ನಾನು ಜನ್ಮತಃ ಮುಸ್ಲಿಮಳು: ಫತ್ವಾಕ್ಕೆ ನುಸ್ರತ್ ಜಹಾನ್ ತಿರುಗೇಟು
ನವದೆಹಲಿ, ಜುಲೈ 4: ನೂತನವಾಗಿ ಸಂಸತ್ಗೆ ಆಯ್ಕೆಯಾದ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಅವರು ಪ್ರಮಾಣ ವಚನ ಸ್ವೀಕಾರದ ವೇಳೆ ಹಣೆಗೆ ಸಿಂಧೂರ ಇಟ್ಟು, ಮಂಗಳ ಸೂತ್ರ ಧರಿಸಿದ್ದಕ್ಕೆ ತಮ್ಮ ವಿರುದ್ಧ ಕಿಡಿಕಾರಿದ್ದ ಮುಸ್ಲಿಂ ಧಾರ್ಮಿಕ ಮುಖಂಡರಿಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ.
ತಮ್ಮ ವಿರುದ್ಧ ಫತ್ವಾ ಹೊರಡಿಸಿರುವುದರ ಕುರಿತು ಪ್ರತಿಕ್ರಿಯೆ ನೀಡಿದ ಅವರು, 'ಆಧಾರರಹಿತ ಸಂಗತಿಗಳಿಗೆ ಗಮನ ಕೊಡಬೇಡಿ. ನನಗೆ ನನ್ನ ಧರ್ಮದ ಬಗ್ಗೆ ತಿಳಿದಿದೆ. ನಾನು ಹುಟ್ಟಿನಿಂದಲೂ ಮುಸ್ಲಿಮಳು. ಈಗಲೂ ಮುಸ್ಲಿಂ. ಇದು ನಂಬಿಕೆಯ ವಿಚಾರ. ಅದನ್ನು ನಿಮ್ಮ ಹೃದಯದಲ್ಲಿ ಅನುಭವಿಸಬೇಕು, ತಲೆಯಲ್ಲಿ ಅಲ್ಲ' ಎಂದು ಹೇಳಿದರು.
ರಥಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಸಂಸದೆ ನುಸ್ರತ್ ರನ್ನು ಆಹ್ವಾನಿಸಿದ ಇಸ್ಕಾನ್
ಅಲ್ಲದೆ, ಪಶ್ಚಿಮ ಬಂಗಾಳದಲ್ಲಿ ವಾರ್ಷಿಕ ರಥಯಾತ್ರೆ ನಡೆಸುತ್ತಿರುವುದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ನುಸ್ರತ್ ಬೆಂಬಲಿಸಿದ್ದಾರೆ. 'ಮಮತಾ ಅವರು ಈದ್ನಲ್ಲಿ ಭಾಗವಹಿಸಿದ್ದರು. ನಮ್ಮೊಂದಿಗೆ ನಿಂತಿದ್ದರು. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಇದು ನಂಬಿಕೆ ಮತ್ತು ವಿಶ್ವಾಸಕ್ಕೆ ಸಂಬಂಧಿಸಿದ್ದು. ರಾಜಕೀಯ ಮತ್ತು ಧರ್ಮವನ್ನು ಹೊರಗಿಡೋಣ' ಎಂದು ಹೇಳಿದ್ದಾರೆ.
ಬೆಂಗಾಲಿ ನಟಿಯಾದ ನುಸ್ರತ್ ಜಹಾನ್ ಅವರು ಉದ್ಯಮಿ ನಿಖಿಲ್ ಜೈನ್ ಅವರನ್ನು ಮದುವೆಯಾಗಿದ್ದರು. ಲೋಕಸಭೆಯಲ್ಲಿ ಸಂಸದೆಯಾಗಿ ಅವರು ತಡವಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಹಣೆಗೆ ಸಿಂಧೂರ ಇಟ್ಟಿದ್ದಕ್ಕೆ ಸಂಸದೆ ನುಸ್ರತ್ ಜಹಾನ್ ವಿರುದ್ಧ ಫತ್ವಾ
ತಮ್ಮ ಧಾರ್ಮಿಕ ನಿಲುವುಗಳನ್ನು ನಿರ್ಭಿಡೆಯಿಂದ ವ್ಯಕ್ತಪಡಿಸುತ್ತಿರುವ ನುಸ್ರತ್ ಅವರನ್ನು ಕೋಲ್ಕತಾದಲ್ಲಿ ಆಯೋಜಿಸಿದ್ದ ರಥಯಾತ್ರಾಗೆ ಇಸ್ಕಾನ್ ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಿತ್ತು. ಇದನ್ನು ಒಪ್ಪಿಕೊಂಡು ಅವರು ಭಾಗವಹಿಸಿದ್ದರು.
'ಮದುವೆ ಎನ್ನುವುದು ನನ್ನ ವೈಯಕ್ತಿಕ ವಿಚಾರ. ಅದರಿಂದ ಎಲ್ಲರೂ ಸಂತಸಪಟ್ಟಿರುವುದು ಖುಷಿ ನೀಡಿದೆ. ನನ್ನ ಹಣೆಯಲ್ಲಿ ಸಿಂಧೂರ ಇರುವುದಕ್ಕೆ ಅನೇಕರು, ನಾನು ಹಿಂದೂವನ್ನು ಮದುವೆಯಾಗಿದ್ದಕ್ಕೆ ಮತಾಂತರ ಹೊಂದಿದ್ದೇನೆಯೇ ಎಂದು ಪ್ರಶ್ನಿಸಿದ್ದರು. ಆದರೆ, ನಮಗೆಲ್ಲರಿಗೂ ನಮ್ಮ ಧರ್ಮವನ್ನು ಆಯ್ಕೆ ಮಾಡುವ ಹಕ್ಕು ಇದೆ ಎಂದು ನನ್ನ ಭಾವನೆ. ನಾನು ಹುಟ್ಟಿನಿಂದ ಇಸ್ಲಾಂ ಆಯ್ದುಕೊಂಡಿದ್ದೆ. ಅದನ್ನು ಅನುಸರಿಸುತ್ತೇನೆ. ಆದರೆ ಎಲ್ಲ ಧರ್ಮಗಳು ಮತ್ತು ಅವರ ಆಚರಣೆಗಳನ್ನು ಗೌರವಿಸುತ್ತೇನೆ. ನಾನು ಮತ್ತು ನನ್ನ ಗಂಡ ನಮ್ಮ ನಮ್ಮ ಧರ್ಮಗಳನ್ನು ಪಾಲಿಸುತ್ತೇವೆ. ಇದು ದಿಟ್ಟ ನಡೆ ಎಂದೇನೂ ಭಾವಿಸುವುದಿಲ್ಲ. ಸಹಜವಷ್ಟೇ' ಎಂದು ನುಸ್ರತ್ ಹೇಳಿದ್ದಾರೆ.