ರಾಜ್ಯಪಾಲರನ್ನು ಕಿತ್ತುಹಾಕಿ: ರಾಷ್ಟ್ರಪತಿಗೆ ಪಶ್ಚಿಮ ಬಂಗಾಳ ಸಂಸದರ ಪತ್ರ
ಕೋಲ್ಕತಾ, ಡಿಸೆಂಬರ್ 30: ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಅವರನ್ನು ಕೂಡಲೇ ಹುದ್ದೆಯಿಂದ ಕಿತ್ತುಹಾಕುವಂತೆ ಒತ್ತಾಯಿಸಿ ತೃಣಮೂಲ ಕಾಂಗ್ರೆಸ್ನ ಐವರು ಸಂಸದರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ. ಕಳೆದ ವರ್ಷ ಧನಕರ್ ಅವರು ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ನೇಮಕವಾದ ಸಂದರ್ಭದಿಂದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಜತೆ ಅನೇಕ ಬಾರಿ ಮಾತಿನ ಸಂಘರ್ಷ ನಡೆಸಿದ್ದಾರೆ.
'ರಾಜ್ಯಪಾಲರು ಸಂವಿಧಾನವನ್ನು ಉಳಿಸುವ, ರಕ್ಷಿಸುವ ಮತ್ತು ಸಮರ್ಥಿಸುವುದರಲ್ಲಿ ವಿಫಲರಾಗಿದ್ದಾರೆ ಹಾಗೂ ಸುಪ್ರೀಂಕೋರ್ಟ್ ಘೋಷಿಸಿರುವ ಕಾನೂನುಗಳನ್ನು ಪದೇ ಪದೇ ಉಲ್ಲಂಘಿಸುತ್ತಿದ್ದಾರೆ. ರಾಜ್ಯದ ಅತ್ಯಂತ ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತಿರುವ ಧನಕರ್ ಅವರು, ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳು ರಾಜಕೀಯ ವಿರೋಧಿಗಳು ಎಂಬ ಕಾರಣಕ್ಕೆ ವಿಭಜನೆಯ ರಾಜಕೀಯದಲ್ಲಿ ತೊಡಗಿದ್ದಾರೆ' ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.
ಮೊದಲು 30 ಸೀಟು ಗೆದ್ದು ನೋಡಿ; ಬಿಜೆಪಿಗೆ ದೀದಿ ದೊಡ್ಡ ಸವಾಲು
ಟಿಎಂಸಿ ಸಂಸದರಾದ ಸುಖೇಂದು ಶೇಖರ್ ರೇ ಈ ಮನವಿ ಪತ್ರ ಸಿದ್ಧಪಡಿಸಿದ್ದು, ಇದಕ್ಕೆ ಸುದೀಪ್ ಬಂಡೋಪಾಧ್ಯಾಯ, ಡೆರೆಕ್ ಓಬ್ರಿಯನ್, ಕಲ್ಯಾಣ್ ಬ್ಯಾನರ್ಜಿ ಮತ್ತು ಕಕೊಳಿ ಘೋಷ್ ದಸ್ತಿದಾರ್ ಬೆಂಬಲ ನೀಡಿದ್ದಾರೆ.
'ಧನಕರ್ ಅವರು ಇತ್ತೀಚೆಗೆ ನೀಡಿರುವ ಕೆಲವು ಮಾತುಗಳು/ಗೊಣಗಾಟ/ಟ್ವೀಟ್ಗಳು/ಮಾಧ್ಯಮ ಹೇಳಿಕೆಗಳು ಪಶ್ಚಿಮ ಬಂಗಾಳ ಸರ್ಕಾರ, ಗೌರವಾನ್ವಿತ ಮುಖ್ಯಮಂತ್ರಿ ಮತ್ತು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ವಿರುದ್ಧವಾಗಿದ್ದು, ಇವು ಸಾಂವಿಧಾನಿಕ ನಿಯಮಗಳು, ನೀತಿ ಸಂಹಿತೆಗಳನ್ನು ಕಡೆಗಣಿಸುವುದು ಸ್ಪಷ್ಟವಾಗಿದೆ. ಅವರ ಕೆಲವು ಹೇಳಿಕೆಗಳು ಪ್ರಚೋದನಾಕಾರಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳಿಗೆ ಎಡೆಮಾಡಿಕೊಡುವಂತಹ ರೀತಿಯಲ್ಲಿವೆ' ಎಂದು ದೂರಲಾಗಿದೆ.