ಸೀರೆ ಧರಿಸಿ ಫುಟ್ಬಾಲ್ ಆಡಿದ ಸಂಸದೆ ಮಹುವಾ ಮೊಯಿತ್ರಾ, ನೆಟ್ಟಿಗರ ಮೆಚ್ಚುಗೆ
ಕೋಲ್ಕತ್ತಾ, ಸೆ 18: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಸೋಮವಾರ ಪಶ್ಚಿಮ ಬಂಗಾಳದ ಕೃಷ್ಣಾನಗರ ಎಂಪಿ ಕಪ್ ಟೂರ್ನಮೆಂಟ್ನಲ್ಲಿ ಸೀರೆಯಲ್ಲಿ ಫುಟ್ಬಾಲ್ ಆಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಕೃಷ್ಣನಗರ ಎಂಪಿ ಕಪ್ ಟೂರ್ನಮೆಂಟ್ 2022 ರಲ್ಲಿ ಸೀರೆ ಧರಿಸಿರುವ ಮಹುವಾ ಮೊಯಿತ್ರಾ ಫುಟ್ಬಾಲ್ ಆಡಿದ್ದಾರೆ. ನಾಡಿಯಾ ಜಿಲ್ಲೆಯ ಕೃಷ್ಣನಗರದ ತೃಣಮೂಲ ಕಾಂಗ್ರೆಸ್ ಸಂಸದೆ ಟ್ವೀಟ್ನಲ್ಲಿ ಈ ಚಿತ್ರಗಳನ್ನು ಹಂಚಿಕೊಂಡಿದ್ದು, ಅವುಗಳನ್ನು ಕೃಷ್ಣನಗರ ಎಂಪಿ ಕಪ್ ಟೂರ್ನಮೆಂಟ್ 2022 ರ ಫೈನಲ್ನ ಮೋಜಿನ ಕ್ಷಣಗಳು ಎಂದಿದ್ದಾರೆ.
ಮೊಯಿತ್ರಾ ಅವರು ಟ್ವಿಟ್ಟರ್ನಲ್ಲಿ ಅಪ್ಲೋಡ್ ಮಾಡಿದ ಚಿತ್ರಗಳಲ್ಲಿ, ಅವರು ಕೆಂಪು-ಕಿತ್ತಳೆ ಬಣ್ಣದ ಸೀರೆ ಧರಿಸಿದ್ದು, ಸ್ಪೋಟ್ಸ್ ಬೂಟುಗಳು ಮತ್ತು ಸನ್ಗ್ಲಾಸ್ಗಳನ್ನು ಧರಿಸಿದ್ದಾರೆ. ಎರಡು ಚಿತ್ರಗಳನ್ನು ಹಂಚಿಕೊಂಡಿದ್ದು, ಮೊದಲ ಚಿತ್ರದಲ್ಲಿ ಆಕೆ ಚೆಂಡನ್ನು ಒದೆಯುತ್ತಿದ್ದು, ಎರಡನೇ ಚಿತ್ರದಲ್ಲಿ ಆಕೆ ಗೋಲ್ಕೀಪರ್ ಆಗಿದ್ದಾರೆ.
ಚಿತ್ರಗಳಿಗೆ "ಕೃಷ್ಣನಗರ ಎಂಪಿ ಕಪ್ ಟೂರ್ನಮೆಂಟ್ 2022 ರ ಫೈನಲ್ನ ಮೋಜಿನ ಕ್ಷಣಗಳು. ಮತ್ತೆ ನಾನು ಸೀರೆಯಲ್ಲಿ ಆಡುತ್ತೇನೆ" ಎಂದು ಸಂಸದೆ ಬರೆದುಕೊಂಡಿದ್ದಾರೆ.
ಸಂಸದೆ ಸೀರೆ ಉಟ್ಟುಕೊಂಡು ಆಟವಾಡುತ್ತಿರುವುದನ್ನು ನೋಡಿ ಸಾಮಾಜಿಕ ಜಾಲತಾಣಗಳ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದರು.
