ನಿಮ್ಮ ಕೆಲಸ ಮಾಡಿ, ಇಲ್ಲವೇ ಬಾಯಿ ಮುಚ್ಚಿಕೊಂಡಿರಿ; ಅಮಿತ್ ಶಾ ವಿರುದ್ಧ ಟಿಎಂಸಿ ಸಂಸದೆ ವಾಗ್ದಾಳಿ
ಕೋಲ್ಕತ್ತಾ, ಮಾರ್ಚ್ 26: ಅಕ್ರಮ ನುಸುಳುಕೋರರು ಪಶ್ಚಿಮ ಬಂಗಾಳ ಜನರ ಪಡಿತರ ಹಾಗೂ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂಬ ಹೇಳಿಕೆಗೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಿಡಿಕಾರಿದ್ದಾರೆ.
ಪುರುಲಿಯಾದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಅಮಿತ್ ಶಾ ಈ ಹೇಳಿಕೆ ನೀಡಿದ್ದರು. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮೊಯಿತ್ರಾ, "ಭಾರತಕ್ಕಿಂತ ಬಾಂಗ್ಲಾ ಆರ್ಥಿಕತೆ ಉತ್ತಮವಾಗಿದೆ. ಪಡಿತರ ಹಾಗೂ ಹಕ್ಕನ್ನು ಮರಳಿ ತನ್ನಿ" ಎಂದಿದ್ದಾರೆ.
"ಅಸ್ಸಾಂನಲ್ಲಿ ಕಾಂಗ್ರೆಸ್-ಎಐಯುಡಿಎಫ್ ಗೆದ್ದರೆ ಒಳನುಸುಳುವಿಕೆ ಹೆಚ್ಚು"
ಸಂಸತ್ತಿನಲ್ಲಿ ನುಸುಳುಕೋರರ ಸಂಖ್ಯೆಯನ್ನು ಪ್ರಸ್ತುತಪಡಿಸಲು ಭಾರತ ಸರ್ಕಾರ ವಿಫಲವಾಗಿದೆ. ಬಂಗಾಳಿಗಳು ಬಾಂಗ್ಲಾದೊಂದಿಗೆ ಗಡಿ ಮತ್ತು ಆತ್ಮವನ್ನು ಹಂಚಿಕೊಂಡಿದ್ದಾರೆ. ಹೀಗೆ ಮಾತನಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಗಡಿ ಭದ್ರತಾ ಪಡೆ, ಸಶಸ್ತ್ರ ಸೀಮಾ ಬಲ, ಇಂಡೋ ಟಿಬೆಟನ್ ಗಡಿ ಪೊಲೀಸ್ ಹಾಗೂ ಅಸ್ಸಾಂ ರೈಫಲ್ಗಳನ್ನು ನಿರ್ವಹಿಸುವ ಗೃಹ ಸಚಿವರು ಆಪಾದಿತ "ಒಳನುಸುಳುವಿಕೆ" ಕುರಿತು ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. ಕೆಲವು ಜನರು ತಮ್ಮ ಕೆಲಸವನ್ನು ಉತ್ತಮವಾಗಿ ಮಾಡಬೇಕು ಇಲ್ಲವೇ ಬಾಯಿ ಮುಚ್ಚಿಕೊಂಡಿರಬೇಕು ಎಂದು ಕಿಡಿಕಾರಿದ್ದಾರೆ.
ಗುರುವಾರ ಪುರುಲಿಯಾದ ಚುನಾವಣಾ ಸಮಾವೇಶದಲ್ಲಿ ಭಾಗವಹಿಸಿದ್ದ ಅಮಿತ್ ಶಾ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಮಾತನಾಡಿದ್ದರು. ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡುವಲ್ಲಿ ಸೋತಿದ್ದಾರೆ. ಇಲ್ಲಿನ ಜನರು ಬಿಜೆಪಿಗೆ ಮತ ಹಾಕಿದರೆ ಜನಪರ ಯೋಜನೆಗಳನ್ನು ಜಾರಿಗೆ ತಂದು ಅಸಮರ್ಥ ಟಿಎಂಸಿ ಸರ್ಕಾರದ ಮುಖ ಪರಿಚಯಿಸುತ್ತೇವೆ ಎಂದು ಹೇಳಿದ್ದರು. ಪುರುಲಿಯಾದ ಕುರ್ಮಿ ಸಮುದಾಯದ ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗ ನೀಡುವುದಾಗಿ ಹಾಗೂ ಜಂಗಲ್ ಮಹಲ್ ಪ್ರದೇಶದಲ್ಲಿ ಏಮ್ಸ್ ಆಸ್ಪತ್ರೆ ನಿರ್ಮಾಣ ಮಾಡುವ ಭರವಸೆ ನೀಡಿದ್ದರು.
ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ ಮಾರ್ಚ್ 27ರಿಂದ ಚುನಾವಣೆ ಆರಂಭಗೊಳ್ಳಲಿದ್ದು, 8 ಹಂತಗಳಲ್ಲಿ ಚುನಾವಣೆ ನಡೆಯಲಿದೆ.