'ಪಶ್ಚಿಮ ಬಂಗಾಳ ರಾಜ್ಯಪಾಲ ಧಂಕರ್ ನಿವೃತ್ತರಾದ ಬಳಿಕ ಜೈಲಿಗಟ್ಟಬಹುದು'- ಟಿಎಂಸಿ ಸಂಸದ
ಕೋಲ್ಕತ್ತಾ, ಮೇ 24: ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಶ್ ಧಂಕರ್ ಮತ್ತು ಟಿಎಂಸಿ ಸರ್ಕಾರದ ನಡುವಿನ ಸಂಘರ್ಷ ಮುಂದುವರೆದಿದೆ. ಈ ನಡುವೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ, ರಾಜ್ಯದಾದ್ಯಂತ ತೃಣಮೂಲ ಕಾಂಗ್ರೆಸ್ ಬೆಂಬಲಿಗರು ರಾಜ್ಯಪಾಲರ ವಿರುದ್ಧ ದೂರು ಸಲ್ಲಿಸುವಂತೆ ಒತ್ತಾಯಿಸಿದ್ದಾರೆ. ಹಾಗೆಯೇ ಈ ರೀತಿ ದೂರು ನೀಡುವುದರಿಂದ ರಾಜ್ಯಪಾಲ ಜಗದೀಶ್ ಧಂಕರ್ ನಿವೃತ್ತರಾದ ಬಳಿಕ ಧಂಕರ್ನನ್ನು ಜೈಲಿಗಟ್ಟಬಹುದು ಎಂದು ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಹೇಳಿದ್ದಾರೆ.
ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಲ್ಯಾಣ್ ಬ್ಯಾನರ್ಜಿ, ನಾರದ ಸ್ಟಿಂಗ್ ಕಾರ್ಯಾಚರಣೆ ಪ್ರಕರಣದಲ್ಲಿ ಮೂವರು ಟಿಎಂಸಿ ನಾಯಕರಾದ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ ಮತ್ತು ಮದನ್ ಮಿತ್ರ ಹಾಗೂ ಕೋಲ್ಕತ್ತಾದ ಮಾಜಿ ಮೇಯರ್ ಸೋವನ್ ಚಟರ್ಜಿಯನ್ನು ರಾಜ್ಯಪಾಲ ಜಗದೀಶ್ ಧಂಕರ್ ಆಜ್ಞೆಯ ಮೇರೆಗೆ ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.
"ಸೀತೆಗೆ ಅವಮಾನ"; ತೃಣಮೂಲ ಕಾಂಗ್ರೆಸ್ ಸಂಸದನ ಮೇಲೆ ದೂರು ದಾಖಲು
ಪಶ್ಚಿಮ ಬಂಗಾಳ ರಾಜ್ಯಪಾಲರು ನಾರದ ಪ್ರಕರಣವನ್ನು ನೇರವಾಗಿ ಸಿಬಿಐಗೆ ವರ್ಗಾಯಿಸಿದ್ದಾರೆ, ಇದು ಸಂವಿಧಾನ ಬಾಹಿರ ಎಂದು ಹೇಳಿರುವ ಕಲ್ಯಾಣ್ ಬ್ಯಾನರ್ಜಿ, ರಾಜ್ಯಪಾಲರ ವಿರುದ್ದ ಜನರು ದೂರು ದಾಖಲು ಮಾಡಬೇಕು. ಇದರಿಂದಾಗಿ ರಾಜ್ಯಪಾಲರ ನಿವೃತ್ತಿ ಬಳಿಕ ಅವರನ್ನು ಜೈಲಿಗಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಹೇಳಿದ್ದಿಷ್ಟು..
"ರಾಜ್ಯಪಾಲರ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಹೂಡಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ. ಆದರೆ ರಾಜ್ಯಪಾಲರು ಹಿಂಸಾಚಾರವನ್ನು ಪ್ರಚೋದಿಸಿದ, ಧರ್ಮ ತಾರತಮ್ಯ ಮಾಡಿದ ಕುರಿತು ಪೊಲೀಸ್ ಠಾಣೆಗಳಲ್ಲಿ ದೂರು ನೀಡುವಂತೆ ನಾನು ಪ್ರತಿಯೊಬ್ಬರಿಗೂ ವಿನಂತಿಸುತ್ತೇನೆ. ಇದರಿಂದಾಗಿ ಜಗದೀಪ್ ಧಂಕರ್ ನಿವೃತ್ತರಾದ ಬಳಿಕ ನಮ್ಮ ಐವರು ನಾಯಕರನ್ನು ಕಳುಹಿಸಿದ ಪ್ರೆಸಿಡೆನ್ಸಿ ಜೈಲಿಗೆ ಧಂಕರ್ರನ್ನು ಕೂಡಾ ಹಾಕಬಹುದು ಎಂದು ಸಂಸದ ಕಲ್ಯಾಣ್ ಜನರಲ್ಲಿ ವಿನಂತಿ ಮಾಡಿದ್ದಾರೆ.
