ಟಿಎಂಸಿ ಎಂಎಲ್ಎ ಸತ್ಯಜಿತ್ ಬಿಸ್ವಾಸ್ ಗುಂಡಿಟ್ಟು ಬರ್ಬರ ಹತ್ಯೆ
ಕೋಲ್ಕತಾ, ಫೆಬ್ರವರಿ 09 : ತೃಣಮೂಲ ಕಾಂಗ್ರೆಸ್ ಶಾಸಕ ಸತ್ಯಜಿತ್ ಬಿಸ್ವಾಸ್ ಅವರನ್ನು ಪಶ್ಚಿಮ ಬಂಗಾಳದ ಫುಲ್ಬರಿಯಲ್ಲಿ ಗುಂಡಿಟ್ಟು ಶನಿವಾರ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ನಾದಿಯಾ ಜಿಲ್ಲೆಯ ಫುಲ್ಬರಿಯಲ್ಲಿ ಅಪರಿಚಿತರು ಗುಂಡಿಟ್ಟು ಪರಾರಿಯಾಗಿದ್ದಾರೆ. ಅವರನ್ನು ಕೊಲೆ ಮಾಡಿದ ಸ್ಥಳದಲ್ಲಿ ರಿವಾಲ್ವರನ್ನು ವಶ ಪಡಿಸಿಕೊಳ್ಳಲಾಗಿದೆ.
ಸತ್ಯಜಿತ್ ಬಿಸ್ವಾಸ್ ಅವರು ಸರಸ್ವತಿ ಪೂಜೆಯನ್ನು ಉದ್ಘಾಟನೆ ಮಾಡಿ ವಾಪಸ್ ಬರುತ್ತಿದ್ದಾಗ ಈ ಹತ್ಯೆ ಮಾಡಲಾಗಿದೆ. ಅವರು ಪೂಜೆಯ ನಂತರ ವೇದಿಕೆಯಿಂದ ಇಳಿಯುತ್ತಿದ್ದಾಗ ಅತೀ ಹತ್ತಿರದಿಂದ ಗುಂಡಿನ ಸುರಿಮಳೆಗರೆಯಲಾಗಿದೆ.
ಸತ್ಯಜಿತ್ ಅವರು ಕೃಷ್ಣಗಂಜ್ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಎರಡು ಬಾರಿ ವಿಜೇತರಾಗಿದ್ದರು. ಈ ಹತ್ಯೆಗಾಗಿ ಬಿಜೆಪಿಯ ಮುಕುಲ್ ರಾಯ್ ಮೇಲೆ ಟಿಎಂಸಿ ಆರೋಪ ಹೊರಿಸಿದೆ. ಆದರೆ ಈ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ.
ನಾದಿಯಾ ಜಿಲ್ಲೆ ಬಾಂಗ್ಲಾದೇಶದ ಗಡಿಯ ಬಳಿಯಿದ್ದು, ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ತನ್ನ ನೆಲೆ ಕಂಡುಕೊಳ್ಳುತ್ತಿದೆ. ಸತ್ಯಜಿತ್ ಬಿಸ್ವಾಸ್ ಅವರು ಜನಪ್ರಿಯ ನಾಯಕರಾಗಿ ಗುರುತಿಸಿಕೊಂಡಿದ್ದು, ಇತ್ತೀಚೆಗೆ ಹಸೆಮಣೆಯೇರಿದ್ದರು.
ಭತ್ತ ಕೊಳ್ಳುವಾಗ ನಡೆಯುತ್ತಿದ್ದ ಅವ್ಯವಹಾರದ ಬಗ್ಗೆ ಕೆಲ ದಿನಗಳ ಹಿಂದೆ ಸತ್ಯಜಿತ್ ಬಿಸ್ವಾಸ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.