ಪ.ಬಂಗಾಲದಲ್ಲಿ ದೇಗುಲದ ಬಳಿ ಕಾಲ್ತುಳಿದಂಥ ಘಟನೆ; ಇಬ್ಬರು ಸಾವು
ಕೋಲ್ಕತ್ತಾ (ಪಶ್ಚಿಮ ಬಂಗಾಲ), ಆಗಸ್ಟ್ 23: ಪಶ್ಚಿಮ ಬಂಗಾಲದ ಉತ್ತರ 24 ಪರಗಣ ಜಿಲ್ಲೆಯ ದೇವಸ್ಥಾನದ ಬಳಿ ಶುಕ್ರವಾರ ಕಾಲ್ತುಳಿತದಂಥ ಸನ್ನಿವೇಶ ಸೃಷ್ಟಿಯಾಗಿ, ಇಬ್ಬರು ಸಾವನ್ನಪ್ಪಿದ್ದಾರೆ. 20 ಮಂದಿ ಗಾಯಗೊಂಡಿದ್ದಾರೆ. ಮೃತರ ಕುಟುಂಬದವರಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಐದು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ಕಛುವಾ ಲೋಕ್ ನಾಥ್ ದೇವಾಲಯದ ಬಳಿ ಈ ಘಟನೆ ಸಂಭವಿಸಿದೆ. ಈ ವರ್ಷ ದೇವಾಲಯದ ಬಳಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಬೆಳಂಬೆಳಗ್ಗೆ ಭಾರೀ ಮಳೆ ಶುರು ಆಯಿತು. ಬಿದಿರಿನಿಂದ ಮಾಡಿದ ರಚನೆ ಅಡಿಯಲ್ಲಿ ನಿಲ್ಲಲು ಏಕಾಏಕಿ ತೆರಳಿದ್ದಾರೆ. ಆ ವೇಳೆ ಆ ಬಿದಿರಿನ ರಚನೆ ಮಳೆಗೆ ಕುಸಿದಿದೆ.
Recommended Video
ಮಗು ಎತ್ತಿಕೊಂಡು, 'ಚಾಯ್ ವಾಲಿ'ಯಾದ ಮಮತಾ ದೀದಿ!
ಈ ಸ್ಥಳ ಕಿರಿದಾಗಿದ್ದು, ಜನರ ಸಂಖ್ಯೆ ಕೂಡ ಹೆಚ್ಚಾಗಿತ್ತು. ದೇವಸ್ಥಾನದ ಬಳಿಯೇ ಇರುವ ಕೆರೆಯಲ್ಲಿ ಕೆಲವರು ಈ ವೇಳೆ ಬಿದ್ದಿದ್ದಾರೆ. ಇದರಿಂದ ಗೊಂದಲ ಸೃಷ್ಟಿಯಾಗಿ ಕಾಲ್ತುಳಿತದಂಥ ಸನ್ನಿವೇಶ ಸೃಷ್ಟಿಯಾಗಿದೆ. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.
ರಕ್ಷಣಾ ಕಾರ್ಯಗಳು ವೇಗವಾಗಿ ನಡೆಯುತ್ತಿವೆ. ಮೃತರ ಕುಟುಂಬದವರಿಗೆ ಐದು ಲಕ್ಷ ನೀಡಲಾಗಿದೆ. ತೀವ್ರವಾಗಿ ಗಾಯಗೊಂಡವರಿಗೆ ಒಂದು ಲಕ್ಷ ಹಾಗೂ ಇತರ ಗಾಯಾಳುಗಳಿಗೆ ಐವತ್ತು ಸಾವಿರ ಪರಿಹಾರ ನೀಡುವುದಾಗಿ ಘೋಷಿಸಲಾಗಿದೆ. ಈ ದೇಗುಲದಲ್ಲಿ ಪ್ರತಿ ವರ್ಷದ ಈ ದಿನ ಲೋಕ್ ನಾಥ್ ಬ್ರಹ್ಮಚಾರಿಯ ಜನ್ಮ ವರ್ಷಾಚರಣೆಗಾಗಿ ಲಕ್ಷಗಟ್ಟಲೆ ಜನರು ಸೇರುತ್ತಾರೆ.