ನನಗೆ ದಿಗ್ಭ್ರಮೆಯಾಗಿದೆ ಎಂದ ಜಗದೀಶ್ ಧಂಕರ್
ಇನ್ನು ಟಿಎಂಸಿ ಸಂಸದರ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಧಂಕರ್, ಹಿರಿಯ ಸಂಸದರು, ಹಿರಿಯ ವಕೀಲರಾಗಿರುವ ಕಲ್ಯಾಣ್ ಬ್ಯಾನರ್ಜಿ ಹೇಳಿಕೆ ನೋಡಿ ದಿಗ್ಭ್ರಮೆಯಾಗಿದೆ ಎಂದು ಹೇಳಿದ್ದಾರೆ.
ದೀದಿ ಇಲ್ಲದೆ ಬದುಕಲಾಗದು - ಮತ್ತೆ ಟಿಎಂಸಿ ಸೇರ್ಪಡೆಗೆ ಬಿಜೆಪಿಯ ಸೋನಾಲಿ ಒಲವು
ಈ ಬಗ್ಗೆ ಟ್ವೀಟ್ ಮಾಡಿರುವ ಧಂಕರ್, ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಹಿರಿಯ ವ್ಯಕ್ತಿಯಾದ, ಹಿರಿಯ ಸಂಸದರಾದ ಅಷ್ಟೇ ಅಲ್ಲದೇ ಹಿರಿಯ ವಕೀಲರು ಆದ ಕಲ್ಯಾಣ್ ಬ್ಯಾನರ್ಜಿ ಹೇಳಿಕೆ ನೋಡಿ ನಾನು ದಿಗ್ಭ್ರಮೆಗೊಂಡಿದ್ದೇನೆ. ಆದರೆ ನಾನು ಈ ವಿಚಾರವನ್ನು ಪಶ್ಚಿಮ ಬಂಗಾಳದ ಸುಸಂಸ್ಕೃತ ಜನರು ಹಾಗೂ ಮಾಧ್ಯಮಗಳ ವಿವೇಚನೆಗೆ ಬಿಡುತ್ತೇನೆ ಎಂದು ಹೇಳಿದ್ದಾರೆ.
ನಾರದ ಪ್ರಕರಣ
ನಾರದ ಸ್ಟಿಂಗ್ ಕಾರ್ಯಾಚರಣೆಯನ್ನು ನಾರದ ಸುದ್ದಿ ಸಂಸ್ಥಾಪಕ ಮ್ಯಾಥ್ಯೂ ಸ್ಯಾಮ್ಯುಯೆಲ್ ಪಶ್ಚಿಮ ಬಂಗಾಳದಲ್ಲಿ ನಡೆಸಿದೆ. ಈ ಸುದ್ದಿ ಸಂಸ್ಥೆಯು ಲಂಚ ಸ್ವೀಕಾರದ ಆರೋಪದಲ್ಲಿ ಮೂವರು ಟಿಎಂಸಿ ನಾಯಕರಾದ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ ಮತ್ತು ಮದನ್ ಮಿತ್ರ ಹಾಗೂ ಕೋಲ್ಕತ್ತಾದ ಮಾಜಿ ಮೇಯರ್ ಸೋವನ್ ಚಟರ್ಜಿಯ ಮೇಲೆ ಸ್ಟಿಂಗ್ ಆಪರೇಷನ್ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗೆ ಈ ನಾಲ್ವರು ಆರೋಪಿಗಳನ್ನು ಸಿಬಿಐ ಬಂಧಿಸಿದೆ. ಬಳಿಕ ಕೋಲ್ಕತ್ತಾ ಹೈಕೋರ್ಟ್ ನಾಲ್ವರಿಗೂ ಗೃಹ ಬಂಧನ ವಿಧಿಸಿ ಆದೇಶಿಸಿದೆ. ಕೋಲ್ಕತ್ತಾ ಹೈಕೋರ್ಟ್ನ ಈ ಆದೇಶ ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ನಾರದ ಪ್ರಕರಣ- ಟಿಎಂಸಿ ನಾಯಕರ ಗೃಹಬಂಧನಕ್ಕೆ ಕೊಲ್ಕತ್ತಾ ಹೈಕೋರ್ಟ್ ಆದೇಶ
ಸಂಪೂರ್ಣ ಅರಾಜಕತೆ ಸೃಷ್ಟಿಯಾಗಿದೆ ಎಂದಿದ್ದ ಜಗದೀಪ್ ಧಂಕರ್
ನಾರದ ಸ್ಟಿಂಗ್ ಕಾರ್ಯಾಚರಣೆಗೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಸಚಿವರು ಮತ್ತು ಇತರರನ್ನು ಬಂಧಿಸಿದ ಬಳಿಕ ಪಶ್ಚಿಮ ಬಂಗಾಳದ ಸಿಬಿಐ ಕಚೇರಿಯ ಹೊರಗೆ ಟಿಎಂಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಟಿಎಂಸಿ ಕಾರ್ಯಕರ್ತರ ಈ ನಡೆಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದ ರಾಜ್ಯಪಾಲ ಜಗದೀಪ್ ಧಂಕರ್, ಸಂಪೂರ್ಣ ಅರಾಜಕತೆ ಸೃಷ್ಟಿಯಾಗಿದೆ ಎಂದು ಹೇಳಿದ್ದರು. ಹಾಗೆಯೇ ಈ ಪರಿಸ್ಥಿತಿ ನಿಯಂತ್ರಿಸುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸೂಚಿಸಿದ್ದರು. ಅಲ್ಲದೆ ಪೊಲೀಸರು ಮೌನವಾಗಿದ್ದು ಪ್ರತಿಭಟನಾಕಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು.