು ವಿದ್ಯಾರ್ಥಿ ಚುನಾವಣೆ: ಎಡ ಮೈತ್ರಿಕೂಟ ಜಯಭೇರಿ, ಎಬಿವಿಪಿಗೆ ಮತ್ತೆ ನಿರಾಸೆ
ಪೊಲೀಸರು ವಿಫಲ: ರಾಜ್ಯಪಾಲರ ಕಿಡಿ
ಪಕ್ಷಪಾತಿ ಉದ್ದೇಶ ಹೊಂದಿರುವ ಜಾದವಪುರ ವಿವಿಗೆ ತೆರಳಿದ್ದರು ಎಂಬ ತಮ್ಮ ವಿರುದ್ಧದ ತೃಣಮೂಲ ಕಾಂಗ್ರೆಸ್ ಆರೋಪಕ್ಕೆ ಜಗದೀಪ್ ಧನಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿವಿಯ ಕುಲಪತಿಯಾಗಿ ಆವರಣಕ್ಕೆ ಭೇಟಿ ನೀಡುವ ಅಧಿಕಾರ ತಮಗೆ ಇದೆ ಎಂದು ಅವರು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ರಾಜ್ಯಪಾಲ/ಕುಲಪತಿ ಭೇಟಿ ನೀಡುವ ಸಂದರ್ಭದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಮಾಡುವುದರಲ್ಲಿ ರಾಜ್ಯ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ.
ಎಬಿವಿಪಿಯಿಂದಲೇ ಹಲ್ಲೆ: ಆರೋಪ
ಆದರೆ, ಸುಪ್ರಿಯೋ ಅವರೇ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಮೊದಲು ಎಳೆದಾಡಿದ್ದರು. ಎಬಿವಿಪಿ ಸದಸ್ಯರು ತಮ್ಮ ಮೇಲೆ ಹಲ್ಲೆ ನಡೆಸಿದ್ದರು. ಅದಕ್ಕಾಗಿ ಸುಪ್ರಿಯೋ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು ಎಂದು ಪ್ರತ್ಯಾರೋಪ ಮಾಡಲಾಗಿದೆ. ಹಲ್ಲೆಗೊಳಗಾಗಿ ರಕ್ತ ಸುರಿಯುತ್ತಿದ್ದ ಕೆಲವು ವಿದ್ಯಾರ್ಥಿಗಳು ಎಬಿವಿಪಿ ಸದಸ್ಯರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.