ಅವರಲ್ಲಿ ರಾಜಕಾರಣಿ ಮತ್ತು ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಕೂಡ ಒಬ್ಬರು. "ಕೂಲ್, ಲವ್ ದಿ ಶಾಟ್" ಎಂದು ಶರ್ಮಿಷ್ಠಾ ಮುಖರ್ಜಿ ಬರೆದಿದ್ದಾರೆ. ಇತರರು ಸಹ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಮೆಚ್ಚಿಕೊಂಡಿದ್ದಾರೆ.
"ಇದು ಅದ್ಭುತವಾಗಿದೆ, ನೀವು ಶ್ಲಾಘನೀಯ ವ್ಯಕ್ತಿ" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬರು ಹೇಳಿದರು, "ಫುಟ್ಬಾಲ್ ಮತ್ತು ಸೀರೆ ಪರಸ್ಪರ ಕಠಿಣ ಸ್ಪರ್ಧಿಗಳು. ಆದರೆ, ನೀವು ಅದನ್ನು ಸುಲಭವಾಗಿ ಕಾಣುವಂತೆ ಮಾಡಿದ್ದೀರಿ" ಎಂದಿದ್ದಾರೆ.
Fun moments from the final of the Krishnanagar MP Cup Tournament 2022.
— Mahua Moitra (@MahuaMoitra) September 19, 2022
And yes, I play in a saree. pic.twitter.com/BPHlb275WK
ರಾಜಕಾರಣಿಗಳು ಕ್ರೀಡೆ ಮತ್ತು ಸಕ್ರಿಯ ಜೀವನಶೈಲಿಯನ್ನು ಉತ್ತೇಜಿಸುವುದನ್ನು ನೋಡಿ ಕೆಲವರು ಸಂತೋಷಪಟ್ಟಿದ್ದಾರೆ.
ಸಂಸದೆ ಮಹುವಾ ಮೊಯಿತ್ರಾ ಅವರು ಫುಟ್ಬಾಲ್ ಮೈದಾನದಲ್ಲಿ ಸೀರೆಯಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ತೃಣಮೂಲ ಕಾಂಗ್ರೆಸ್ ಖೇಲಾ ಹೋಬ್ ದಿಬಾಸ್ ಅನ್ನು ಆಚರಿಸಿದಾಗ ಮತ್ತು ಕ್ರೀಡೆಗಳನ್ನು ಉತ್ತೇಜಿಸಲು ಪಶ್ಚಿಮ ಬಂಗಾಳದಾದ್ಯಂತ ಪಂದ್ಯಗಳನ್ನು ಆಯೋಜಿಸಿದಾಗ ಅವರು ಈ ಹಿಂದೆ ಫುಟ್ಬಾಲ್ ಆಡುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಮಹುವಾ ಮೊಯಿತ್ರಾ ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ ಲೋಕಸಭೆಯ ಸದಸ್ಯರಾಗಿದ್ದಾರೆ. ದೇಶಾದ್ಯಂತ ಮೋದಿ ಅಲೆಯ ನಡುವೆಯೂ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಇಲ್ಲಿ ಗೆಲುವು ದಾಖಲಿಸಿದ್ದರು. ಅವರು 2016-2019 ರವರೆಗೆ ಕರೀಂಪುರದಿಂದ ಶಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ.
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ರಾಷ್ಟ್ರೀಯ ವಕ್ತಾರರಾಗಿ ಸೇವೆ ಸಲ್ಲಿಸಿದ್ದಾರೆ. ರಾಜಕೀಯಕ್ಕೆ ಸೇರುವ ಮೊದಲು ಅವರು ಬ್ಯಾಂಕರ್ ಆಗಿ ಕೆಲಸ ಮಾಡುತ್ತಿದ್ದರು.