ತೃಣಮೂಲ ಕಾಂಗ್ರೆಸ್ ಈಗ ಮಮತಾ ಕೈಯಲ್ಲಿಲ್ಲ: ಶಾಸಕ ಮಿಹಿರ್
ಕೊಲ್ಕತ್ತ, ನವೆಂಬರ್ 18: ತೃಣಮೂಲ ಕಾಂಗ್ರೆಸ್ ಈಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಕೈಯಲ್ಲಿಲ್ಲ ಎಂದು ಶಾಸಕ ಮಿಹಿರ್ ಗೋಸ್ವಾಮಿ ಹೇಳಿದ್ದಾರೆ. ಪಕ್ಷವೇ ಬ್ಯಾನರ್ಜಿಯವರ ಬಳಿ ಇಲ್ಲದ ಕಾರಣ ಆ ಪಕ್ಷದಲ್ಲಿ ಇನ್ನು ಇರಲು ಸಾಧ್ಯವಿಲ್ಲ ಎಂದು ಮಿಹಿರ್ ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ನ ಶಾಸಕರಾಗಿದ್ದ ಮಿಹಿರ್ ಗೋಸ್ವಾಮಿಯವರು ಹಠಾತ್ತನೆ ಪಕ್ಷದಿಂದ ಹೊರನಡೆದಿದ್ದು ಹಾಗೂ ನಂತರ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಆರೋಪ ವ್ಯಾಪಕವಾಗಿ ಸುದ್ದಿಯಾಗಿದೆ.
ಉಪಚುನಾವಣೆ, ಬಿಹಾರ ಚುನಾವಣೆ ಯಶಸ್ವಿ: ಅಮಿತ್ ಶಾ ಮುಂದಿನ ಸ್ಟೇಷನ್ ಪಶ್ಚಿಮ ಬಂಗಾಳ
ಕಳೆದ 30 ವರ್ಷಗಳಿಂದ ಮಮತಾ ಬ್ಯಾನರ್ಜಿಯವರ ಜೊತೆಗಿದ್ದೆ. 1998ರಲ್ಲಿ ಟಿಎಂಸಿ ಸ್ಥಾಪನೆಯಾದಾಗಿನಿಂದ ಅವರ ಜೊತೆ ಗುರುತಿಸಿಕೊಂಡಿದ್ದೇನೆ, ಇದೀಗ ಅನಿವಾರ್ಯವಾಗಿ ಹೊರನಡೆಯಬೇಕಾಗಿ ಬಂದಿದೆ ಎಂದು ಕೂಚ್ ಬೆಹರ್ ದಕ್ಷಿಣ್ ಶಾಸಕರಾಗಿರುವ ಮಿಹಿರ್ ಗೋಸ್ವಾಮಿ ಹೇಳಿದ್ದಾರೆ.
ಟಿಎಂಸಿಯೊಳಗೆ ಇದ್ದುಕೊಂಡು ಸಾಕಷ್ಟು ಅವಮಾನಗಳನ್ನು ಸಹಿಸಿಕೊಂಡಿದ್ದೇನೆ, ಅವೆಲ್ಲವನ್ನೂ ಸಹಿಸಿಕೊಂಡಿದ್ದು ಒಂದೇ ಕಾರಣಕ್ಕೆ ಅದು ದೀದಿಯವರಿಗೋಸ್ಕರ, ಆದರೆ ಇನ್ನು ಸಾಧ್ಯವಿಲ್ಲ, ಟಿಎಂಸಿ ಆಡಳಿತ ಈಗ ಅವರ ಕೈಯಲ್ಲಿ, ಅವರ ನಿಯಂತ್ರಣದಲ್ಲಿ ಉಳಿದಿಲ್ಲ. ಹೀಗಾಗಿ ಅದು ನನ್ನ ಪಕ್ಷವಾಗುವುದಿಲ್ಲ, ಅಲ್ಲಿರುವುದರಲ್ಲಿ ಅರ್ಥವಿಲ್ಲ ಎಂದು ಹೊರನಡೆದಿದ್ದೇನ ಎಂದು ಸೋಷಿಯಲ್ ಮೀಡಿಯಾದಲ್ಲಿ ಮಿಹಿರ್ ಗೋಸ್ವಾಮಿ ಬರೆದುಕೊಂಡಿದ್ದಾರೆ.
ಪಕ್ಷದ ಎಲ್ಲಾ ಸಂಘಟನಾತ್ಮಕ ಹುದ್ದೆಗಳಿಂದ ಹೊರಬರುವುದಾಗಿ ತೀರ್ಮಾನಿಸಿ ಘೋಷಿಸಿದ ಆರು ವಾರಗಳ ನಂತರವೂ ತಮಗೆ ಯಾವುದೇ ಫೋನ್ ಕರೆ ಮಮತಾ ಬ್ಯಾನರ್ಜಿಯವರಿಂದ ಬಂದಿಲ್ಲ, ಪಕ್ಷದಿಂದ ಯಾವುದೇ ಅಮಾನತು, ಹೊರಹಾಕುವ ಆದೇಶ ಕೂಡ ಬಂದಿಲ್ಲ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.