ವಲಸಿಗರನ್ನು ಓಲೈಸಲು ಟಿಎಂಸಿಯಿಂದ ಸೂರ್ಯ ದೇಗುಲ ನಿರ್ಮಾಣ!
ಕೊಲ್ಕೊತಾ, ನವೆಂಬರ್ 28: ದಕ್ಷಿಣ ಬಂಗಾಳದ ಅಸನ್ಸೋಲ್ ನಲ್ಲಿ ಸುಮಾರು 10 ಸೂರ್ಯದೇವಾಲಯಗಳನ್ನು ನಿರ್ಮಿಸಲು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿ.ಎಂ.ಸಿ.) ಮುಂದಾಗಿದೆ.
ದೇವಾಲಯದ ನಿರ್ಮಾಣವನ್ನು ತ್ವರಿತವಾಗಿ ಕೈಗೊಳ್ಳಲಾಗುವುದು ಎಂದು ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಅಸನ್ಸೋಲ್ ಪಾಲಿಕೆಯ ಮೇಯರ್ ಜಿತೇಂದ್ರ ಕುಮಾರ್ ಭರವಸೆ ನೀಡಿದ್ದಾರೆ. ಬಿಜೆಪಿ ವಿರುದ್ಧ ಮೃದು ಹಿಂದುತ್ವ'ದ ಅಸ್ತ್ರ ಬಳಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ರಾಜಕೀಯ ವಲಯದಲ್ಲಿ ಮಾತುಗಳು ಕೇಳಿ ಬಂದಿದೆ.
ಚಂದ್ರಬಾಬು ನಾಯ್ಡು-ಮಮತಾ ಸಭೆ: ಮೊದಲ ಸಂದೇಶ ಬಿಜೆಪಿಗಲ್ಲ, ರಾಹುಲ್ಗೆ!
ಬಿಹಾರ ಹಾಗೂ ಜಾರ್ಖಂಡ್ ರಾಜ್ಯಗಳಿಂದ ವಲಸೆ ಬಂದಿರುವ ಹಿಂದೂಗಳು ಹೆಚ್ಚಾಗಿರುವ ದಕ್ಷಿಣ ಬಂಗಾಳದ ಐದು ಲೋಕಸಭಾ ಕ್ಷೇತ್ರಗಳಲ್ಲಿ ತನ್ನ ಪ್ರಭುತ್ವ ಸ್ಥಾಪಿಸಲು ತೃಣಮೂಲ ಕಾಂಗ್ರೆಸ್ ಯತ್ನಿಸುತ್ತಿದೆ. ದೇಗುಲ ಸ್ಥಾಪನೆ ಮೂಲಕ ಮತಗಳನ್ನು ಸೆಳೆಯಲು ಈ ಕ್ರಮ ನೆರವಾಗಲಿದೆ.
ದುರ್ಗಾಪುರ - ಅಸನ್ಸೋಲ್ ಪ್ರದೇಶದಲ್ಲಿ ಹಿಂದಿ ಭಾಷಿಗರ ಸಂಖ್ಯೆ ಹೆಚ್ಚಾಗಿದೆ. ದೊಡ್ಡ ಸಂಖ್ಯೆಯಲ್ಲಿ ಜನರು ಛಾತ್ ಪೂಜೆ ಕೈಗೊಳ್ಳುತ್ತಾರೆ. ಅವರನ್ನು ಸಂಪರ್ಕಿಸಲು ನಾವು 10 ಸೂರ್ಯ ದೇವಾಲಯಗಳನ್ನು ನಿರ್ಮಿಸಲಾಗುವುದು ಎಂದು ತಿವಾರಿ ಹೇಳಿದ್ದಾರೆ. ಅವರು ಛಾತ್ ಪೂಜಾಸಮನ್ವಯ ಸಮಿತಿ ಅಧ್ಯಕ್ಷರೂ ಆಗಿದ್ದಾರೆ. ದೇವಾಲಯದ ವಿನ್ಯಾಸವನ್ನು ಡಿಸೆಂಬರ್ ನಲ್ಲಿ ರೂಪಿಸಲಾಗುವುದು. ಇವುಗಳ ನಿರ್ಮಾಣಕ್ಕೆ 2 ಕೋಟಿ ರೂ. ವೆಚ್ಚವಾಗಲಿದೆ ಎಂದು ಹೇಳಿದ್ದಾರೆ.
ದೇವಾಲಯಗಳ ನಿರ್ಮಾಣಕ್ಕಾಗಿ ನಾವು ಸ್ಥಳೀಯವಾಗಿ ನಿಧಿ ಸಂಗ್ರಹ ಆರಂಭಿಸಿದ್ದೇವೆ. ಈ ದೇವಾಲಯಗಳಿಗೆ ಅಗತ್ಯವಾದ ರಸ್ತೆ ಹಾಗೂ ವಿದ್ಯುತ್ ಇತ್ಯಾದಿ ವ್ಯವಸ್ಥೆಗಳನ್ನು ಅಸನ್ಸೋಲ್ ಪಾಲಿಕೆ ಒದಗಿಸಲಿದೆ ಎಂದಿದ್ದಾರೆ.
ಲೋಕಸಭೆ ಚುನಾವಣೆ ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಹೆಚ್ಚಲಿದೆ ಬಿಜೆಪಿ ಹವಾ
ಅಸನ್ಸೋಲ್ - ದುರ್ಗಾಪುರ ವಲಯ ರಾಜಕೀಯ ಹಾಗೂ ಕೋಮು ಸೂಕ್ಷ್ಮವಾಗಿದೆ. 2014ರಲ್ಲಿ ಈ ಕ್ಷೇತ್ರದಲ್ಲಿ ಗಾಯಕ ಕಮ್ ರಾಜಕಾರಣಿ ಬಿಜೆಪಿಯ ಬಾಬುಲ್ ಸುಪ್ರಿಯೋ ಅಚ್ಚರಿ ರೀತಿಯಲ್ಲಿ ಗೆಲುವು ಸಾಧಿಸಿದ್ದರು.
ಕಳೆದ ಮಾರ್ಚ್ - ಏಪ್ರಿಲ್ ತಿಂಗಳಲ್ಲಿ ಅಸನ್ಸೋಲ್ ನಲ್ಲಿ ರಾಮ ನವಮಿ ಸಂಭ್ರಮದ ವೇಳೆ ಕೋಮು ಗಲಭೆಗಳೂ ನಡೆದಿದ್ದವು. ಈ ಪ್ರದೇಶದಲ್ಲಿ ಬಿಜೆಪಿ ಬೆಳವಣಿಗೆ ತಡೆಯಲು ತೃಣಮೂಲ ಕಾಂಗ್ರೆಸ್ ಮಂದಿರ ರಾಜಕೀಯ ನಡೆಸಲು ಮುಂದಾಗಿದೆ ಎನ್ನಲಾಗುತ್ತಿದೆ.