ಬೋಧ್ ಗಯಾ, ಬುರ್ದ್ವಾನ್ ಸ್ಫೋಟಕ್ಕೆ ಕಾರಣನಾದ ಉಗ್ರ ಸೆರೆ
ಕೋಲ್ಕತಾ, ಮೇ 29: ಬುರ್ದ್ವಾನ್, 2018ರ ಬೋಧ್ ಗಯಾ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಉಗ್ರನನ್ನು ಮುರ್ಷಿದಾಬಾದಿನಲ್ಲಿ ಶುಕ್ರವಾರದಂದು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Recommended Video
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಸೂಟಿ ಎಂಬಲ್ಲಿ ಅಡಗುತಾಣದಲ್ಲಿದ್ದ ಮೋಸ್ಟ್ ವಾಂಟೆಡ್ ಉಗ್ರ ಅಬ್ದುಲ್ ಕರೀಮ್ನನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಈತ ಬಾಂಗ್ಲಾದೇಶ ಭಯೋತ್ಪಾದಕ ಸಂಘಟನೆ ಜಮಾತ್-ಉಲ್ ಮುಜಾಹಿದ್ದೀನ್ ಸಕ್ರಿಯ ಸದಸ್ಯನಾಗಿದ್ದಾನೆ.
ಪಶ್ಚಿಮ ಬಂಗಾಳದಲ್ಲಿ ಸ್ಫೋಟ: ದೊಡ್ಡಬಳ್ಳಾಪುರದಲ್ಲಿ ಉಗ್ರನ ಬಂಧನ
ಕೋಲ್ಕತ್ತಾ ಪೊಲೀಸರ ಸ್ಪೆಷಲ್ ಟಾಸ್ಕ್ ಫೋರ್ಸ್(STF), ಮುರ್ಷಿದಾಬಾದ್ ಪೊಲೀಸರ ಜಂಟಿ ಕಾರ್ಯಾಚಾರಣೆಯಲ್ಲಿ ಈ ಉಗ್ರ ಸೆರೆಸಿಕ್ಕಿದ್ದಾನೆ. ಉಗ್ರನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.
ಜಮಾತ್-ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ ಸಂಘಟನೆಯ ಪ್ರಮುಖ ಸದಸ್ಯ ಅಬ್ದುಲ್ ಕರೀಂ ಅಲಿಯಾಸ್ ಬೊರೊ ಕರೀಂಗಾಗಿ 2018ರಿಂದ ಪೊಲೀಸರು ಬಲೆ ಬೀಸಿದ್ದರು. 2018ರಲ್ಲಿ ಮುರ್ಷಿದಾಬಾದ್ ನಲ್ಲೇ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಸ್ಫೋಟಕ ವಸ್ತುಗಳು ಪತ್ತೆಯಾಗಿತ್ತು, ಆದರೆ, ಕರೀಂ ತಪ್ಪಿಸಿಕೊಂಡಿದ್ದ.
ಎನ್ಐಎ ಚಾರ್ಜ್ ಶೀಟ್ ನಲ್ಲಿ ಹೆಸರಿರಲಿಲ್ಲ
2018 ಬೋಧ್ ಗಯಾ ಸ್ಫೋಟ ಪ್ರಕರಣ, ಪಶ್ಚಿಮ ಬಂಗಾಲದ ಬುರ್ಧ್ವಾನ್ ಸ್ಫೋಟ ಪ್ರಕರಣದ ತನಿಖೆ ಕೈಗೊಂಡಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ( NIA) ತಯಾರಿಸಿದ ದೋಷಾರೋಪಣ ಪಟ್ಟಿಯಲ್ಲಿ ಕರೀಂ ಹೆಸರಿಲ್ಲದಿರುವುದು ಅಚ್ಚರಿ ಮೂಡಿಸಿತ್ತು. ಆದರೆ, ಹಲವು ವಿಧ್ವಂಸಕ ಕೃತ್ಯಗಳಿಗೆ ಕಾರಣರಾದ ಟಾಪ್ 3 ಜೆಎಂಬಿ ಉಗ್ರರರಲ್ಲಿ ಈತನೂ ಒಬ್ಬ.
ಸುಮಾರು 1500 ವರ್ಷ ಇತಿಹಾಸವುಳ್ಳ ಮಹಾಬೋಧಿ ದೇಗುಲದಲ್ಲಿ 2018ರಲ್ಲಿ ಕಡಿಮೆ ತೀವ್ರತೆಯುಳ್ಳ ಸ್ಫೋಟ ಸಂಭವಿಸಿತ್ತು. ಇದರಲ್ಲಿ 9 ಮಂದಿ ಬೌದ್ಧ ಭಿಕ್ಕುಗಳು ಗಾಯಗೊಂಡಿದ್ದರು. ದೇಗುಲದ ಒಳಭಾಗ ಚೈತ್ಯಗಾರ, ಭಗವಾನ್ ಬುದ್ಧನಿಗೆ ಜ್ಞಾನೋದಯ ಉಂಟಾದ ಸ್ಥಳ ಎಂದೇ ನಂಬಲಾಗಿರುವ ಬೋಧಿ ವೃಕ್ಷ ಸುರಕ್ಷಿತವಾಗಿತ್ತು.